Chandrayaan-3: ‘ಚಂದ್ರಯಾನ-3’ ಅವತಾರದಲ್ಲಿ ವಿಘ್ನ ನಿವಾರಕ ಗಣೇಶ
ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದ್ದು, ಗಲ್ಲಿ ಗಲ್ಲಿಯಲ್ಲೂ ವಿನಾಯಕನಿಗೆ ನಮಿಸಿದ್ದಾರೆ ಭಾರತೀಯರು. ಅದರಲ್ಲೂ ಗಣೇಶ ಹಬ್ಬ ಬಂತು ಅಂದರೆ ವೆರೈಟಿ ವೆರೈಟಿ ಪೆಂಡಾಲ್ ಹಾಕುವುದು ವಾಡಿಕೆ. ಕಳೆದ ವರ್ಷವು ಕೆಜಿಎಫ್, ಜೇಮ್ಸ್ ಗಣಪ ಸೇರಿ ಹಲವು ಸಿನಿಮಾ ಕಲ್ಪನೆಯಲ್ಲಿ ಹಬ್ಬ ನಡೆದಿತ್ತು. ಈ ಬಾರಿ ಚಂದ್ರಯಾನದ ಸದ್ದು ಮೊಳಗಿದ್ದು, ವಿನಾಯಕನ ಮೂರ್ತಿಗಳು ಕೂಡ ಚಂದ್ರಯಾನದ ಕಲ್ಪನೆಯಲ್ಲಿ ಕಂಗೊಳಿಸಿವೆ.
ಅಂದಹಾಗೆ ದೇಶದ ವಿವಿಧೆಡೆ 'ಚಂದ್ರಯಾನ-3' ಕಲ್ಪನೆಯಲ್ಲಿ ಗಣೇಶ ಮೂರ್ತಿಗಳನ್ನು ರೂಪಿಸಲಾಗಿತ್ತು. ಪೆಂಡಾಲ್ ಹಾಗೂ ಗಣೇಶ ಮೂರ್ತಿಗಳು 'ಚಂದ್ರಯಾನ-3' ಯಶಸ್ಸು ಸಾರಿ ಹೇಳಿವೆ. ಈ ಮೂಲಕ ಭಾರತ ಬಾಹ್ಯಾಕಾಶ ಲೋಕದಲ್ಲಿ ರೂಪಿಸಿದ ಇತಿಹಾಸದ ಬಗ್ಗೆ ಗಣೇಶ ಚತುರ್ಥಿ ಮೂಲಕವೂ ಸಾರಿ ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾ ಸೇರಿದಂತೆ ಕರ್ನಾಟಕದ ವಿವಿಧಡೆ 'ಚಂದ್ರಯಾನ-3' ಕಲ್ಪನೆಯಲ್ಲಿ ಗಣೇಶ ಮೂರ್ತಿಗಳ ರಚನೆ ಮಾಡಲಾಗಿದೆ. ಹಾಗೇ ವಿವಿಧ ರಾಜ್ಯಗಳಲ್ಲೂ 'ಚಂದ್ರಯಾನ-3'ರ ಪರಿಕಲ್ಪನೆ ಅಡಿಯಲ್ಲಿ ಹಬ್ಬ ಆಚರಿಸಲಾಗಿದೆ.

2019ರಲ್ಲೂ 'ಚಂದ್ರಯಾನ-2' ಗಣಪ!
ಭಾರತ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ಲ್ಯಾಂಡರ್ ಮತ್ತು ರೋವರ್ ಇಳಿಸುವಲ್ಲಿ ಈ ಬಾರಿ ಸಕ್ಸಸ್ ಆಗಿದೆ. ಆದ್ರೆ ಕಳೆದ ಬಾರಿ ಅಂದರೆ 2019ರಲ್ಲಿ ಲ್ಯಾಂಡರ್ ಇಳಿಸುವಾಗ ಸೋತಿತ್ತು. ಹೀಗಿದ್ದರೂ ಭಾರತ ತನ್ನ ಆರ್ಬಿಟರ್ ಅಂದರೆ ಉಪಗ್ರಹವನ್ನ ಚಂದ್ರನ ಸುತ್ತ ಸಂಶೋಧನೆಗೆ ನಿಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ 2019ರಲ್ಲಿ 'ಚಂದ್ರಯಾನ' ಗಣಪನ ಮೂರ್ತಿಗಳು ಸದ್ದು ಮಾಡಿದ್ದವು. ಈ ಬಾರಿ 'ಚಂದ್ರಯಾನ-3' ಯೋಜನೆಯ ಮೂಲಕ ಭಾರತ ಜಗತ್ತಿನ ಯಾವ ದೇಶವು ಮಾಡದ ಸಾಧನೆ ಮಾಡಿದ್ದು, ದೇಶದ ವಿವಿಧ ಭಾಗದಲ್ಲಿ 'ಚಂದ್ರಯಾನ-3' ಗಣೇಶ ಮೂರ್ತಿಗಳು ಕಂಗೊಳಿಸಿವೆ.

ಆಗಸ್ಟ್ 23ರಂದು ಇತಿಹಾಸ ನಿರ್ಮಾಣ
ಭಾರತದ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು.
LPDC, LHDAC ಜತೆ ಲೇಸರ್ ಆಲ್ಟಿಮೀಟರ್ (LASA) & ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್ ಜತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟಾದ ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನ ಜಗತ್ತಿನಲ್ಲೇ ಇದುವರೆಗೆ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಹೀಗಾಗಿ ಗಣೇಶ ಚತುರ್ಥಿಯಲ್ಲೂ ಭಾರತೀಯರು 'ಚಂದ್ರಯಾನ-3' ಯಶಸ್ಸನ್ನು ಮೆಲುಕು ಹಾಕಿ ಜೈ ಗಣೇಶ ಅಂತಿದ್ದಾರೆ.












Click it and Unblock the Notifications