ಯುವತಿ ಅಪಹರಣ ಯತ್ನ, ಹರ್ಯಾಣ ಬಿಜೆಪಿ ಅಧ್ಯಕ್ಷರ ಪುತ್ರ ಬಂಧನ
ಚಂಡೀಗಢ, ಆಗಸ್ಟ್ 9: ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 4ರಂದು ರಾತ್ರಿ 12.30 ನಿಮಿಷಕ್ಕೆ ಯುವತಿಯೊಬ್ಬಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಸಾಕ್ಷ್ಯ ಲಭ್ಯವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಸ್.ಯು.ವಿ ಕಾರಿನಲ್ಲಿ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಶ್ ಕುಮಾರ್ ಹರಿಯಾಣದ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದುರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿತ್ತು.

ತನ್ನನ್ನು ಹಿಂಬಾಲಿ ಬೆದರಿಕೆ ಹಾಕಿದ್ದಲ್ಲದೇ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ವರ್ಣಿಕಾ ಕುಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನಲೆಯಲ್ಲಿ ಅಪಹರಣ ಯತ್ನ ಪ್ರಕರಣವನ್ನು ವಿಕಾಸ್ ಬರಲಾ ಮೇಲೆ ಪೊಲೀಸರು ದಾಖಲಿಸಿಲ್ಲ.
ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದರೂ ಅದರಲ್ಲಿ ಎಲ್ಲೂ ಅಪಹರಣ ಯತ್ನದ ದೃಶ್ಯಾವಳಿಗಳು ಸಿಕ್ಕಿಲ್ಲ. ಜತೆಗೆ ಯುವತಿ ನೀಡಿದ ಹೇಳಿಕೆಯನ್ನೇ ನಂಬಲು ಪೊಲೀಸರೂ ಸಿದ್ದವಿಲ್ಲ. ಹೀಗಾಗಿ ಅಪಹರಣ ಹತ್ನ ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಪೊಲೀಸರಿದ್ದರು.

ಹೀಗಿದ್ದೂ ಇಂದು ವಿಚಾರಣೆಗೆ ಹಾಜರಾಗುವಂತೆ ವಿಕಾಸ್ ಬರಲಾಗೆ ಪೊಲೀಸರು ಸಮನ್ಸ್ ನೀಡಲು ಹೋಗಿದ್ದರು. ಸಮನ್ಸ್ ಸ್ವೀಕರಿಸದ ಹಿನ್ನಲೆಯಲ್ಲಿ ಅವರ ಮನೆಯ ಗೇಟಿಗೆ ಸಮನ್ಸ್ ಅಂಟಿಸಿ ಬಂದಿದ್ದರು.
ಎಲ್ಲಾ ಹೈಡ್ರಾಮಗಳ ನಂತರ ಇಂದು ವಿಚಾರಣೆಗೆ ಹಾಜರಾದ ವಿಕಾಸ್ ಬರಲಾರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.












Click it and Unblock the Notifications