ಕಾಶ್ಮೀರ ಸಮಸ್ಯೆಗೆ 'ಮಾತುಕತೆ'ಯ ಪರಿಹಾರಕ್ಕೆ ಮುಂದಾದ ಕೇಂದ್ರ
ನವದೆಹಲಿ, ಅಕ್ಟೋಬರ್ 23: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ತಾರಕಕ್ಕೇರುವ ಆಂತರಿಕ ಸಂಘರ್ಷಕ್ಕೆ ಮಾತುಕತೆ ಮೂಲಕ ಕೊನೆ ಹಾಡಲು ಕೇಂದ್ರ ಸರಕಾರ ಅಂತಿಮವಾಗಿ ತೀರ್ಮಾನಿಸಿದೆ.
ಸಶಸ್ತ್ರ ಹೋರಾಟದ ಮೂಲಕವೇ ಸಂಘರ್ಷಕ್ಕೆ ಕೊನೆ ಹಾಡಲು ತೀರ್ಮಾನಿಸಿದ್ದ ಕೇಂದ್ರ ಸರಕಾರ ತನ್ನ ಯೋಜನೆ ಫಲಕೊಡದ ಹಿನ್ನಲೆಯಲ್ಲಿ ಇದೀಗ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, "ಮಾಜಿ ಗುಪ್ತಚರ ಇಲಾಖೆ ನಿರ್ದೇಶಕ ದಿನೇಶ್ವರ್ ಶರ್ಮಾರನ್ನು ಮಾತುಕತೆಗೆ ಕೇಂದ್ರದ ಪ್ರತಿನಿಧಿಯಾಗಿ ನೇಮಿಸಲಾಗಿದೆ," ಎಂದು ಹೇಳಿದ್ದಾರೆ.
ಶರ್ಮಾ ಅಲ್ಲಿನ ಪ್ರಾದೇಶಿಕ ಪಕ್ಷಗಳು, ಚುನಾಯಿತ ಪ್ರತಿನಿಧಿಗಳು, ಸಂಘಟನೆಗಳು ಹಾಗೂ ಜನರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಹುರಿಯತ್ ಕಾನ್ಫರೆನ್ಸ್ ಜತೆಗೂ ಶರ್ಮಾ ಮಾತುಕತೆ ನಡೆಸಲಿದ್ದಾರಾ ಎಂಬ ಪ್ರಶ್ನಗೆ ಉತ್ತರಿಸಿದ ರಾಜನಾಥ್ ಸಿಂಗ್ 'ಆ ನಿರ್ಧಾರವನ್ನು ಶರ್ಮಾ ತೆಗೆದುಕೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆ ದಿನದಂದು ನೀಡದ ಭರವಸೆಯಂತೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
1979ರ ಬ್ಯಾಚ್ ನ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಶರ್ಮಾ 2014ರಿಂದ 2016ರವರೆಗೆ ಗುಪ್ತಚರ ಇಲಾಖೆ ನಿರ್ದೇಶಕರಾಗಿದ್ದರು.
ಮಾತುಕತೆಗೆ ಕೇಂದ್ರ ಸರ್ಕಾರ ಮುಂದಾಗುತ್ತಿದ್ದಂತೆ ಕಣಿವೆ ರಾಜ್ಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಈ ಮಾತುಕತೆ ಎಲ್ಲಿಗೆ ಮುಟ್ಟುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.











Click it and Unblock the Notifications