ಸೆರಮ್ ಲಸಿಕೆ ಪ್ರಯೋಗ ನಿಲ್ಲಿಸಲು ಕಾರಣವೇ ಇಲ್ಲ: ಕೇಂದ್ರ ಸರ್ಕಾರ
ನವದೆಹಲಿ, ಡಿಸೆಂಬರ್ 1: ಭಾರತದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ಲಸಿಕೆಯ ಪ್ರಯೋಗವನ್ನು ಸ್ಥಗಿತಗೊಳಿಸಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಕ್ಸ್ಫರ್ಡ್ ವಿವಿ-ಸೆರಮ್ ಸಂಸ್ಥೆ ಸಹಯೋಗದ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟ ತಮಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಾಗಿದೆ. ಹೀಗಾಗಿ ದೇಶದಲ್ಲಿ ಲಸಿಕೆ ಪ್ರಯೋಗ, ಉತ್ಪಾದನೆ ಮತ್ತು ಹಂಚಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಚೆನ್ನೈನ ಸ್ವಯಂ ಸೇವಕರೊಬ್ಬರು ಆರೋಪಿಸಿದ್ದರು. ಇದರ ಪರಿಶೀಲನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಲಸಿಕೆಯ ಪ್ರಯೋಗ ಅಬಾಧಿತ ಎಂದು ತಿಳಿಸಿದೆ.
'ಆರಂಭದ ಸಮಸ್ಯೆ ಪ್ರಕರಣದ ಪರಿಶೀಲನೆ ಬಳಿಕ ಸೆರಮ್ ಪ್ರಯೋಗವನ್ನು ಸ್ಥಗಿತಗೊಳಿಸುವ ಅಗತ್ಯ ಕಂಡುಬಂದಿಲ್ಲ. ಸೆರಮ್ ಸಂಸ್ಥೆಯ ಲಸಿಕೆಯು ಮೂರನೇ ಹಂತದ ಪ್ರಯೋಗ ಆರಂಭಿಸಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸೆರಮ್ ಸಂಸ್ಥೆಗೆ ಮೂರನೇ ಹಂತದ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ. ಭಾರತ್ ಬಯೋಟೆಕ್ ಸಂಸ್ಥೆಗೂ ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆಯು ಸುರಕ್ಷಿತ ಮತ್ತು ಹೆಚ್ಚು ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಪ್ರಯೋಗದಲ್ಲಿ ಭಾಗಿಯಾದ ಸ್ವಯಂಸೇವಕನ ಆರೋಗ್ಯ ಕೆಡುವುದಕ್ಕೆ ಲಸಿಕೆ ಕಾರಣವಲ್ಲ. ಸ್ವಯಂಸೇವಕನ ಆರೋಗ್ಯದ ಬಗ್ಗೆ ಸಹಾನುಭೂತಿ ಹೊಂದಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ. ಸೂಕ್ತ ಮಾರ್ಗಸೂಚಿಗಳ ಅಡಿಯಲ್ಲಿ ನೈತಿಕ ಕ್ರಮಗಳನ್ನು ಶ್ರದ್ಧೆಯಿಂದ ಕೈಗೊಳ್ಳುತ್ತೇವೆ ಎಂದು ಎಂದು ಸೆರಮ್ ತಿಳಿಸಿದೆ.
ಕೋವಿಶೀಲ್ಡ್ ಲಸಿಕೆ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಪ್ರಧಾನ ತನಿಖಾಧಿಕಾರಿ, ಡಿಎಸ್ಎಂಬಿ, ನೈತಿಕ ಸಮಿತಿಗೆ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮೋದನೆ ನಂತರದಲ್ಲಿಯೇ ನಾವು ಲಸಿಕೆ ಸಂಶೋಧನೆಯ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.












Click it and Unblock the Notifications