ಜಮ್ಮು- ಕಾಶ್ಮೀರದ ನಂತರ ಲಡಾಖ್ನಲ್ಲಿ ಸರ್ವಪಕ್ಷ ಸಭೆಗೆ ಕರೆ ನೀಡಿದ ಕೇಂದ್ರ
ಲಡಾಖ್, ಜೂನ್ 26: ಜಮ್ಮು ಕಾಶ್ಮೀರ ಆಡಳಿತ ಸಂಬಂಧ ಪ್ರಮುಖ ವಿಷಯಗಳ ಚರ್ಚೆಗೆ ಗುರುವಾರವಷ್ಟೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಈ ಸಭೆ ಬೆನ್ನಲ್ಲೇ ಕಾರ್ಗಿಲ್, ಲಡಾಖ್ ಕುರಿತ ಚರ್ಚೆಗೆ ಸರ್ವ ಪಕ್ಷಗಳಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಜುಲೈ 1ರಂದು ಸಭೆ ನಡೆಯಲಿರುವುದಾಗಿ ಕೇಂದ್ರ ಮಾಹಿತಿ ನೀಡಿದೆ.
ಮಾಜಿ ಸಂಸದರು ಹಾಗೂ ನಾಗರೀಕ ಸಮಾಜದ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದ್ದು, ಜುಲೈ 1ರ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅಧ್ಯಕ್ಷತೆಯಲ್ಲಿ, ಅವರ ನಿವಾಸದಲ್ಲಿ ಸಭೆ ನಡೆಯುವುದಾಗಿ ತಿಳಿದುಬಂದಿದೆ.

ನಾಲ್ಕು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಜಮ್ಮು ಹಾಗೂ ಕಾಶ್ಮೀರದ ಹದಿನಾಲ್ಕು ರಾಜಕೀಯ ಮುಖಂಡರೊಂದಿಗೆ ಪ್ರಧಾನಿ ಮೋದಿ ಗುರುವಾರ ಮೂರೂವರೆ ಗಂಟೆಗಳ ಕಾಲ ಸಭೆ ನಡೆಸಿದ್ದರು.
ಸಭೆ ನಂತರ ಜಮ್ಮು ಕಾಶ್ಮೀರ ಆಡಳಿತದ ಕುರಿತು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯ ಸ್ಥಾನಮಾನ ಪುನರ್ ಸ್ಥಾಪನೆ ಭರವಸೆ ನೀಡಲಾಗಿತ್ತು. "ಜಮ್ಮು ಹಾಗೂ ಕಾಶ್ಮೀರದಲ್ಲಿ ಸಕಲ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದೆ. ಜಮ್ಮು ಹಾಗೂ ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ. ಸಂಸತ್ತಿನಲ್ಲಿ ಭರವಸೆ ನೀಡಿದಂತೆ ಮರುವಿಂಗಡಣೆ ನಂತರ ಚುನಾವಣೆಗಳು ನಡೆಯಲಿದ್ದು, ಶಾಂತಿಯುತ ಚುನಾವಣೆಗಳು ರಾಜ್ಯದ ಸ್ಥಾನಮಾನವನ್ನು ಪುರನ್ ಸ್ಥಾಪಿಸಲು ಮೈಲುಗಲ್ಲುಗಳಾಗಿವೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು.
ಜಮ್ಮು ಕಾಶ್ಮೀರ ಸಭೆಯಲ್ಲಿ ಗುಪ್ಕರ್ ಮೈತ್ರಿಕೂಟದ ಉಲ್ಲೇಖದ ಕುರಿತು ಪ್ರತಿಕ್ರಿಯಿಸಿದ್ದ ಲಡಾಖ್ ಸಂಸದ ಜಮ್ಯಂಗ್ ನಮ್ಗ್ಯಾಲ್, "ಗುಪ್ಕರ್ ಮೈತ್ರಿಕೂಟಕ್ಕೆ ಲಡಾಖ್ ಜನರ ಪರವಾಗಿ ಮಾತನಾಡುವ ಹಕ್ಕು ಅಥವಾ ಅಧಿಕಾರವಿಲ್ಲ" ಎಂದಿದ್ದರು.
2019ರ ಆಗಸ್ಟ್ 18ರಂದು, ಲಡಾಖ್ನಲ್ಲಿನ ಪ್ರಮುಖ ನಾಯಕರು ಈ ಪ್ರದೇಶವನ್ನು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಬುಡಕಟ್ಟು ಪ್ರದೇಶ ಎಂದು ಘೋಷಿಸುವಂತೆ ಕೇಂದ್ರಕ್ಕೆ ತೀವ್ರ ಮನವಿ ಮಾಡಿದ್ದರು. ಸಂಸದ ನಮ್ಗ್ಯಾಲ್, ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ಪತ್ರ ಬರೆದು, ಲಡಾಖ್ ಬಹುಪಾಲು ಬುಡಕಟ್ಟು ಪ್ರದೇಶವಾಗಿದ್ದು, ಇಲ್ಲಿ 98% ಮಂದಿ ಬುಡಕಟ್ಟು ಜನಾಂಗದವರಿದ್ದಾರೆ. ಬುಡಕಟ್ಟು ಸಮುದಾಯದ ಅಸ್ಮಿತೆ, ಸಂಸ್ಕೃತಿ ಹಾಗೂ ಆರ್ಥಿಕತೆಯ ರಕ್ಷಣೆ ಅತಿಮುಖ್ಯವಾಗಿದೆ" ಎಂದು ಉಲ್ಲೇಖಿಸಿದ್ದರು.
ಲಡಾಖ್ ಆಡಳಿತದ ಕುರಿತು ಎಲ್ಲಾ ಆಯಾಮಗಳಿಂದಲೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.












Click it and Unblock the Notifications