ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮೂವರು ಭಾರತೀಯರು
ಬೆಂಗಳೂರು, ಡಿಸೆಂಬರ್ 29: ಬಾಹ್ಯಾಕಾಶದ ಅಂಗಳಕ್ಕೆ ಮಾನವರನ್ನು ಕಳುಹಿಸುವ ದೇಶದ ಮಹತ್ವಾಕಾಂಕ್ಷಿ ಯೋಜನೆ ನನಸಾಗುವ ದಿನಗಳು ಸಮೀಪಿಸುತ್ತಿವೆ.
ಮಾನವಸಹಿತ ಗಗನಯಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಸಂಪುಟ 10 ಸಾವಿರ ಕೋಟಿ ಅನುದಾನ ನೀಡಲು ಸಮ್ಮತಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಇದು ಭಾರತದ ಮೊದಲ ಮಾನವ ಗಗನಯಾತ್ರೆಯಾಗಲಿದೆ. ಈ ಯೋಜನೆ ಯಶಸ್ವಿಯಾದಲ್ಲಿ ರಷ್ಯಾ, ಅಮೆರಿಕ ಮತ್ತು ಚೀನಾ ಬಳಿಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲು ಪ್ರಕಟಿಸಿದ್ದರು. ಬಳಿಕ ಇಸ್ರೋ ಈ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ಆರಂಭಿಸಿತ್ತು.
|
ಅಂತರಿಕ್ಷಕ್ಕೆ ಮೂವರು
'ಗಗನಯಾನ್' ಯೋಜನೆಯು 2022ರಲ್ಲಿ ಜಾರಿಯಾಗಲಿದ್ದು, ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ಬಾಹ್ಯಾಕಾಶ ನೌಕೆಯಲ್ಲಿ ಭಾರತದ ಮೂವರು ಗಗನಯಾತ್ರಿಕರು ಒಂದು ವಾರದವರೆಗೆ ಅಂತರಿಕ್ಷದಲ್ಲಿ ಪ್ರಯಾಣಿಸಲಿದ್ದಾರೆ.
ಗಗನಯಾತ್ರಿಕರಿಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ 2ರಿಂದ 3 ವರ್ಷ ವಿವಿಧ ರೀತಿಯ ತರಬೇತಿ ನೀಡಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಗಗನಯಾನ ಹೇಗಿರಲಿದೆ?
7 ಟನ್ ತೂಕ, 3.4 ಮೀಟರ್ ಸುತ್ತಳತೆಯ ಆರ್ಬಿಟಲ್ ಮಾಡ್ಯೂಲ್ ಇರುವ ಜಿಎಸ್ ಎಲ್ ವಿ ಎಂಕೆ-3 ರಾಕೆಟ್ ಶ್ರೀಹರಿಕೋಟಾದಿಂದ ಗಗನಯಾತ್ರಿಕರನ್ನು ಹೊತ್ತುಕೊಂಡು ಉಡಾವಣೆಯಾಗಲಿದೆ.
ಈ ನೌಕೆಯು ಉಡಾವಣೆಗೊಂಡ 16 ನಿಮಿಷದಲ್ಲಿ ಭೂಮಿಯ ಕೆಳ ಕಕ್ಷೆಯನ್ನು (300-400 ಕಿ.ಮೀ. ಎತ್ತರ) ಸೇರಲಿದೆ.
ಬಾಹ್ಯಾಕಾಶದಲ್ಲಿ 5 ರಿಂದ 7 ದಿನ ಕಳೆಯುವ ಗಗನಯಾತ್ರಿಕರು ಅಲ್ಲಿ ಅಧ್ಯಯನ ನಡೆಸಲಿದ್ದಾರೆ. ಬಳಿಕ ತನ್ನ ಚಲನೆಯ ಪಥ ಬದಲಿಸಿ ಭೂಮಿ ಕಡೆಗೆ ನೌಕೆ ಮರಳಲಿದೆ.
ಭೂಮಿಯಿಂದ 120 ಕಿ.ಮೀ. ಎತ್ತರದಲ್ಲಿದ್ದಾಗಲೇ ನೌಕೆಯಿಂದ ಗಗನಯಾತ್ರಿಕರು ಪ್ಯಾರಚೂಟ್ ಮೂಲಕ ಜಿಗಿಯಲಿದ್ದಾರೆ. ಗುಜರಾತ್ನ ಅರಬ್ಬಿ ಸಮುದ್ರದಲ್ಲಿ ಗಗನಯಾತ್ರಿಕರು ಇಳಿಯಲಿದ್ದು, ಅವರನ್ನು ಭದ್ರತಾ ಪಡೆ ರಕ್ಷಿಸಲಿದೆ.

ಹತ್ತು ವಿವಿಧ ಪ್ರಯೋಗಗಳು
ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ ಇಸ್ರೋ ಅನೇಕ ಪ್ರಯೋಗಗಳನ್ನು ನಡೆಸಲಿದೆ. ಜೈವಿಕ ವಾಯು ಫಿಲ್ಟರ್ಗಳು ಮತ್ತು ಬಯೋಸೆನ್ಸರ್ ಗಳಂತಹ ಮೈಕ್ರೋ ಬಯಾಲಾಜಿಕಲ್ ಪ್ರಯೋಗಗಳಿಗೆ ವೈದ್ಯಕೀಯ ಸಾಧನಗಳನ್ನು ಪರೀಕ್ಷೆ ನಡೆಸುವುದು, ಜೀವ ರಕ್ಷಕ ಸಾಧನ ಮತ್ತು ವಿಷಕಾರಿ ಗಾಳಿಯನ್ನು ಎದುರಿಸಲು ಜೀವವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕನಿಷ್ಠ 10 ಪ್ರಯೋಗಗಳನ್ನು ನಡೆಸಲಾಗುತ್ತದೆ.

ಮಾನವ ರಹಿತ ರಾಕೆಟ್
2020ರ ಡಿಸೆಂಬರ್ನಲ್ಲಿ ಮಾನವ ರಹಿತವಾಗಿ ಪರೀಕ್ಷಾರ್ಥ ರಾಕೆಟ್ ಉಡಾವಣೆಗೊಳ್ಳಲಿದೆ. 2021ರ ಜುಲೈ ಮತ್ತೊಂದು ಮಾನವ ರಹಿತ ಪರೀಕ್ಷಾರ್ಥ ರಾಕೆಟ್ ಅನ್ನು ಉಡಾವಣೆ ಮಾಡಲಾಗುತ್ತದೆ. 2021ರ ಡಿಸೆಂಬರ್ನಲ್ಲಿ ಮಾನವ ಸಹಿತ ರಾಕೆಟ್ ಉಡಾವಣೆಯಾಗಲಿದೆ.
2004ರಲ್ಲಿ ಯೋಜನೆಗಾಗಿ ತಯಾರಿ ಆರಂಭವಾಗಿತ್ತು. ಇಸ್ರೋ ಈ ಯೋಜನೆಗೆ ಇದುವರೆಗೂ 173 ಕೋಟಿ ರೂ ವೆಚ್ಚ ಮಾಡಿದೆ. ಈ ಯೋಜನೆಯಿಂದ 15 ಸಾವಿರ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.












Click it and Unblock the Notifications