ಇಸ್ರೋ ಸಿಬ್ಬಂದಿಗೆ ಮತ್ತೊಂದು ಆಘಾತ ನೀಡಿದ ಕೇಂದ್ರ ಸರ್ಕಾರ
Recommended Video
ನವದೆಹಲಿ, ಸೆಪ್ಟೆಂಬರ್ 10: ಚಂದ್ರಯಾನ-2 ಯೋಜನೆಯಲ್ಲಿ ವಿಫಲವಾಗದಿದ್ದರೂ ಭಾಗಶಃ ಹಿನ್ನಡೆ ಅನುಭವಿಸಿದ ಬೇಸರದಲ್ಲಿರುವ ಇಸ್ರೋದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಇಸ್ರೋದ ಹಿರಿಯ ಸಿಬ್ಬಂದಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ಭತ್ಯೆಗಳಿಗೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು ಸೇರಿದಂತೆ ಸಾವಿರಾರು ಸಿಬ್ಬಂದಿ ವೇತನ ಕಡಿತಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದಾದ್ಯಂತ ಇರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿವಿಧ ಶ್ರೇಣಿಯ ಸಿಬ್ಬಂದಿಯಲ್ಲಿ ಅಸಮಾಧಾನ ಉಂಟಾಗಿದೆ. ವೇತನ ಕಡಿತದ ನಿರ್ಣಯದ ವಿರುದ್ಧ ವಿಜ್ಞಾನಿಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇಸ್ರೋದ ಶೇ 90ರಷ್ಟು ಸಿಬ್ಬಂದಿ ತಿಂಗಳಿಗೆ 10 ಸಾವಿರ ರೂ.,ವರೆಗೂ ವೇತನ ಕಡಿತ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಮೋತಿಲಾಲ್ ವೋರಾ ಅವರು ಜುಲೈ 30ರಂದು ಸಂಸತ್ನಲ್ಲಿ ಧ್ವನಿ ಎತ್ತಿದ್ದರು.

ಚಂದ್ರಯಾನಕ್ಕೂ ಮೊದಲಿನ ನಿರ್ಧಾರ
ಈ ನಿರ್ಧಾರವನ್ನು ಕೇಂದ್ರ ಸರ್ಕಾರವು ಚಂದ್ರಯಾನ-2 ಯೋಜನೆಯ ಉಡಾವಣೆಗೂ ಮುನ್ನವೇ ತೆಗೆದುಕೊಂಡಿತ್ತು ಎಂದು ವರದಿಯಾಗಿದೆ. ಜೂನ್ 12ರಂದು ಬಾಹ್ಯಾಕಾಶ ಇಲಾಖೆಯ ಉಪ ಕಾರ್ಯದರ್ಶಿ ಎಂ ರಾಮದಾಸ್ ಅವರ ಸಹಿಯೊಂದಿಗೆ ಹೊರಡಿಸಿರುವ ಕಚೇರಿ ಸೂಚನೆ ಅನ್ವಯ ಎಸ್ಡಿ, ಎಸ್ಇ, ಎಸ್ಎಫ್ ಮತ್ತು ಎಸ್ಜಿ ಶ್ರೇಣಿಯ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ನೀಡಲಾಗಿದ್ದ ಎರಡು ಹೆಚ್ಚುವರಿ ಭತ್ಯೆಯನ್ನು 2019ರ ಜುಲೈ 1ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಿದೆ.

ಹೆಚ್ಚುವರಿ ಭತ್ಯೆ ಕಡಿತಕ್ಕೆ ಸೂಚನೆ
ಬಾಹ್ಯಾಕಾಶ ಇಲಾಖೆಯ (ಡಿಓಎಸ್) ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ಶೇ 40ರಷ್ಟು ಮೂಲ ವೇತನದವರೆಗೆ ಪ್ರದರ್ಶನ ಆಧಾರಿತ ಉತ್ತೇಜನ ಯೋಜನೆ (ಪಿಆರ್ಐಎಸ್) ಜಾರಿ ಮತ್ತು ಆರನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಜಾರಿ ಕಾರಣ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ನೀಡುತ್ತಿರುವ ಎರಡು ಹೆಚ್ಚುವರಿ ಭತ್ಯೆ ಹೆಚ್ಚಳದ ರೂಪದಲ್ಲಿನ ಉತ್ತೇಜಕಗಳನ್ನು ಸ್ಥಗಿತಗೊಳಿಸಲು ಡಿಓಎಸ್ಗೆ ಸಲಹೆ ನೀಡಲಾಗಿದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಜುಲೈ 1ರಿಂದಲೇ ಜಾರಿ
1996ರಲ್ಲಿ ಬಾಹ್ಯಾಕಾಶ ಇಲಾಖೆಯ ಎಸ್ಡಿ ಮತ್ತು ಎಸ್ಜಿ ಶ್ರೇಣಿಯ ಸಿಬ್ಬಂದಿಗೆ ಎರಡು ಹೆಚ್ಚುವರಿ ಇಂಕ್ರಿಮೆಂಟ್ಗಳನ್ನು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದರಂತೆ ವೇತನ ಮಟ್ಟವು 10,000-15,200, 12,000-16,500, 14,300-18,300 ಮತ್ತು 16,400-20,000ದಷ್ಟು ಏರಿಕೆಯಾಗಿತ್ತು. ಆದರೆ, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಸಲಹೆಯ ಹಿನ್ನೆಲೆಯಲ್ಲಿ 2019ರ ಜುಲೈ 1ರಿಂದ ಈ ಇನ್ಸೆಂಟಿವ್ ಪಾವತಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅದು ಹೇಳಿದೆ.

ಶಿವನ್ ಮಧ್ಯಪ್ರವೇಶಕ್ಕೆ ಕೋರಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಬಾಹ್ಯಾಕಾಶ ಎಂಜಿನಿಯರ್ಗಳ ಸಂಸ್ಥೆಯ (ಎಸ್ಇಎ) ಪ್ರಧಾನ ಕಾರ್ಯದರ್ಶಿ ಕೆ ಸಂತೋಷ್ ಕುಮಾರ್, 'ಇದು ಆಂತರಿಕ ವಿಚಾರ' ಎಂದು ತಿಳಿಸಿದ್ದಾರೆ.
ಆದರೆ ಎಸ್ಇಎ ಇಸ್ರೋದ ಅಧ್ಯಕ್ಷ ಕೆ ಶಿವನ್ ಅವರಿಗೆ ಮನವಿ ಸಲ್ಲಿಸಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ತನ್ನ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಮಧ್ಯಪ್ರವೇಶ ಮಾಡುವಂತೆ ಅವರನ್ನು ಕೋರಿದೆ ಎನ್ನಲಾಗಿದೆ.












Click it and Unblock the Notifications