Vishwakarma Scheme: ಶೇ 5ರ ಬಡ್ಡಿ ದರದಲ್ಲಿ 1 ಲಕ್ಷದ ವರಗೆ ಸುಲಭ ಸಾಲ - ಪಿಎಂ ವಿಶ್ವಕರ್ಮ ಯೋಜನೆ
ನವದೆಹಲಿ, ಆಗಸ್ಟ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) 'ಪಿಎಂ ವಿಶ್ವಕರ್ಮ' ಯೋಜನೆಗೆ ಒಪ್ಪಿಗೆ ನೀಡಿದೆ. ಶೇ 5ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ.
ಬುಧವಾರ ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನರೇಂದ್ರ ಮೋದಿ 'ಪಿಎಂ ವಿಶ್ವಕರ್ಮ' ಯೋಜನೆ ಘೋಷಣೆ ಮಾಡಿದ್ದರು.

ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ, "ವಿಶ್ವಕರ್ಮ ಜಯಂತಿಯಂದು ಈ ಯೋಜನೆಯನ್ನು ನಾವು ಘೋಷಣೆ ಮಾಡಲಿದ್ದೇವೆ. ಈ ಯೋಜನೆ ಕೌಶಲಯುಕ್ತ, ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮುಖ್ಯವಾಗಿ ಇತರೆ ಹಿಂದುಳಿದ ವರ್ಗಗಳ ಸಮುದಾಯದವರಿಗೆ ನೆರವಾಗಲಿದೆ" ಎಂದು ಹೇಳಿದ್ದರು.
ಪಿಎಂ ವಿಶ್ವಕರ್ಮ ಯೋಜನೆ; 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಕೇಂದ್ರ ಸರ್ಕಾರ 'ಪಿಎಂ ವಿಶ್ವಕರ್ಮ ಯೋಜನೆ' ಘೋಷಣೆ ಮಾಡಿದೆ. ಈ ಯೋಜನೆಯಿಂದ ಸುಮಾರು 30 ಲಕ್ಷ ಕರಕುಶಲ ಕರ್ಮಿಗಳು ಮತ್ತು ಅವರ ಕುಟುಂಬದವರಿಗೆ ಸಹಾಯಕವಾಗಲಿದೆ. ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆ ಇದಾಗಿದೆ.
ಯೋಜನೆಗಾಗಿಯೇ 2028ರ ತನಕ 13,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ 18 ಸಾಂಪ್ರದಾಯಿಕ ಕರಕುಶಲ ಕರ್ಮಿಗಳು ಯೋಜನೆಯಡಿ ಸಾಲ ಸೌಲಭ್ಯವನ್ನು ಪಡೆಯಲಿದ್ದಾರೆ.
ಯೋಜನೆಯ ಕುರಿತು ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್, "ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕಲಾವಿದರು, ಕುಶಲಕರ್ಮಿಗಳನ್ನು ಗುರುತಿಸಿ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಗುರುತಿನ ಚೀಟಿಯನ್ನು ಸಹ ನೀಡಲಾಗುತ್ತದೆ. ಮೊದಲ ಹಂತದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯ, ಮತ್ತು ಎರಡನೇ ಹಂತದಲ್ಲಿ 2 ಲಕ್ಷದವರೆಗೆ ರಿಯಾಯಿತಿ ಬಡ್ಡಿದರದ ಮೂಲಕ ಶೇ 5ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ" ಎಂದರು.
"ಈ ಯೋಜನೆ ಕೇವಲ ಸಾಲ ಸೌಲಭ್ಯ ನೀಡುವುದು ಮಾತ್ರವಲ್ಲ. ಅವರ ಕೌಶಲ್ಯದ ಉನ್ನತೀಕರಣ, ತಯಾರಿಕೆಗಳಿಗೆ ಪ್ರೋತ್ಸಾಹ, ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ಮತ್ತು ಉತ್ಪನ್ನಗಳ ಮಾರುಕಟ್ಟೆಗಳಿಗೆ ಬೆಂಬಲವನ್ನು ಸಹ ನೀಡುತ್ತದೆ" ಎಂದು ಸಚಿವರು ವಿವರಣೆ ನೀಡಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಮೊದಲ ಹಂತದಲ್ಲಿ ಬಡಗಿಗಳು, ದೋಣಿ ತಯಾರಕರು, ಅಕ್ಕಸಾಲಿಗರು, ಕಮ್ಮಾರರು, ಬೀಗ ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು ಮತ್ತು ಮೇಸ್ತ್ರಿಗಳು ಬರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ನೇಯ್ಗೆದಾರರು, ಅಕ್ಕಸಾಲಿಗರು, ಕುಂಬಾರರು, ಅಗಸರು, ಕ್ಷೌರಿಕರು ಹಾಗೂ ಇಂತಹ ವಿವಿಧ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣ ಮಾಡಲಿದ್ದೇವೆ. ಸೆಪ್ಟೆಂಬರ್ 17ರಂದು ನಾವು ಈ ಯೋಜನೆಯನ್ನು ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ್ದರು.
'ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ' ಅಥವಾ 'ಪಿಎಂ ವಿಶ್ವಕರ್ಮ ಯೋಜನೆ'ಯಲ್ಲಿನ 'ವಿಶ್ವಕರ್ಮ' ಎಂಬ ಹೆಸರಿನ ಬಗ್ಗೆ ನರೇಂದ್ರ ಮೋದಿ ವಿವರಣೆ ನೀಡಿದ್ದು, ಭಾರತೀಯ ತತ್ವಗಳಲ್ಲಿ ಭಗವಾನ್ ವಿಶ್ವಕರ್ಮರ ಉನ್ನತ ಸ್ಥಾನಮಾನ ಮತ್ತು ಉಪಕರಣಗಳೊಂದಿಗೆ ಕೈಯಿಂದ ಕೆಲಸ ಮಾಡುವವರ ಗೌರವದ ಶ್ರೀಮಂತ ಸಂಪ್ರದಾಯದ ಬಗ್ಗೆಯೂ ಮಾತನಾಡಿದರು.
ಕೆಲವು ವಲಯಗಳ ಕುಶಲಕರ್ಮಿಗಳು ಸ್ವಲ್ಪ ಗಮನ ಸೆಳೆದರೆ, ಬಡಗಿಗಳು, ಕಬ್ಬಿಣದ ಕೆಲಸಗಾರರು, ಶಿಲ್ಪಿಗಳು, ಮೇಸ್ತ್ರಿಗಳು ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿರುವ ಅನೇಕ ವರ್ಗದ ಕುಶಲಕರ್ಮಿಗಳು ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುತ್ತಿದ್ದಾರೆ ಎಂದರು.












Click it and Unblock the Notifications