ಸಿಬಿಐ ವಿವಾದ : ಸುಪ್ರೀಂನಲ್ಲಿ ಅಲೋಕ್ ವರ್ಮಾ ಭವಿಷ್ಯ ನಿರ್ಧಾರ
ನವದೆಹಲಿ, ಜನವರಿ 08: ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳಿಸಿರುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮಂಗಳವಾರ(ಜನವರಿ 08)ದಂದು ತೀರ್ಪು ನೀಡಲಿದೆ.
ಕೇಂದ್ರ ತನಿಖಾ ದಳ(ಸಿಬಿಐ) ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತ್ತು.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ.20 ರಂದು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ನಂತರ ನ.29 ಕ್ಕೆ ಮುಂದೂಡಿತ್ತು. ಡಿ.6ರಂದು ವಿಚಾರಣೆ ನಡೆಸಲಾಗಿತ್ತು.
ಸಿಬಿಐ ವಿವಾದ: ರಾಕೇಶ್ ಅಸ್ಥಾನಾ ವಿರುದ್ಧದ ಕೇಸುಗಳೇ ನಾಪತ್ತೆ!
ಜಸ್ಟೀಸ್ ರಂಜನ್ ಗೋಗಾಯ್ ಹಾಗೂ ಜಸ್ಟೀಸ್ ಎಸ್ ಕೆ ಕೌಲ್ ಮತ್ತು ಕೆಎಂ ಜೋಸೆಫ್ ಅವರಿರುವ ನ್ಯಾಯಪೀಠ ಈಗ ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸಲಿದೆ.
ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಲಂಚ ಸ್ವೀಕರಿಸಿದ್ದರು ಎಂದು ನಿರ್ದೇಶಕ ಅಲೋಕ್ ವರ್ಮಾ ದೂರಿದ್ದರು. ಅಲೋಕ್ ವರ್ಮಾ ಅವರ ಮೇಲೂ ಆಸ್ಥಾನ ಲಂಚದ ಆರೋಪ ಮಾಡಿದ್ದರು. ಈ ಬೆಳವಣಿಗೆಯ ನಂತರ ವರ್ಮಾ ಮತ್ತು ಆಸ್ಥಾನ ಇಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿ, ನಾಗೇಶ್ವರ್ ರಾವ್ ಎಂಬುವವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಕೇಂದ್ರ ವಿಚಕ್ಷಣಾ ದಳ(CVC)ಕ್ಕೆ ಸುಪ್ರೀಂ ಆದೇಶಿಸಿತ್ತು. ಸಿವಿಸಿ ಸಲ್ಲಿಸಿದ ವರದಿಗೆ ಪ್ರತಿಕ್ರಿಯೆ ನೀಡಲು ಅಲೋಕ್ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸೋಮವಾರ ಸಿವಿಸಿ ವರದಿಗೆ ಅಲೋಕ್ ವರ್ಮಾ ಪ್ರತಿಕ್ರಿಯೆ ನೀಡಿದ್ದರು. ಆದರೆ, ಈ ಪ್ರತಿಕ್ರಿಯೆ ಸೋರಿಕೆಯಾಗಿತ್ತು.
'ಕೇಂದ್ರ ವಿಚಕ್ಷಣಾ ದಳ(ಸಿವಿಸಿ) ನೀಡಿದ್ದ ವರದಿಯನ್ನು ಸೋರಿಕೆ ಮಾಡಿರುವ ನೀವಿಬ್ಬರೂ ವಿಚಾರಣೆಗೆ ಅರ್ಹರಲ್ಲ' ಎಂದು ಸುಪ್ರೀಂ ಛೀಮಾರಿ ಹಾಕಿತ್ತು.












Click it and Unblock the Notifications