ರೈಲ್ವೆ ಇಲಾಖೆ ಅಕ್ರಮ: ಸಿಬಿಐನಿಂದ ಲಾಲೂ, ತೇಜಸ್ವಿಗೆ ಸಮನ್ಸ್
ಕೇಂದ್ರೀಯ ತನಿಖಾ ದಳದಿಂದ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಅವರಿಗೆ ಸಿಬಿಐ ನೋಟಿಸ್. ಲಾಲು ಅವರು ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ವಿಚಾರಣೆಗಾಗಿ ಸಮನ್ಸ್ ಜಾರಿ.
ನವದೆಹಲಿ, ಸೆಪ್ಟೆಂಬರ್ 7: ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಆಗಿವೆ ಎನ್ನಲಾದ ಕೆಲವಾರು ಅಕ್ರಮಗಳ ಕುರಿತಂತೆ ವಿಚಾರಣೆ ನಡೆಸಲು ಮುಂದಾಗಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ. ಲಾಲೂ ಅವರ ಪುತ್ರ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೂ ವಿಚಾರಣೆಗಾಗಿ ಸಮನ್ಸ್ ಜಾರಿಯಾಗಿದೆ.
ಸಮನ್ಸ್ ನ ಅನ್ವಯ ಸೆಪ್ಟೆಂಬರ್ 11ರಂದು ಲಾಲು ಅವರು ವಿಚಾರಣೆಗೆ ಹಾಜರಾಗಬೇಕಿದೆ. ಅವರ ಪುತ್ರ ಯಾದವ್ ಅವರು, ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗಬೇಕಿದೆ.

ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಇಲಾಖೆಯಿಂದ ನೀಡಲಾಗಿದ್ದ ಐಆರ್ ಸಿಟಿಸಿ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಅಕ್ರಮವಾಗಿದೆ ಎಂಬ ಆರೋಪ ಅವರ ಮೇಲಿದೆ.
ಇದಲ್ಲದೆ, ರೈಲ್ವೆ ಕಾಮಗಾರಿಗೆ ಸಂಬಂಧಿಸಿದ ಒಪ್ಪಂದವೊಂದನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿದ್ದಕ್ಕೆ ತೇಜಸ್ವಿ ಯಾದವ್ ಅವರ ಹೆಸರಿಗೆ ಪಾಟ್ನಾದಲ್ಲಿ ಆ ಕಂಪನಿಯಿಂದ ಬೆಲೆಬಾಳುವ ಜಮೀನು 'ಕಿಕ್ ಬ್ಯಾಕ್' ರೂಪದಲ್ಲಿ ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ತೇಜಸ್ವಿ ಯಾದವ್ ಅವರನ್ನೂ ವಿಚಾರಣೆಗೆ ಕರೆಯಲು ಸಿಬಿಐ ನಿರ್ಧರಿಸಿದೆ.












Click it and Unblock the Notifications