ಎಸಿಬಿ ಬಲೆಗೆ ಬಿದ್ದ ಆಂಧ್ರ ಅಧಿಕಾರಿಯ ಆಸ್ತಿ ಮೌಲ್ಯ 500 ಕೋಟಿ ರೂ.!
ವಿಶಾಖಪಟ್ಟಣ, ಸೆಪ್ಟೆಂಬರ್ 27: ವಿಶಾಖಪಟ್ಟಣದಲ್ಲಿ ಮುನ್ಸಿಪಲ್ ಇಲಾಖೆಯ ಹಿರಿಯ ಅಧಿಕಾರಿಯ ಮನೆಯ ಮೇಲೆ ಸೆ.25 ರಂದು ನಡೆದ ಎಸಿಬಿ ದಾಳಿ ಸರ್ಕಾರಿ ಅಧಿಕಾರಿಯೊಬ್ಬರು ಇಷ್ಟೆಲ್ಲ ಆದಾಯ ಗಳಿಸಬಹುದಾ ಎಂದು ಹುಬ್ಬೇರಿಸುವಂತೆ ಮಾಡಿದೆ!
ಎನ್.ವಿ.ಶಿವಪ್ರಸಾದ್ ಮತ್ತು ಗೊಲ್ಲ ವೆಂಕಟ ರಘುರಾಮಿ ರೆಡ್ಡಿ ಎಂಬ ಇಬ್ಬರು ಮುನ್ಸಿಪಲ್ ಅಧಿಕಾರಿಗಳು ಆದಾಯ ಮೀರಿ ಆಸ್ತಿ ಹೊಂದಿದ್ದಾರೆಂಬ ಅನುಮಾನದ ಮೇಲೆ ಅವರ ಮನೆ ಮೇಲೆ ಸೋಮವಾರ ಎಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಈ ಇಬ್ಬರನ್ನೂ ವಶಕ್ಕೆ ಪಡೆದಿದ್ದ ಎಸಿಬಿ ಪೊಲೀಸರು, ಗೊಲ್ಲ ವೆಂಕಟ ರೆಡ್ಡಿ ಬಳಿ 500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯಿದೆ ಎಂದಿದ್ದಾರೆ. ವಿಶಾಖಪಟ್ಟಣ, ವಿಜಯವಾಡ, ತಿರುಪತಿ ಮತ್ತು ಮಹಾರಾಷ್ಟ್ರದ ಶಿರ್ಡಿ ಸೇರಿದಂತೆ ಅವರು ಆಸ್ತಿ ಹೊಂದಿರುವ 15 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಶಿರ್ಡಿಯಲ್ಲಿ ಐಷಾರಾಮಿ ಹೊಟೇಲ್ ವೊಂದನ್ನು ಹೊಂದಿರುವ ರೆಡ್ಡಿ, ವಿಜಯವಾಡದ ಬಳಿ 300 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ. ಇನ್ನು ಮೂರೇ ಮೂರು ದಿನದಲ್ಲಿ ನಿವೃತ್ತರಾಗಲಿದ್ದ ರೆಡ್ಡಿ ಅವರ ಮೇಲೆ ಎಸಿಬಿ ದಾಳಿ ನಡೆದಿದ್ದು, ಗಮನಿಸಬೇಕಾದ ವಿಷಯ.
ದಾಳಿ ಸಂದರ್ಭದಲ್ಲಿ, ರೆಡ್ಡಿ ನಿವಾಸದಲ್ಲಿ 50 ಲಕ್ಷ ರೂ. ಗೂ ಹೆಚ್ಚು ನಗದು ಹಣ ಪತ್ತೆಯಾಗಿದೆ. ರೆಡ್ಡಿ ಅವರ ಬ್ಯಾಂಕ್ ಲಾಕರ್ ಗಳನ್ನೂ ಇನ್ನೂ ತೆರೆದಿಲ್ಲ. ಅವುಗಳನ್ನು ತೆರೆದ ನಂತರ ಒಟ್ಟು ಆಸ್ತಿಯ ಮೌಲ್ಯವನ್ನು ಹೇಳಬಹುದು. ಅಂದಾಜಿ 500 ಕೋಟಿ ರೂ. ಇದ್ದಿರಬಹುದು ಎಂದು ಎಸಿಬಿ ಪೊಲೀಸರು ಹೇಳಿದ್ದಾರೆ.

1988 ರಲ್ಲಿ ಯೋಜನಾ ಇಲಾಖೆಗೆ ಸಹ ನಿರ್ದೇಶಕರಾಗಿ ಸೇರಿದ ರೆಡ್ಡಿ, ನಂತರ ನೆಲ್ಲೂರು, ಅನಂತಪುರ ಮತ್ತು ವಿಶಾಖಪಟ್ಟಣದಲ್ಲೂ ಕೆಲಸ ಮಾಡಿದ್ದರು.












Click it and Unblock the Notifications