ಸೆ. 21ರಿಂದ 30ರ ವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್
ನವದೆಹಲಿ, ಸೆ.19: ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ (ಸೆ.19) ಆದೇಶ ನೀಡಿದೆ.
ನವದೆಹಲಿಯ ಶ್ರಮಶಕ್ತಿದಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಶಶಿಶೇಖರ್ ಅವರು ಮುಂದಿನ ಹತ್ತು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದರು. ಸೆಪ್ಟೆಂಬರ್ 21ರಿಂದ 30ರ ತನಕ 3,000 ಕ್ಯೂಸೆಕ್ಸ್ ನೀರನ್ನು ಹರಿಸುವುದು ಅನಿವಾರ್ಯವಾಗಿದೆ.
ಸೋಮವಾರದಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಮೇಲೆ ಮಂಗಳವಾರ ಸುಪ್ರೀಂಕೋರ್ಟಿನ ವಿಚಾರಣೆ ನಡೆಯಲಿದೆ. [ತಮಿಳುನಾಡಿಗೆ ನೀರು ಹರಿಸಲು ಮೇಲುಸ್ತುವಾರಿ ಸಮಿತಿ ಆದೇಶ]

ನವದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿಶೇಖರ್ ಅಧ್ಯಕ್ಷರಾಗಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ತೆಗೆದುಕೊಂಡ ನಿರ್ಣಯದ ಬಗ್ಗೆ ಕರ್ನಾಟಕ ಅಸಮಾಧಾನ ವ್ಯಕ್ತಪಡಿಸಿದೆ. [ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?]
ಸಮಿತಿ ಸದಸ್ಯ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಅವರು, ರಾಜ್ಯದಲ್ಲಿನ ನೀರಿನ ಕೊರತೆ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದ ಮೇಲೆ ಮುಂದಿನ ವಿಚಾರಣೆಯನ್ನು ಆರಂಭಿಸಲಿದ್ದೇವೆ ಎಂದು ವಕೀಲ ಮೋಹನ್ ಕಾತರಕಿ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. [ಸುಪ್ರೀಂಕೋರ್ಟ್ ವಿಚಾರಣೆಗೆ ಸಮಿತಿ ತೀರ್ಮಾನವೇ ಮುನ್ನುಡಿ]
ಉಸ್ತುವಾರಿ ಸಮಿತಿಯಲ್ಲಿ ಚರ್ಚೆಯಾದ ವಿಷಯದ ಮೇಲೆ ಸುಪ್ರೀಂಕೋರ್ಟ್ ಕೂಡಾ ಪರಿಗಣಿಸಲಿದೆ. ಇಲ್ಲದಿದ್ದರೆ ಮತ್ತೆ ಮಧ್ಯಂತರ ಆದೇಶ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಉಸ್ತುವಾರಿ ಸಮಿತಿಯ ಸಭೆಯ ನಿರ್ಣಯ ಮಹತ್ವದ್ದಾಗಿದೆ ಎಂದು ಹೇಳಿದರು.
10 ದಿನಗಳ ನಂತರ ಉಸ್ತುವಾರಿ ಸಮಿತಿ ಪುನಃ ಸಭೆ ಸೇರಲಿದೆ. ಸುಪ್ರೀಂಕೋರ್ಟಿನ ಆದೇಶದ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ್ ಹೇಳಿದ್ದಾರೆ. ಆದರೆ, ಸಮಿತಿಯ ಆದೇಶವನ್ನು ಉಭಯ ರಾಜ್ಯಗಳ ಕಾರ್ಯದರ್ಶಿಗಳು ತಿರಸ್ಕರಿಸಿದ್ದು, ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.(ಒನ್ಇಂಡಿಯಾ ಸುದ್ದಿ)












Click it and Unblock the Notifications