ಅ.1ರಿಂದ 6ರವರೆಗೆ ಕಾವೇರಿ ನೀರು ಹರಿಸಿ : ಸುಪ್ರೀಂ ಕೋರ್ಟ್
ನವದೆಹಲಿ, ಸೆಪ್ಟೆಂಬರ್ 30 : ಇನ್ನು ಮೂರು ದಿನಗಳೊಳಗಾಗಿ ಅಂದರೆ ಮಂಗಳವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು, ಬುಧವಾರ ವಸ್ತುಸ್ಥಿತಿಯ ಪರಿಶೀಲನೆಯಾಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೇ ಆದೇಶಿಸಿದೆ. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ಇದು ಕರ್ನಾಟಕದ ಪಾಲಿಗೆ ಬಿದ್ದ ಮತ್ತೊಂದು ಭಾರೀ ಹೊಡೆತ. ಸುಪ್ರೀಂಕೋರ್ಟ್ ನಾಲ್ಕು ವಾರಗಳೊಳಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಹೇಳಿತ್ತು. ಆದರೆ, ಕೇಂದ್ರ ಸರಕಾರ ಇನ್ನು ಮೂರು ದಿನದಲ್ಲಿ ರಚಿಸುವುದಾಗಿ ಹೇಳಿದ್ದು ರಾಜ್ಯಕ್ಕೆ ಮುಳುವಾಗಲಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮಾತ್ರವಲ್ಲ, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳನ್ನು ಒಳಗೊಂಡು ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಮತ್ತು ಶನಿವಾರದೊಳಗಾಗಿ ತಿಳಿಸಬೇಕಾಗಿ ಕೋರ್ಟ್ ಹೇಳಿದೆ.
ಇದಲ್ಲದೆ, ಅಕ್ಟೋಬರ್ 1ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಬೇಕೆಂದು ಆದೇಶ ನೀಡಿ ಸರ್ವೋಚ್ಚ ನ್ಯಾಯಾಲಯ ಕರ್ನಾಟಕಕ್ಕಾಗಿರುವ ಗಾಯದ ಮೇಲೆ ಉಪ್ಪು ಸವರಿದೆ. [ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ 18 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡದಿರುವ ಕಾರಣ ನ್ಯಾಯಾಂಗ ನಿಂದನೆಯನ್ನು ಎದುರಿಸುವುದಾ? ಅಥವಾ ವಸ್ತುಸ್ಥಿತಿ ಬಿಂಬಿಸಿ ನ್ಯಾಯಾಲಯವನ್ನು ಒಲಿಸಿಕೊಳ್ಳುವುದಾ? ಎಂಬ ಪ್ರಶ್ನೆ ಎದುರಾಗಿತ್ತು.
ಕಾವೇರಿ ಕೊಳ್ಳದ ನಾಲ್ಕೂ ಅಣೆಕಟ್ಟೆಗಳಲ್ಲಿ ನೀರಿಲ್ಲದ ಕಾರಣ ನೀರು ಬಿಡಬಾರದೆಂದು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕೇಂದ್ರ ಸಚಿವೆ ಉಮಾ ಭಾರತಿ ಅವರ ಮಧ್ಯಸ್ಥಿತೆಯಲ್ಲಿ ಗುರುವಾರ ನಡೆದ ಸಂಧಾನ ಕೂಡ ವಿಫಲವಾಗಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕರ್ನಾಟಕಕ್ಕೆ ಆಘಾತ!]
ಸೆಪ್ಟೆಂಬರ್ 27ರಂದು ತಮಿಳುನಾಡಿಗೆ 18 ಸಾವಿರ ಕ್ಯೂಸೆಕ್ಸ್ ನೀರನ್ನು ಮೂರು ದಿನದಲ್ಲಿ ಬಿಡಬೇಕು ಮತ್ತು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.
ಅಲ್ಲದೆ, ಕಾವೇರಿ ನಿರ್ವಹಣಾ ಮಂಡಳಿಯನ್ನು ನಾಲ್ಕು ವಾರಗಳಲ್ಲಿ ರಚಿಸಬೇಕು ಎಂದು ಕೋರ್ಟ್ ಆದೇಶಿಸಿತ್ತು. ತಮಿಳುನಾಡು ಈ ನಡೆಯನ್ನು ಸ್ವಾಗತಿಸಿದ್ದರೆ, ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹಾಗೆಯೆ, ಜಲತಜ್ಞರಿಂದ ವಸ್ತುಸ್ಥಿತಿಯ ಪರಿಶೀಲನೆ ಆಗಬೇಕು ಎಂಬ ಕರ್ನಾಟಕದ ವಾದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು.












Click it and Unblock the Notifications