ಕಾವೇರಿ ವಿವಾದ : ಕರ್ನಾಟಕದ ಪಾಲಿಗೆ ಮಹತ್ವದ ದಿನ
ಕರ್ನಾಟಕ ಎಂದೂ ಕಂಡರಿಯದ ಭೀಕರ ಬರಗಾಲ ಎದುರಿಸುತ್ತಿರುವಾಗ, ನೀರಿಗಾಗಿ ತಮಿಳುನಾಡು ತೆಗೆದಿರುವ ಕ್ಯಾತೆ ಮತ್ತು ಕೋರ್ಟಿನ ಜಿಡ್ಡುತನದಿಂದಾಗಿ ಕಾವೇರಿ ನೀರಿಗಾಗಿ ಪರಿತಪಿಸುತ್ತಿರುವ ಕರ್ನಾಟಕದ ಜನತೆ ರಾಜ್ಯದ ಪರವಾದ ತೀರ್ಪಿಗಾಗಿ ಕಾದಿದ್ದಾರೆ.
ಬೆಂಗಳೂರು, ಅಕ್ಟೋಬರ್ 18 : ಉಸಿರು ಬಿಗಿಹಿಡಿದುಕೊಂಡು, ಕಾವೇರಿ ಮಾತೆಯ ಮುಂದೆ ಮತ್ತು ಸಹಸ್ರಾರು ದೇವರುಗಳ ಮುಂದೆ ಕೈಮುಗಿದುಕೊಂಡು ಕಾವೇರಿ ಹೋರಾಟಕ್ಕಾಗಿ ಕೈಜೋಡಿಸಿರುವ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾದು ಕುಳಿತಿದ್ದಾರೆ. ಏನಾಗಲಿದೆ? ತೀರ್ಪು ಕರ್ನಾಟಕದ ಪರ ಈಗಲಾಗರೂ ಬರಲಿದೆಯಾ?
ನೂರಾರು ವರ್ಷಗಳಿಂದ ಕಾವೇರಿಗಾಗಿ ಕರ್ನಾಟಕ ಹೋರಾಡುತ್ತಲೇ ಬಂದಿದೆ. ಆದರೆ, ನ್ಯಾಯ ಸಿಕ್ಕಿದ್ದು ಮಾತ್ರ ಕಮ್ಮಿಯೇ. ಕಾವೇರಿ ಕೊಳ್ಳದ ಪ್ರದೇಶಗಳ ವಸ್ತುಸ್ಥಿತಿಯ ಅಧ್ಯಯನ ನಡೆಸಿರುವ ತಜ್ಞರ ತಂಡ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ಆಧಾರದ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.

2007ರಲ್ಲಿ ಕಾವೇರಿ ನೀರು ನ್ಯಾಯಾಧೀಕರಣ ನೀಡಿದ ಐತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ವಿಶೇಷ ಅರ್ಜಿಗಳನ್ನು ಸಲ್ಲಿಸಿವೆ. 2001ರಲ್ಲಿ ನ್ಯಾಯಾಧೀಕರಣ ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕರ್ನಾಟಕದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮೂಲ ಅರ್ಜಿ ಸಲ್ಲಿಸಿದೆ. ಹೂಡಲಾಗಿರುವ ಇನ್ನೂ ಅನೇಕ ಅರ್ಜಿಗಳ ಇತ್ಯರ್ಥ ಇಂದು ನಡೆಯಲಿದೆ.
ಕರ್ನಾಟಕ ಈಗಾಗಲೆ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದೆ. ನಾಲ್ಕು ಅಣೆಕಟ್ಟುಗಳಾದ ಕೆಆರ್ಎಸ್, ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳು ಬಟ್ಟಬರಿದಾಗಿವೆ. ನೀರಾವರಿಗಿರಲಿ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಮುಖ್ಯವಾಗಿ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗೂ ತತ್ವಾರವಾಗುವಂತಾಗಿದೆ.
2007ರಲ್ಲಿ ನ್ಯಾಯಾಧೀಕರಣ ನೀಡಿದ್ದ ಆದೇಶ ಹೀಗಿದೆ. ಲಭ್ಯವಿರುವ 740 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 270, ತಮಿಳುನಾಡಿಗೆ 419, ಕೇರಳಕ್ಕೆ 30 ಮತ್ತು ಪಾಂಡಿಚೇರಿಗೆ 7 ಮತ್ತು 14 ಪರಿಸರಕ್ಕಾಗಿ ಬಳಕೆಯಾಗಬೇಕು ಆದೇಶ ನೀಡಲಾಗಿತ್ತು.
ಇದನ್ನು ಪ್ರಶ್ನಿಸಿರುವ ಕರ್ನಾಟಕ, ಇಷ್ಟು ನೀರು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರು ಸರಬರಾಜಾಗುವ ಕರ್ನಾಟಕದ 6 ನಗರಗಳಿಗೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದೆ. ತಮಿಳುನಾಡು ಕೂಡ, ಕಾವೇರಿ ನೀರಿನ ಅಗತ್ಯವಿರುವ ಜಮೀನನ್ನು 29.7 ಲಕ್ಷ ಎಕರೆಯಿಂದ 24.70 ಲಕ್ಷ ಎಕರೆಗೆ ಇಳಿಸಲಾಗಿದೆ ಎಂದು ಕ್ಯಾತೆ ತೆಗೆದಿದೆ.
ಸುಪ್ರೀಂ ಕೋರ್ಟಿನಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ನ್ಯಾ. ಅಮಿತವ ರಾಯ್ ಮತ್ತು ನ್ಯಾ. ಎ.ಎಮ್.ಖನ್ವಿಲ್ಕರ್ ಅವರಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆ ಈಗಾಗಲೆ ಆರಂಭವಾಗಿದೆ. ಕರ್ನಾಟಕದ ಪರವಾಗಿ ಹಿರಿಯ ವಕೀಲರಾದ ಫಾಲಿ ನಾರಿಮನ್ ಅವರು ವಾದ ಮಂಡಿಸುತ್ತಿದ್ದಾರೆ.












Click it and Unblock the Notifications