ಗಿರ್ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತು
ಬೆಂಗಳೂರು, ಅಕ್ಟೋಬರ್ 06: ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಕೆಲವೇ ದಿನದಲ್ಲಿ 21 ಸಿಂಹಗಳು ಸತ್ತಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೀಗ ಅದಕ್ಕೆ ಕಾರಣ ಪತ್ತೆಯಾಗಿದೆ.
ಸರಣಿ ಸಿಂಹಗಳ ಸಾವಿಗೆ ಕ್ಯಾನಿನ್ ಡಿಸ್ಟೆಂಪರ್ ಎಂಬ ವೈರಸ್ (ಸಿಡಿವಿ) ಕಾರಣ ಎಂದು ವನ್ಯಜೀವಿ ತಜ್ಞರು ಪತ್ತೆ ಹಚ್ಚಿದ್ದಾರೆ. ಸತ್ತ ಹಲವು ಸಿಂಹಗಳ ದೇಹದಲ್ಲಿ ಸಿಡಿವಿ ವೈರಾಣು ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್ಐವಿ) ಹೇಳಿದೆ. ಈ ಸಂಸ್ಥೆಗಳು ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದವು.
ಸಿಂಹಗಳನ್ನು ಈ ವೈರಾಣುವಿನಿಂದ ಪಾರು ಮಾಡಲು ವನ್ಯಜೀವಿ ಇಲಾಖೆಯು ಅಮೆರಿಕದಿಂದ 300 ವೈರಾಣು ನಿರೋಧಕ ಚುಚ್ಚುಮದ್ದುಗಳನ್ನು ಕೂಡಲೇ ತರಿಸಲಾಗುತ್ತಿದೆ ಎಂದು ಐಸಿಎಂಆರ್ ಹೇಳಿದೆ.

ಪೂರ್ವ ಆಫ್ರಿಕಾದಲ್ಲಿ ಸಹ ಈ ವೈರಾಣು ವನ್ಯಜೀವಿಗಳಿಗೆ ಭಾರಿ ಹಾನಿ ಮಾಡಿತ್ತು. ಕೇವಲ ಸಿಂಹಗಳನ್ನಷ್ಟೆ ಅಲ್ಲ ಎಲ್ಲ ರೀತಿಯ ವನ್ಯಜೀವಿಗಳನ್ನು ಕಾಡುವ ಈ ವೈರಾಣು ಪೂರ್ಣ ಆಫ್ರಿಕಾದಲ್ಲಿ ಶೇ 30% ವನ್ಯಜೀವಿಗಳ ಜೀವಕ್ಕೆ ಎರವಾಗಿತ್ತು.
ಅಮೆರಿಕದಿಂದ ತರಿಸಲಾಗುತ್ತಿರುವ ಚುಚ್ಚುಮದ್ದನ್ನು ಕೂಡಲೇ ಗಿರ್ ಅರಣ್ಯ ಪ್ರದೇಶದ ಸಿಂಹಗಳಿಗೆ ಮತ್ತು ಅಲ್ಲಿನ ಇತರ ವನ್ಯಜೀವಿಗಳಿಗೆ ನೀಡಲಾಗುತ್ತದೆ ಎಂದು ಐಸಿಎಂಆರ್ ಸಿಬ್ಬಂದಿ ಹೇಳಿದ್ದಾರೆ.
ಗಿರ್ ಪ್ರದೇಶದಲ್ಲಿ ಸತತವಾಗಿ ಅಸುನೀಗಿದ ಸಿಂಹಗಳು ರಾಷ್ಟ್ರದ ಗಮನ ಸೆಳೆದಿದ್ದವು. ಪ್ರಾಣಿ ಪ್ರಿಯರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಸಿಂಹಗಳ ನಡುವೆ ಬೇಟೆ ಪ್ರದೇಶ ಹಂಚಿಕೆಗಾಗಿ ಯುದ್ಧ ನಡೆದು ಸಿಂಹಗಳು ಸಾಯುತ್ತಿವೆ ಎಂದು ಮೊದಲ ನಂಬಲಾಗಿತ್ತು. ಆದರೆ ಅದು ಸುಳ್ಳೆಂದು ಈಗ ತಿಳಿದುಬಂದಿದೆ.












Click it and Unblock the Notifications