ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ: ಉದ್ಯಮಿ ಅನೂಪ್ ಬಂಧನ
ನವದೆಹಲಿ, ಜನವರಿ 31: ಯುಪಿಎ ಸರ್ಕಾರದ ಅವಧಿಯ 3,600 ಕೋಟಿ ರು ಹೆಲಿಕಾಪ್ಟರ್ ಖರೀದಿ ಹಗರಣದ ತನಿಖೆ ಮತ್ತೆ ಚುರುಕುಗೊಂಡಿದೆ. ವಿವಿಐಪಿಗಳು ಭಾಗಿಯಾಗಿದ್ದಾರೆ ಎನ್ನಲಾದ ಬಹುಕೋಟಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನೂಪ್ ಕುಮಾರ್ ಗುಪ್ತಾ ಎಂಬುವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಇಂಡಿಯಾ ಗೇಟ್ ಬಾಸ್ಮತಿ ಅಕ್ಕಿ ಮಾರಾಟ ಮಾಡುವ ಕೆಆರ್ ಬಿಎಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ(ಜಂಟಿ)ರಾಗಿರುವ ಗುಪ್ತಾ ಬಂಧಿಸಿ, ವಿಶೇಷ ನ್ಯಾಯಲಯದಲ್ಲಿ ಶನಿವಾರ ಹಾಜರುಪಡಿಸಲಾಗಿದೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ( ಪಿಎಂಎಲ್ಎ) ಅನ್ವಯ ಪ್ರಕರಣ ದಾಖಲಾಗಿದ್ದು, ಗುಪ್ತಾ ಅವರನ್ನು 5 ದಿನಗಳ ಕಾಲ ವಿಚಾರಣೆ ನಡೆಸಲು ತನಿಖಾ ಸಂಸ್ಥೆಗೆ ಕೋರ್ಟ್ ಅವಕಾಶ ನೀಡಿದೆ.
ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಕಮಲ್ ನಾಥ್ ಮಕ್ಕಳು, ಸೋದರಳಿಯ ಕೂಡ ಭಾಗಿ
ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಹಕರಿಸದ ಕಾರಣ ಗುಪ್ತಾ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಯುಪಿಎ-2 ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಅವರಂತಹ ವಿವಿಐಪಿಗಳ ಓಡಾಟಕ್ಕಾಗಿ 3,600 ಕೋಟಿ ರೂ ವೆಚ್ಚದಲ್ಲಿ ಐಷಾರಾಮಿ ಹೆಲಿಕಾಪ್ಟರ್ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದ್ದು, ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.
3,600 ಕೋಟಿ ರು ಮೌಲ್ಯದ ಡೀಲ್ ಕ್ಯಾನ್ಸಲ್
ಈ ಹಗರಣದಲ್ಲಿ ಕಿಕ್ ಬ್ಯಾಕ್ ಪಡೆದ ಸಂಸ್ಥೆಗಳ ಪೈಕಿ ರವಾಸಿ ಅಲ್ ಖಲೀಜ್ ಜನರಲ್ ಟ್ರೇಡಿಂಗ್ (RAKGT) ಎಲ್ಎಲ್ ಸಿದುಬೈ ಕೂಡಾ ಸೇರಿದೆ. ಈ ಸಂಸ್ಥೆ ಅನೂಪ್ ಗುಪ್ತಾ ನಿರ್ದೇಶಕರಾಗಿರುವ ಕೆಆರ್ ಬಿಎಲ್ ಡಿಎಂಸಿಸಿ ಸಂಸ್ಥೆಯ ಅಧೀನಕ್ಕೆ ಬಂದಿದೆ. RAKGTನಲ್ಲಿ ಸುಮಾರು ಶೇ 49ರಷ್ಟು ಪಾಲನ್ನು ಗುಪ್ತಾ ಅವರ ಸಂಸ್ಥೆ ಹೊಂದಿದ್ದು, ಆರ್ಥಿಕ ವ್ಯವಹಾರಗಳ ನಿರ್ವಹಣೆ ಗುಪ್ತಾ ಅವರೇ ನಿರ್ವಹಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಇದಲ್ಲದೆ, ಏರ್ ಕ್ರಾಫ್ಟ್ ನಿರ್ಮಾಣಕ್ಕಾಗಿ ಭಾರತ ಸರ್ಕಾರ ಹಾಗೂ ಎಂಬ್ರಾಯಿರ್ ಸಂಸ್ಥೆ ನಡುವಿನ 208 ಮಿಲಿಯನ್ ಯುಎಸ್ ಡಾಲರ್ ಒಪ್ಪಂದದಿಂದಲೂ ಗುಪ್ತಾಗೆ ಕಿಕ್ ಬ್ಯಾಕ್ ಸಿಕ್ಕಿರುವ ಆರೋಪ ಹೊರೆಸಲಾಗಿದೆ.