ದಲಿತರ ಬದುಕುವ ಹಕ್ಕು ಕಸಿಯುತ್ತಿರುವ ಮೋದಿ : ರಾಹುಲ್
ನವದೆಹಲಿ, ಅಕ್ಟೋಬರ್.21: ದೆಹಲಿ ಹೊರವಲಯದ ಸೊನ್ಪೆಡ್ ಗ್ರಾಮದಲ್ಲಿ ಘರ್ಷಣೆ ಸಂಭವಿಸಿದ ಜಾಗಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಫೋಟೋಗಾಗಿ, ಪ್ರಚಾರಕ್ಕಾಗಿ ನಾನು ಭೇಟಿ ನೀಡುತ್ತಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ ಎಂದು ಹೇಳಿದರು.[ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕಾರಣವಾಗಿದ್ದೊಂದು ಮೊಬೈಲ್!]
ಮೊಬೈಲ್ ಪ್ರಕರಣವೊಂದು ಇಬ್ಬರು ಹಸುಳೆಗಳ ಜೀವ ತೆಗೆದಿತ್ತು. ದಲಿತರ ಮನೆಗೆ ಬೆಂಕಿ ಹಾಕಿದ ಪರಿಣಾಮ ಬುಧವಾರ ಬೆಳಗಿನ ಜಾವ, ಎರಡೂವರೆ ವರ್ಷದ ವೈಭವ್ ಮತ್ತು ಈತನ ಸಹೋದರಿ 11 ತಿಂಗಳ ಹಸುಳೆ ದಿವ್ಯಾ ಬೆಂಕಿಗೆ ಆಹುತಿಯಾಗಿದ್ದರು. ನಂತರ ದಲಿತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಹರ್ಯಾಣ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಒಪ್ಪಿಗೆ ನೀಡಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.
ಪ್ರತಿಭಟನೆಗೆ ರಾಹುಲ್ ಸಾಥ್
ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, "ಪ್ರಧಾನಿ ಮೋದಿ, ಹರಿಯಾಣ ಮುಖ್ಯಮಂತ್ರಿ, ಬಿಜೆಪಿ ಮತ್ತು ಆರ್ಎಸ್ಎಸ್ "ದುರ್ಬಲರನ್ನು ದಮನಿಸುವ ರಾಜಕಾರಣ' ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫೋಟೋಗಾಗಿ ಬಂದಿಲ್ಲ
ಸಂಕಷ್ಟದಲ್ಲಿರುವವರ ನೆರವಿಗೆ ಕಾಂಗ್ರೆಸ್ ಮತ್ತು ನಾನು ಸದಾ ಸಿದ್ಧ. ಇಂಥ ವಿಷಯದಲ್ಲಿ ರಾಜಕೀಯ ಮಾಡಿ ಯಾವ ಲಾಭಪಡೆದುಕೊಳ್ಳಬೇಕಾಗಿಲ್ಲ. ಫೋಟೋಗಾಗಿ ರಾಜಕೀಯ ಮಾಡಬೇಕಿಲ್ಲ ಎಂದು ಹೇಳಿದರು.
ದುರ್ಬಲರ ಹಕ್ಕು ಕಸಿದುಕೊಂಡ ಬಿಜೆಪಿ
ದುರ್ಬಲರು, ದಲಿತರು ಬದುಕುವ ಹಕ್ಕನ್ನೇ ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ದೇಶದ ವಿವಿಧೆಡೆ ಒಂದೆಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಶಿಕ್ಷೆಯಾಗುವವರೆಗೂ ಬಿಡಲ್ಲ
ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಆಗುವವರೆಗೂ ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸುವುದಿಲ್ಲ. ದೀನ ದಲಿತಯರೊಂದಿಗೆ ಪಕ್ಷ ಸದಾ ನಿಂತಿರುತ್ತದೆ ಎಂದು ಹೇಳಿದರು.