ಬುರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣ: ಬಾಂಗ್ಲಾ ಉಗ್ರನಿಗೆ 29 ವರ್ಷ ಸಜೆ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ 2014 ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಪ್ರುಮುಖ ರುವಾರಿ, ಅಪಾದಿತ ಉಗ್ರಗಾಮಿಗೆ 29 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟಿಸಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾ. ಸುವೆಂದು ಸಮಂತಾ ಅವರು, ಬಾಂಬ್ ಸ್ಪೋಟ ಹಾಗೂ ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡಿದ ಅಪರಾಧಕ್ಕಾಗಿ ಅಪಾಧಿತ ಉಗ್ರಗಾಮಿ ಶೇಯಿಕ್ ಕೌಸರ್ ಗೆ ಒಟ್ಟು 29 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ. ಇನ್ನು ತಪ್ಪನ್ನು ಒಪ್ಪಿಕೊಂಡಿದ್ದ ಅಪಾದಿತ ಉಗ್ರನಿಗೆ 29 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಬುರ್ದ್ವಾನ್ ಬಾಂಬ್ ಸ್ಫೋಟ:
ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹುದ್ದೀನ್ (JMB) ಉಗ್ರಗಾಮಿ ಸಂಘಟನೆಗೆ ಸೇರಿದ್ದ. 2014 ಅಕ್ಟೋಬರ್ 2 ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಾಂಬ್ ತಯಾರಿಕೆ ವೇಳೆ ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿದ್ದರು. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಬಾಡಿಗೆ ಮನೆಯಲ್ಲಿ ಬಾಂಬ್ ತಯಾರಿಸುವ ವೇಳೆ ಅದು ಸ್ಫೋಟಿಸಿತ್ತು. ಕಾನೂನು ವಿರೋಧಿ ಕೃತ್ಯ ನಿಯಂತ್ರಣ ಕಾಯ್ದೆ, ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ ಅಪರಾಧ, ಸಂಚು ಮತ್ತಿತರ ಅಪರಾಧಗಳ ಅಡಿಯಲ್ಲಿ ಅಪಾದಿತ ಉಗ್ರ ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ಎನ್ಐಎ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಶ್ಯಾಮಲ್ ಗೋಷ್ ಹೇಳಿಕೆ ನೀಡಿದ್ದಾರೆ.

33 ಶಂಕಿತ ಉಗ್ರರ ಮೇಲೆ ದೋಷಾರೋಪಪಟ್ಟಿ:
ಬುರ್ದ್ವಾನ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಈವರೆಗೂ 33 ಶಂಕಿತ ಉಗ್ರರ ಮೇಲೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ಶಿಕ್ಷೆಗೆ ಗುರಿಯಾದ ಉಗ್ರ ಕೌಸರ್ 31 ನೇ ಆರೋಪಿ. ಉಳಿದ ಮೂವತ್ತು ಶಂಕಿತ ಉಗ್ರರು ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದಾರೆ. ಉಳಿದ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಬುರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣವನ್ನು ಮೊದಲು ಪಶ್ಚಿಮ ಬಂಗಾಳ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ಆನಂತರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಬುರ್ದ್ವಾನ್ ಬಾಂಬ್ ಸ್ಪೋಟ ಪ್ರಕರಣಕ್ಕೂ ಬೆಂಗಳೂರಿಗೆ ಲಿಂಕ್ ಇರುವುದನ್ನು ಪತ್ತೆ ಮಾಡಿದ್ದರು. ಈ ಕುರಿತು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕರ್ನಾಟಕ ಲಿಂಕ್ :
ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಕ್ಕೂ ಕರ್ನಾಟಕಕ್ಕೂ ಮಹತ್ವದ ಸಂಬಂಧವಿದೆ. ಬುರ್ದ್ವಾನ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖಾ ತಂಡ ಹಬೀಬುರ್ ರೆಹಮಾನ್ ಎಂಬ ಶಂಕಿತ ಉಗ್ರಗಾಮಿಯನ್ನು ದೊಡ್ಡಬಳ್ಳಾಪುರದಲ್ಲಿ 2019 ಜೂನ್ ನಲ್ಲಿ ಬಂಧಿಸಿತ್ತು. ಬಂಧಿತ ಆರೋಪಿ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಎಂದು ಎನ್ಐಎ ತಿಳಿಸಿತ್ತು. ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರದ ಚಿಕ್ಕಪೇಟೆಯ ಪ್ರಾರ್ಥನಾ ಮಂದಿರದಲ್ಲಿ ಅನ್ವರ್ ಹುಸೇನ್ ಇಮಾಮ್ ಎಂಬುವರ ಆಶ್ರಯದಲ್ಲಿ ಇದ್ದ. ಈತ ಕೆ.ಆರ್. ಪುರದಿಂದ ಬಂದಿದ್ದಾಗಿ ಹೇಳಿಕೊಂಡಿದ್ದ. ಆದರೆ, ತನಿಖೆಯಲ್ಲಿ ಬುರ್ದ್ವಾನ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೂ ಆರೋಪಿಗೂ ಲಿಂಕ್ ಇರುವುದು ಬಯಲಾಗಿತ್ತು. ದೆಹಲಿಯಿಂದ ಬಂದಿದ್ದ ಹಬೀಬಲ್ ರೆಹಮಾನ್ ಪಾನಿಪುರಿ ಅಂಗಡಿ ಇಟ್ಟುಕೊಂಡು ದೊಡ್ಡಬಳ್ಳಾಪುರದಲ್ಲಿ ವಾಸ್ತವ್ಯ ಹೂಡಲು ಯೋಜಿಸಿದ್ದ. ಇದಕ್ಕಾಗಿ ಇಸ್ಲಾಂಪುರದಲ್ಲಿ ಪ್ರತ್ಯೇಕ ಬಾಡಿಗೆ ಮನೆ ಪಡೆಯಲು ಕೂಡ ಮುಂದಾಗಿದ್ದ. ಆದರೆ ಎನ್ಐಎ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಹಬೀಬುರ್ ರೆಹಮಾನ್ ಶೇಯಿಕ್ ಸಿಕ್ಕಿಬಿದ್ದಿದ್ದ.

ಕಚ್ಚಾ ಬಾಂಬ್ ಪತ್ತೆ :
ಬಂಧನಕ್ಕೆ ಒಳಗಾಗಿದ್ದ ಹಬೀಬುರ್ ರೆಹಮಾನ್ ನನ್ನು ಎನ್ಐಎ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಚಿಕ್ಕಬಾಣವಾರದ ಮನೆಯಲ್ಲಿ ಎರಡು ಕಚ್ಚಾ ಬಾಂಬ್ ಪತ್ತೆ ಮಾಡಿದ್ದರು. ಬಳಿಕ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಎರಡೂ ಬಾಂಬ್ ನ್ನು ನಿಷ್ಕ್ರಿಯಗೊಳಿಸಿ ವಿಲೇವಾರಿ ಮಾಡಲಾಗಿತ್ತು. ನಂತರ ರೆಹಮಾನ್ ನನ್ನು ತಮಿಳುನಾಡು ಸೇರಿದಂತೆ ಹಲವಡೆ ಕರೆದುಕೊಂಡು ಹೋಗಿ ಎನ್ಐಎ ತಂಡ ಮಹಜರು ನಡೆಸಿತ್ತು. ಹಬೀಬುಲ್ ರೆಹಮಾನ್ ಸಹಚರ ಅದಿಲ್ ಅಸಾದುಲ್ಲಾ ಎಂಬಾತ ಇದಕ್ಕೂ ಮೊದಲು ರಾಮನಗರದಲ್ಲಿ ಬಂಧನಕ್ಕೆ ಒಳಗಾಗಿದ್ದ. ಈತನ ಬಂಧನದ ವೇಳೆ ರಾಮನಗರದ ಮೋರಿಯಲ್ಲಿ ಎರಡು ಕಚ್ಚಾ ಬಾಂಬ್ ಗಳನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದರು. ಈತನನ್ನು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಹಬೀಬುರ್ ರೆಹಮಾನ್ ದೊಡ್ಡಬಳ್ಳಾಪುರದಲ್ಲಿ ಸಿಕ್ಕಿಬಿದ್ದಿದ್ದ.












Click it and Unblock the Notifications