ರಾಜೀನಾಮೆ ಕೊಡುವಂತೆ 80,000 ನೌಕರರಿಗೆ BSNL ಸೂಚನೆ ನೀಡುವುದು ನಿಜವೇ?
ನವದೆಹಲಿ, ಸೆಪ್ಟೆಂಬರ್ 6: ಸಂಬಳ ಪಾವತಿಯಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ನೌಕರರಿಗೆ ರಾಜೀನಾಮೆ ನೀಡಿ ಹೊರ ಹೋಗುವಂತೆ ಭಾರತ ಸಂಚಾರ ನಿಗಮ (ಬಿಎಸ್ಎನ್ಎಲ್) ಸೂಚನೆ ನೀಡಲಿದೆ ಎಂಬ ಸುದ್ದಿ ಕೆಲವೆಡೆ ಹರಿದಾಡುತ್ತಿದೆ.
ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆಯಾದ ಬಿಎಸ್ಎನ್ಎಲ್ ತನ್ನ ಶೇ 50 ರಷ್ಟು ಉದ್ಯೋಗಿಗಳಿಗೆ ರಜೆಯ ಮೇಲೆ ಹೋಗುವಂತೆ ಸೂಚನೆ ನೀಡಲು ಮುಂದಾಗಿದೆ ಎಂದು ಕೆಲವು ವೆಬ್ತಾಣಗಳಲ್ಲಿ ವರದಿಯಾಗಿದೆ. ಆದರೆ, ಇದು ಸತ್ಯಕ್ಕೆ ದೂರ ಎಂದು ಬಿಎಸ್ಎನ್ಎಲ್ ಉದ್ಯೋಗಿಗಳ ಒಕ್ಕೂಟ ಸ್ಪಷ್ಟಪಡಿಸಿದೆ.
ಉದ್ಯೋಗಿಗಳ ಆಗಸ್ಟ್ ತಿಂಗಳಿನ ವೇತನ ಪಾವತಿ ವಿಳಂಬವಾಗಿತ್ತು. ಇದರಿಂದ ದೇಶದ ವಿವಿಧೆಡೆ ಬಿಎಸ್ಎನ್ಎಲ್ ನೌಕರರ ಒಕ್ಕೂಟಗಳು ಪ್ರತಿಭಟನೆ ನಡೆಸಿದ್ದವು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರಲ್ಲಿ ಸುಮಾರು ಶೇ 50ರಷ್ಟು ಮಂದಿಯನ್ನು ಸ್ವಯಂ ಪ್ರೇರಿತ ರಜೆ ಹೋಗುವಂತೆ ತಿಳಿಸುವುದಾಗಿ ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಪುರ್ವಾರ್ ಹೇಳಿದ್ದಾರೆ ಎಂದು ಟ್ರ್ಯಾಕ್.ಇನ್ ಎಂಬ ವೆಬ್ಸೈಟ್ ವರದಿ ಮಾಡಿದೆ.
ಮುಂಬರುವ ದಿನಗಳಲ್ಲಿ ಶೇ 50ರಷ್ಟು ಉದ್ಯೋಗಿಗಳಿಗೆ ವಿಆರ್ಎಸ್ ಯೋಜನೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಇದರಿಂದ ಸುಮಾರು 80 ಸಾವಿರ ಉದ್ಯೋಗಿಗಳು ಹೊರಹೋಗುತ್ತಾರೆ. ಒಂದು ಲಕ್ಷ ಉದ್ಯೋಗಿಗಳು ಉಳಿದುಕೊಳ್ಳುತ್ತಾರೆ. ಬಿಎಸ್ಎನ್ಎಲ್ ಉದ್ಯೋಗಿಗಳ ವೇತನ ವೆಚ್ಚವು ಆದಾಯದ ಶೇ 75ರಷ್ಟನ್ನು ವ್ಯಯಿಸುತ್ತದೆ. ಇದರಿಂದ ಸಂಸ್ಥೆಗೆ ಆದಾಯ ಕಡಿತದಲ್ಲಿ ಉಳಿತಾಯವಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಈ ವರದಿ ಬಗ್ಗೆ ಬಿಎಸ್ಎನ್ಎಲ್ ನೌಕರರ ಒಕ್ಕೂಟದ ಬಳಿ 'ಒನ್ ಇಂಡಿಯಾ' ಮಾಹಿತಿ ಕೇಳಿದಾಗ, ಇದು ಸತ್ಯಕ್ಕೆ ದೂರವಾದ ವರದಿ ಎಂದು ಸ್ಪಷ್ಟಪಡಿಸಿದ್ದಾರೆ. 'ನಾವೆಲ್ಲರೂ ಕೇಂದ್ರ ಸರ್ಕಾರದ ಉದ್ಯೋಗದ ವ್ಯಾಪ್ತಿಯಲ್ಲಿ ಇರುವವರು. ಯಾವುದೇ ಅಧಿಸೂಚನೆ ಇಲ್ಲದೆ ಏಕಾಏಕಿ ಯಾರಿಗೂ ರಾಜೀನಾಮೆ ನೀಡುವಂತೆ ಅಥವಾ ವಿಆರ್ಎಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಲು ಸಾಧ್ಯವಿಲ್ಲ' ಎಂದು ಒಕ್ಕೂಟದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications