Get Updates
Get notified of breaking news, exclusive insights, and must-see stories!

BSF Raising Day 2024: ಗಡಿಗಳಲ್ಲಿ ಭಾರತೀಯ ಶೌರ್ಯದ ಅನಾವರಣ: ದೇಶ ಸೇವೆಯ ಪರಂಪರೆಯನ್ನು ಸ್ಮರಿಸುವ ಬಿಎಸ್ಎಫ್ ಸಂಸ್ಥಾಪನಾ ದಿನ

ಭಾರತೀಯ ಗಡಿ ಭದ್ರತಾ ಪಡೆಯ (ಬಾರ್ಡರ್ ಸೆಕ್ಯುರಿಟಿ ಫೋರ್ಸ್ - ಬಿಎಸ್ಎಫ್) ಸಂಸ್ಥಾಪನಾ ದಿನವಾದ ಡಿಸೆಂಬರ್ 1, ಭಾನುವಾರದಂದು, ಲೋಕಸಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಶುಭಾಶಯಗಳನ್ನು ಕೋರಿದರು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ನೀಡಿದ ರಾಹುಲ್ ಗಾಂಧಿಯವರು, ಬಿಎಸ್ಎಫ್ ಯೋಧರ ಸಮರ್ಪಣಾ ಭಾವ, ಶೌರ್ಯ ಮತ್ತು ತ್ಯಾಗಗಳನ್ನು ಶ್ಲಾಘಿಸಿ, ಅದು ಭಾರತೀಯರಿಗೆ ಪ್ರತಿದಿನವೂ ಹೊಸ ಸ್ಫೂರ್ತಿ ತುಂಬುತ್ತದೆ ಎಂದರು.

"ಬಿಎಸ್ಎಫ್ ಸಂಸ್ಥಾಪನಾ ದಿನದಂದು, ಭಾರತದ ಮುಂಚೂಣಿ ರಕ್ಷಣೆಯಲ್ಲಿ ನಿಂತು, ದೇಶದ ಗಡಿಗಳನ್ನು ಕಾಪಾಡುತ್ತಿರುವ ಧೈರ್ಯಶಾಲಿ ಯೋಧರಿಗೆ ನನ್ನ ಹೃದಯ ಪೂರ್ವಕ ಶುಭಾಶಯಗಳು ಮತ್ತು ನಮನಗಳನ್ನು ಸಲ್ಲಿಸುತ್ತೇನೆ. ನಿಮ್ಮ ಸಮರ್ಪಣೆ, ಧೈರ್ಯ, ಸೇವೆ, ಹಾಗೂ ತ್ಯಾಗಗಳು ಪ್ರತಿಯೊಂದು ದಿನವೂ ನಮಗೆ ಸ್ಫೂರ್ತಿ ನೀಡುತ್ತವೆ. ಜೈ ಹಿಂದ್" ಎಂದು ರಾಹುಲ್ ಗಾಂಧಿ ಸಂದೇಶ ನೀಡಿದ್ದಾರೆ. ಭಾನುವಾರ ಬೆಳಗ್ಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೂ ಈ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ನೀಡಿದರು.

BSF Raising Day 2024 Rahul Gandhi extends greetings

ಪ್ರಧಾನಿ ನರೇಂದ್ರ ಮೋದಿಯವರು ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಅದರ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಮೋದಿಯವರು ಬಿಎಸ್ಎಫ್ ಭಾರತದ ಭದ್ರತಾ ವ್ಯವಸ್ಥೆಯ ಮಹತ್ವದ ಅಂಗ ಎಂದು ವಿವರಿಸಿದ್ದು, ಬಿಎಸ್ಎಫ್ ಯೋಧರು ತಮ್ಮ ಸೇವೆಯಲ್ಲಿ ಅಸಾಧಾರಣ ಧೈರ್ಯ, ಸಮರ್ಪಣಾ ಭಾವ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ನೀಡಿರುವ ಪ್ರಧಾನಿ ಮೋದಿಯವರು, "ಬಿಎಸ್ಎಫ್ ನಮ್ಮ ದೇಶದ ರಕ್ಷಣೆಯಲ್ಲಿ ಅತ್ಯಂತ ಮುಖ್ಯ ಭಾಗವಾಗಿದೆ. ಬಿಎಸ್ಎಫ್ ಯೋಧರ ಧೈರ್ಯ ಮತ್ತು ಕಣ್ಗಾವಲು ನಮ್ಮ ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಬಿಎಸ್ಎಫ್‌ಗೆ ಅದರ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ಸಂದೇಶ ನೀಡಿದ್ದಾರೆ.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೂ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತನ್ನ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಅವರು ಬಿಎಸ್ಎಫ್ ಯೋಧರ ಶೌರ್ಯ ಮತ್ತು ತ್ಯಾಗಗಳನ್ನು ಸ್ಮರಿಸಿದ್ದಾರೆ. ಅವರು ಬಿಎಸ್ಎಫ್ ಯೋಧರ ನಿಸ್ವಾರ್ಥ ಮತ್ತು ದೇಶಕ್ಕಾಗಿ ಪರಮೋನ್ನತ ತ್ಯಾಗಕ್ಕೂ ಸಿದ್ಧವಾಗಿರುವುದು ದೇಶಕ್ಕೆ ಸೇವೆ ಸಲ್ಲಿಸುವುದರ ಅತ್ಯುನ್ನತ ಉದಾಹರಣೆ ಎಂದು ಬಣ್ಣಿಸಿದ್ದಾರೆ.

BSF Raising Day 2024 Rahul Gandhi extends greetings

"ಎಲ್ಲಾ ಬಿಎಸ್ಎಫ್ ಯೋಧರಿಗೆ ಮತ್ತು ಅವರ ಕುಟುಂಬಸ್ತರಿಗೆ ಬಿಎಸ್ಎಫ್ ಸಂಸ್ಥಾಪನಾ ದಿನದ ಶುಭಾಶಯಗಳು. ಭಾರತದ ಗಡಿ ಭದ್ರತಾ ಪಡೆಯ ಯೋಧರು ಭಾರತದ ಗೌರವ ಮತ್ತು ಆಕಾಂಕ್ಷೆಗಳನ್ನು ರಕ್ಷಿಸುತ್ತಾ ಬಂದಿದ್ದು, ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸುವುದಕ್ಕೂ ಹಿಂದೆ ಮುಂದೆ ನೋಡಿದವರಲ್ಲ" ಎಂದು ಅವರು ಸಂದೇಶ ನೀಡಿದ್ದಾರೆ.

"ಬಿಎಸ್ಎಫ್ ಯೋಧರ ತ್ಯಾಗ ಮತ್ತು ಶೌರ್ಯಗಳು ಅಸಂಖ್ಯಾತ ದೇಶಭಕ್ತರಿಗೆ ಸ್ಫೂರ್ತಿ ನೀಡಿದ್ದು, ನಮ್ಮ ದೇಶ ನಿರಂತರವಾಗಿ ಪ್ರಗತಿ ಹೊಂದುವಂತಾಗಲು ಕಾರಣವಾಗಿದೆ. ತಮ್ಮ ಕರ್ತವ್ಯ ನಿರ್ವಹಿಸುತ್ತಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರಿಗೆ ನನ್ನ ಹೃದಯ ತುಂಬಿದ ನಮನಗಳನ್ನು ಅರ್ಪಿಸುತ್ತೇನೆ" ಎಂದು ಅಮಿತ್ ಶಾ ಹೇಳಿದ್ದಾರೆ.

ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಜಗತ್ತಿನ ಅತಿದೊಡ್ಡ ಗಡಿ ರಕ್ಷಣಾ ಸೇನೆಯಾಗಿದ್ದು, ಬಹುತೇಕ 2.65 ಲಕ್ಷ ಯೋಧರನ್ನು ಹೊಂದಿದೆ. ಬಿಎಸ್ಎಫ್ ಪ್ರತಿ ವರ್ಷವೂ ಡಿಸೆಂಬರ್ 1ರಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತದೆ.

ಬಿಎಸ್ಎಫ್ ಅನ್ನು ಭಾರತದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಪಾಕಿಸ್ತಾನ, ಬಳಿಕ ಬಾಂಗ್ಲಾದೇಶದ ಜೊತೆಗಿನ ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸುವ ಸಲುವಾಗಿ ಸ್ಥಾಪಿಸಲಾಯಿತು. ಇದರ ಮೂಲ ಕರ್ತವ್ಯಗಳಲ್ಲಿ ದೇಶದ ಭದ್ರತೆಯನ್ನು ಖಾತ್ರಿಪಡಿಸುವುದು, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವುದು, ಹಾಗೂ ಅಕ್ರಮ ನುಸುಳುಕೋರರನ್ನು ತಡೆಯಯವುದು ಸೇರಿದೆ.

ಬಿಎಸ್ಎಫ್ ಸ್ಥಾಪನೆಯಾದ ಬಳಿಕ, ಈ ಸಂಸ್ಥೆ ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದು, ದೇಶದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿ, ಗಡಿ ಪ್ರದೇಶಗಳಲ್ಲಿ ಶಾಂತಿ, ಸುವ್ಯವಸ್ಥೆ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.

ಭಾರತದಲ್ಲಿ ಬಿಎಸ್ಎಫ್ ಕಾರ್ಯಕ್ಷೇತ್ರ

ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತದ ಪ್ರಾಥಮಿಕ ಗಡಿ ರಕ್ಷಣಾ ಸೇನೆಯಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜೊತೆಗಿನ ಭಾರತದ ಭೂ ಗಡಿ ಪ್ರದೇಶಗಳ ಭದ್ರತೆಯನ್ನು ಕಾಪಾಡುವ ಗುರುತರ ಕರ್ತವ್ಯವನ್ನು ನಿರ್ವಹಿಸುತ್ತದೆ. ಪಂಜಾಬ್, ಪಶ್ಚಿಮ ಬಂಗಾಳ, ಮತ್ತು ಅಸ್ಸಾಂಗಳಲ್ಲಿ ಬಿಎಸ್ಎಫ್ ಕಾರ್ಯವ್ಯಾಪ್ತಿ ಗಡಿಯಿಂದ ದೇಶದ ಒಳಗೆ 50 ಕಿಲೋಮೀಟರ್ ತನಕ ವಿಸ್ತರಿಸಿದೆ. ಇನ್ನು ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳಲ್ಲಿ ಸಂಪೂರ್ಣ ರಾಜ್ಯದಲ್ಲಿ ಬಿಎಸ್ಎಫ್ ಕಾರ್ಯವ್ಯಾಪ್ತಿ ಇದೆ.

ತನ್ನ ಕಾರ್ಯಾಚರಣಾ ವ್ಯಾಪ್ತಿಯಲ್ಲಿ, ಬಿಎಸ್ಎಫ್ ಯೋಧರಿಗೆ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ), ಪಾಸ್‌ಪೋರ್ಟ್ (ಭಾರತದೊಳಗೆ ಪ್ರವೇಶ) ಆ್ಯಕ್ಟ್, ಮತ್ತು ಪಾಸ್‌ಪೋರ್ಟ್ ಆ್ಯಕ್ಟ್ಸ್‌ನಂತಹ ನಿರ್ದಿಷ್ಟ ಕಾನೂನುಗಳ ಅಡಿಯಲ್ಲಿ ತಪಾಸಣೆ ನಡೆಸುವ, ಬಂಧಿಸುವ, ಮತ್ತು ವಶಪಡಿಸಿಕೊಳ್ಳುವ ಅಧಿಕಾರವಿದೆ. ಈ ಕಾರ್ಯವ್ಯಾಪ್ತಿ ಮತ್ತು ಅಧಿಕಾರಗಳು ಬಿಎಸ್ಎಫ್‌ಗೆ ಕಳ್ಳಸಾಗಣೆ, ಗಡಿ ನುಸುಳುವಿಕೆ ಮತ್ತು ಅಕ್ರಮ ವಲಸೆಯಂತಹ ಗಡಿಯಾಚೆಗಿನ ಅಪರಾಧಗಳನ್ನು ತಡೆಗಟ್ಟಲು ಅನುವು ಮಾಡಿಕೊಡುತ್ತದೆ.

ಬಿಎಸ್ಎಫ್‌ನ ಮಾರ್ಗದರ್ಶಿ ತತ್ವಗಳು

ಗಡಿ ಭದ್ರತಾ ಪಡೆ (ಬಿಎಸ್ಎಫ್) ಅದರ ಕ್ರಮಗಳು ಮತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ವಿವರಿಸುವ ದೃಷ್ಟಿಕೋನ ಮತ್ತು ಧ್ಯೇಯಗಳ ಅನುಸಾರ ಕಾರ್ಯ ನಿರ್ವಹಿಸುತ್ತದೆ. ಬಿಎಸ್ಎಫ್ ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ಕಾಯುವ ಪ್ರಮುಖ ಪಡೆಯಾಗಿ, ತನ್ನ ವೃತ್ತಪರತೆ, ಸಮರ್ಪಣೆ, ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ತನ್ನ ಬದ್ಧತೆಗಾಗಿ ಗೌರವ ಸಂಪಾದಿಸುವ ದೃಷ್ಟಿಕೋನವನ್ನು ಹೊಂದಿದೆ. ಈ ದೃಷ್ಟಿ, ನಿರಂತರವಾಗಿ ಹೆಚ್ಚುತ್ತಲೇ ಸಾಗುತ್ತಿರುವ ಗಡಿ ಭದ್ರತಾ ಅಪಾಯಗಳು ಮತ್ತು ಸವಾಲುಗಳಿಗೆ ಹೊಂದಿಕೊಳ್ಳುವ ಬಿಎಸ್ಎಫ್ ಗುರಿಯನ್ನು ಪ್ರತಿನಿಧಿಸುತ್ತದೆ.

ಬಿಎಸ್ಎಫ್ ಧ್ಯೇಯವಾಕ್ಯವಾದ 'ಡ್ಯೂಟಿ ಅನ್‌ಟು ಡೆತ್' (ಜೀವನ ಪರ್ಯಂತ ಕರ್ತವ್ಯ) ಎನ್ನುವುದು ಅತ್ಯಂತ ಅಪಾಯಕಾರಿ ಸನ್ನಿವೇಶ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲೂ ದೇಶದ ಗಡಿಗಳನ್ನು ಕಾಪಾಡುವಲ್ಲಿ ಬಿಎಸ್ಎಫ್ ಯೋಧರ ಬದ್ಧತೆಗೆ ಸಾಕ್ಷಿಯಾಗಿದೆ. ಈ ಧ್ಯೇಯವಾಕ್ಯ ಬಿಎಸ್ಎಫ್‌ನ ಪ್ರಮುಖ ಮೌಲ್ಯಗಳಾದ ಧೈರ್ಯ, ತ್ಯಾಗ ಮತ್ತು ದೇಶಕ್ಕೆ ನಿಸ್ವಾರ್ಥ ಸೇವೆಗಳನ್ನು ಪ್ರತಿನಿಧಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+