ಸಾಯೋ ಮೊದಲು ಅಣ್ಣ ಹೇಳಿದಂತೆ ಕೇಳಿದ್ರೆ ಆ ಉಗ್ರ ಉಳಿಯುತ್ತಿದ್ದ!
ಮನೆಯೊಂದರಲ್ಲಿ ಕುಳಿತು ಯದ್ವಾತದ್ವಾ ಗುಂಡು ಹಾರಿಸುತ್ತಿದ್ದ ಉಗ್ರನಿಗೆ ಕಾನ್ಪುರದಲ್ಲಿದ್ದ ಆತನ ಅಣ್ಣನೊಂದಿಗೆ ಫೋನಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದ ಭದ್ರತಾ ಪಡೆ ಅಧಿಕಾರಿಗಳು.
ಲಖನೌ, ಮಾರ್ಚ್ 8: ತನ್ನ ಅಣ್ಣನ ಮಾತನ್ನು ಕೇಳಿದ್ದರೆ ಆ ಉಗ್ರ ಬದುಕಿರುತ್ತಿದ್ದ. ಇಲ್ಲಿ ಮನೆಯೊಂದರಲ್ಲಿ ಕುಳಿತು ಯದ್ವಾತದ್ವಾ ಗುಂಡು ಹಾರಿಸಿ ಕಡೆಗೆ ಭದ್ರತಾ ದಳದ ಗಂಟೆಗಟ್ಟಲೆ ಕಾರ್ಯಾಚರಣೆಯ ನಂತರ ಗುಂಡೇಟು ತಿಂದು ಅಸುನೀಗಿದ ಉಗ್ರ ಸೈಫುಲ್ಲಾನ ಕಥೆಯಿದು.
ತನ್ನ ಸಾವಿನ ಕೊನೆಯ ಕ್ಷಣಗಳಲ್ಲಿ ಕಾನ್ಪುರದಲ್ಲಿ ನೆಲೆಸಿರುವ ತನ್ನ ಸಹೋದರ ಖಾಲೀದ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಈತನಿಗೆ, ಆತನ ಅಣ್ಣ ಶರಣಾಗುವಂತೆ ಪದೇ ಪದೇ ಮನವಿ ಮಾಡಿದ್ದ. ಅತ್ತೂ ಕರೆದು ಶರಣಾಗಬೇಕೆಂದು ಫೋನಿನಲ್ಲೇ ಹಟ ಹಿಡಿದ.[ಲಖನೌನ ಕಟ್ಟಡದಲ್ಲಿ ಅಡಗಿದ್ದ ಶಂಕಿತ ಐಸಿಸ್ ಉಗ್ರನ ಹತ್ಯೆ]
ಆದರೆ, ಧರ್ಮಾಂಧನಾಗಿದ್ದ ಆತ ಅಣ್ಣನ ಮಾತನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಭದ್ರತಾ ಪಡೆಗಳೊಂದಿಗೆ ಹೋರಾಡಿಯೇ ಪ್ರಾಣ ಬಿಟ್ಟ.
ಆತ ಮಾತು ಕೇಳಲಿಲ್ಲ
ಅಸಲಿಗೆ, ಭದ್ರತಾ ಪಡೆಗಳಿಗೆ ಈತನನ್ನು ಕೊಲ್ಲುವ ಯಾವುದೇ ಇರಾದೆಯಿರಲಿಲ್ಲ. ಈತನನ್ನು ಜೀವಂತವಾಗಿ ಹಿಡಿಯಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟಿದ್ದವು.
ಶರಣಾಗಿಸಲು ತಂತ್ರ
ಹಾಗಾಗಿಯೇ, ಮಧ್ಯರಾತ್ರಿ ಪೂರಾ ಆತ ಹಾಗೂ ಆತನ ಸಹಚರರ ಮೇಲೆ ಗುಂಡಿನ ಚಕಮಕಿ ನಡೆಸಿದ ನಡೆಸುವಾಗಲೇ ಸೈಫುಲ್ಲಾ ಅಣ್ಣನಿಗೆ ಕರೆ ಮಾಡಿ ಸೈಫುಲ್ಲಾನಿಗೆ ಶರಣಾಗತಿಯಾಗುವಂತೆ ತಿಳಿ ಹೇಳಲು ಕೋರಿದರು.[ಲಕ್ನೊ: ಕಟ್ಟಡದಲ್ಲಿ ಅವಿತಿರುವ ಉಗ್ರ 'ಐಸಿಸ್' ಸದಸ್ಯ - ಗುಪ್ತಚರ ದಳ]
ಗೋಗರೆದ ಅಣ್ಣ
ಆನಂತರ, ಮೊಬೈಲ್ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿ ಉಗ್ರನಿದ್ದ ಮನೆಯ ಮುಖ್ಯ ದ್ವಾರದ ಬಾಗಿಲ ಕೆಳಗಿನಿಂದ ಮನೆಯ ಒಳಗೆ ಮೊಬೈಲ್ ತೂರಿ ಹೋಗುವಂತೆ ಎಸೆಯಲಾಯಿತು. ಮೊಬೈಲ್ ನಲ್ಲಿ ಅತ್ತ ಅಣ್ಣ ಖಾಲೀದ್ ಜೋರಾಗಿ ಅಳುತ್ತಾ ''ತಮ್ಮಾ ಶರಣಾಗು'' ಎಂದು ಕೂಗುತ್ತಲೇ ಇದ್ದ.
ಮಾತು ಕೇಳದ ತಮ್ಮ
ಅಣ್ಣನ ದನಿ ಕೇಳಿ ಕೊಂಚ ಭಾವುಕನಾದ ಉಗ್ರ ಸೈಫುಲ್ಲಾ, ಮೊಬೈಲ್ ಕೈಗೆತ್ತಿಕೊಂಡು ಗಳಗಳನೇ ಅಳಲಾರಂಭಿಸಿದ. ಆದರೆ, ಅಣ್ಣನ ಮಾತು ಕೇಳಲಿಲ್ಲ. ತಾನೀಗಾಗಲೇ ಸಂಘಟನೆಯೊಂದರಲ್ಲಿ ಸಕ್ರಿಯನಾಗಿರುವುದರಿಂದ ತಾನು ಹುತಾತ್ಮನಾಗುತ್ತೇನೆಯೇ ಹೊರತು, ಶರಣಾಗುವುದಿಲ್ಲ ಎಂದು ಹೇಳಿದ. ಪದೇ ಪದೇ ಅಣ್ಣ ಮಾಡಿದ ಮನವಿ ವ್ಯರ್ಥವಾಯಿತು. ಮತ್ತೆ ಆತ ಪೊಲೀಸರತ್ತ ತನ್ನ ದಾಳಿ ಮುಂದುವರಿಸಿದ.
ಮರಣ ಹೊಂದಿದ
ಅಣ್ಣನೊಂದಿಗಿನ ಸೆಂಟಿಮೆಂಟ್ ವರ್ಕ್ ಔಟ್ ಆಗದ್ದನ್ನು ಗಮನಿಸಿದ ಭದ್ರತಾ ಪಡೆಗಳು ಮನೆಯ ಮೇಲೆ ಮೆಣಸಿನಕಾಯಿ ಘಾಟು ಸೂಸುವ ಬಾಂಬುಗಳನ್ನು, ದಟ್ಟ ಹೊಗೆಯ ಬಾಂಬುಗಳನ್ನು ಎಸೆದರು. ಆದರೂ, ಆತ ಹೊರಬರಲಿಲ್ಲ. ಅಂತಿಮವಾಗಿ, ಗುಂಡಿನ ಚಕಮಕಿ ನಡೆಸಬೇಕಾಯಿತು. ಅದರಲ್ಲಿ ಆತ ಸತ್ತುಹೋದ.