ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು
ನವದೆಹಲಿ, ಫೆಬ್ರವರಿ 27 : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ತರಬೇತಿ ನೆಲೆಗಳನ್ನು ಧ್ವಂಸಗೊಳಿಸಿದ ನಂತರ, ಪಾಕಿಸ್ತಾನದ ಪ್ರತಿದಾಳಿಯನ್ನು ಹತ್ತಿಕ್ಕುವಲ್ಲಿ ಭಾರತದ ಸೇನೆ ಯಶಸ್ವಿಯಾದರೂ, ಒಂದು ವಿಲಕ್ಷಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.
ಬುಧವಾರ ಬೆಳಿಗ್ಗೆಯೇ ಭಾರತದ ಮೇಲೆ ಪ್ರತಿದಾಳಿ ನಡೆಸಲು ಬಂದು ಬಾಂಬ್ ಎಸೆದು ಪರಾರಿಯಾಗುತ್ತಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ, ಭಾರತಕ್ಕೆ ಸೇರಿದ ಮಿಗ್ 21 ಅನ್ನು ಹೊಡೆದುರುಳಿಸಲಾಗಿದೆ ಮತ್ತು ಅಭಿನಂದನ್ ಎಂಬ ಪೈಲಟ್ ನಾಪತ್ತೆಯಾಗಿದ್ದಾರೆ.
ಭಾರತದ ವಾಯು ಸೇನೆಯ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಪತ್ತೆಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿರುವ ವಿದೇಶಾಂಗ ಸಚಿವಾಲಯ, ಈ ಸಂಗತಿಯನ್ನು ದೃಢಪಡಿಸಿಕೊಳ್ಳುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಆದರೆ, ಪಾಕಿಸ್ತಾನದ ಮಾಧ್ಯಮಗಳು ಹೇಳಿರುವಂತೆ, ಅಭಿನಂದನ್ ಅವರು ಪಾಕಿಸ್ತಾನದ ಸೇನೆಯ ವಶದಲ್ಲಿದ್ದು, ಪಾಕಿಸ್ತಾನದೊಡನೆ ಮಾತುಕತೆ ನಡೆಸಿ ಅವರನ್ನು ವಾಪಸ್ ಕರೆತರಬೇಕು ಎಂದು ಭಾರತೀಯರು ಆಗ್ರಹಿಸುತ್ತಿದ್ದಾರೆ. ಈ ಸಂಗತಿಯನ್ನು ಪಾಕಿಸ್ತಾನ ಸರಕಾರ ಕೂಡ ಅಧಿೃತವಾಗಿ ಹೇಳಿಲ್ಲ. ಆದರೆ, ಅಭಿನಂದನ್ ಅವರು ನಾಪತ್ತೆಯಾಗಿರುವುದು ಭಾರತೀಯರನ್ನು ಚಿಂತೆಗೀಡು ಮಾಡಿದೆ.
ಮಾತುಕತೆ ನಡೆಸಿ ವಾಪಸ್ ಕರೆತನ್ನಿ : ಭಾರತದಿಂದ ಹೊಡೆತ ತಿಂದು ಬಸವಳಿದಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ತಾವಾಗಿಯೇ ಶಾಂತಿ ಮಾತುಕತೆಯನ್ನು ಆರಂಭಿಸಬೇಕೆಂದು ಆಗ್ರಹಿಸುತ್ತಿರುವ ಸಮಯದಲ್ಲಿ, ಭಾರತೀಯ ಸೇನೆಯ ಯುವ ಸೇನಾನಿ ಅಭಿನಂದನ್ ಅವರನ್ನು ವಾಪಸ್ ಕರೆತರಲು ನರೇಂದ್ರ ಮೋದಿಯವರು ಮಾತುಕತೆ ನಡೆಸಬೇಕು. ನೀವು ಹೀಗೆ ಮಾಡಿದರೆ ನೀವು ಮೊದಲಿಗಿಂತಲೂ ದೊಡ್ಡವರಾಗುತ್ತೀರಿ ಎಂದು ಸುಬ್ರಮಣಿಯನ್ ಎಂಬುವವರು ಕೋರಿದ್ದಾರೆ.
ಹೆಮ್ಮೆಯ ಅಭಿಗೆ ಬಿಗ್ ಸೆಲ್ಯೂಟ್ : ಕ್ರಿಕೆಟ್ ಅಭಿಮಾನಿಗಳಾಗಿರುವ ನಾವು, ಒತ್ತಡದ ಪರಿಸ್ಥಿತಿ ಬಂದಾಗ ಧೋನಿ ಅಥವಾ ಸಚಿನ್ ಅವರತ್ತ ಅಪಾರ ನಿರೀಕ್ಷೆಗಳೊಂದಿಗೆ ನೋಡುತ್ತಿದ್ದೆವು. ಆದರೆ, ಅಭಿನಂದನ್ ಅವರಿರುವ ಪರಿಸ್ಥಿತಿಯನ್ನು ನೋಡಿದರೆ, ಧೋನಿ ಅಥವಾ ಸಚಿನ್ ಎದುರಿಸಿದ ಒತ್ತಡ ಜೋಕ್ ನಂತೆ ಕಾಣಿಸುತ್ತದೆ. ಬಂಧಿತನಾದರೂ ಅವರು ಆ ಒತ್ತಡವನ್ನು ಸಹಿಸಿಕೊಂಡಿದ್ದಾರೆ. ಹೆಮ್ಮೆಯ ಅಭಿನಂದನ್ ಅವರಿಗೆ ಬಿಗ್ ಸೆಲ್ಯೂಟ್ ಎಂದು ಟ್ವಿಟ್ಟಿಗರೊಬ್ಬರು ಟ್ವೀಟಿಸಿದ್ದಾರೆ.
ನಿನಗೆ ತಲೆಬಾಗುತ್ತೇನೆ ಎಂದ ಸದ್ಗುರು : ನಮ್ಮ ದೇಶದ ಎಲ್ಲ ಚಟುವಟಿಕೆಗಳು ಮತ್ತು ಸಾಧನೆಗಳು ನಮ್ಮ ಧೀರ ಸೈನಿಕರ ಸೇವೆ ಮತ್ತು ತ್ಯಾಗದ ಬುನಾದಿಯ ಮೇಲೆ ನಿಂತಿದೆ ಮತ್ತು ಭದ್ರವಾಗಿದೆ. ನೀವು (ಅಭಿನಂದನ್) ಭಾರತದ ಹೆಮ್ಮೆಯ ಮತ್ತು ದಿಟ್ಟ ಪುತ್ರ. ನಿಮಗೆ ನಾನು ತಲೆಬಾಗುತ್ತೇನೆ ಎಂದು ಸದ್ಗುರು ಟ್ವೀಟ್ ಮಾಡಿದ್ದಾರೆ.
It is upon the foundation of service & sacrifice of our brave soldiers that all our activity & achievements rest. A proud and brave son of Bharat. I bow to you. -Sg #Abhinandan
— Sadhguru (@SadhguruJV) February 27, 2019
ಭಾರತದ ಧೀಮಂತ ಪೈಲಟ್, ವಿಂಗ್ ಕಮಾಂಡರ್ ಅವರು ವಾಪಸ್ ಭಾರತಕ್ಕೆ ಬರಲೆಂದು ಪ್ರತಿಯೊಬ್ಬ ಭಾರತೀಯನೂ ಪ್ರಾರ್ಥಿಸುತ್ತಿದ್ದಾನೆ. ಪ್ರತಿ ಭಾರತೀಯನೂ ಅಭಿನಂದನ್ ಗಾಗಿ ಹೆಮ್ಮೆಪಡುತ್ತಾರೆ ಎಂದು ಅವರ ಕುಟುಂಬಕ್ಕೆ ಹೇಳಬಯಸುತ್ತೇನೆ. ಅವರು ಸುರಕ್ಷಿತವಾಗಿ ವಾಪಸ್ ಬರಲು ಕೋಟ್ಯಂತರ ಶುಭಾಶಯಗಳು ಅವರಿಗಾಗಿ ಇವೆ ಎಂದು ಮಂಜಿಂದರ್ ಎಂಬುವವರು ಭಾವುಕರಾಗಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ, ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್, ಗಟ್ಟಿ ಗುಂಡಿಗೆಯ ಅಭಿನಂದನ್ ಅವರಿಗಾಗಿ ಪ್ರಾರ್ಥಿಸುತ್ತೇವೆ. 130 ಕೋಟಿ ಭಾರತೀಯರು ನಿಮಗೆ ಬೆಂಬಲವಾಗಿ ನಿಂತಿದ್ದಾರೆ. ಸೈನಿಕನೇ ಧೈರ್ಯದಿಂದಿರು ಎಂದು ಹೇಳಿದೆ. ಭಾರತ ಆಕ್ರಮಣ ಮಾಡಿದ್ದು ಭಯೋತ್ಪಾದಕರ ಮೇಲೆ, ಆದರೆ ಪಾಕಿಸ್ತಾನ ಆಕ್ರಮಣ ಮಾಡುತ್ತಿರುವುದು ಭಾರತೀಯ ಸೈನಿಕರ ಮೇಲೆ. ಇದು ನ್ಯಾಯಸಮ್ಮತವಲ್ಲ. ಅಭಿನಂದನ್ ಅವರು ವಾಪಸ್ ಬರಲೇಬೇಕು ಎಂದು ಪವನ್ ಎಂಬುವವರು ತಮ್ಮ ಮನದಂಗಿತವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications