ಕವಿತೆಯ ಮೂಲಕ ಕುಸ್ತಿಪಟುಗಳಿಗೆ ತಿರುಗೇಟು ಕೊಟ್ಟ ಬ್ರಿಜ್ ಭೂಷಣ್ ಸಿಂಗ್: ಮತ್ತೆ ಮೋದಿ ಸರ್ಕಾರ ಬರುವ ವಿಶ್ವಾಸ
ಭಾರತದ ಪ್ರಮುಖ ಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕವಿತೆಯ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ 2024 ರ ಚುನಾವಣೆಗಾಗಿ ಬಿಜೆಪಿಯ 'ಮಹಾಸಂಪರ್ಕ ಅಭಿಯಾನ' ಭಾಗವಾಗಿ ನಡೆದ ರ್ಯಾಲಿಯಲ್ಲಿ ಭಾವನಾತ್ಮಕವಾಗಿ ಭಾಷಣವನ್ನು ಪ್ರಾರಂಭಿಸಿದರು. ತಮ್ಮ ಕವನದಲ್ಲಿ ಸಂಕಟ, ದ್ರೋಹ ಮತ್ತು ಪ್ರೀತಿಯ ಉಲ್ಲೇಖಗಳನ್ನು ಮಾಡುವ ಮೂಲಕ ಕುಸ್ತಿಪಟುಗಳಿಗೆ ತಿರುಗೇಟು ಕೊಡುವ ಪ್ರಯತ್ನ ಮಾಡಿದರು.

"ಕೆಲವೊಮ್ಮೆ ಕಣ್ಣೀರು, ಕೆಲವೊಮ್ಮೆ ದುಃಖ, ಮತ್ತು ಕೆಲವೊಮ್ಮೆ ವಿಷವನ್ನು ಕುಡಿಯುತ್ತೀರಿ. ಆಗ ಮಾತ್ರ ನೀವು ಸಮಾಜದಲ್ಲಿ ಬದುಕುತ್ತೀರಿ. ಇದು ನನ್ನ ಪ್ರೀತಿಗೆ ನಾನು ಪಡೆದ ಪ್ರತಿಫಲ, ಅವರು ನನ್ನನ್ನು ವಿಶ್ವಾಸದ್ರೋಹಿ ಎಂದು ಕರೆಯುತ್ತಾರೆ. ಕುಖ್ಯಾತಿ ಅಥವಾ ಖ್ಯಾತಿ ಎಂದು ಕರೆಯುತ್ತಾರೆ, ಅವರು ನನ್ನ ಹೇಸರು ಹೇಳುತ್ತಾರೆ" ಎಂದು ಕವಿತೆಯ ಮೂಲಕ ಹೇಳಿದ್ದಾರೆ.
ಕೈಸರ್ಗಂಜ್ ಕ್ಷೇತ್ರದಿಂದ ಮತ್ತೆ ಸ್ಪರ್ಧೆ
2024ರ ಲೋಕಸಭಾ ಚುನಾವಣೆಯಲ್ಲಿ ಕೈಸರ್ಗಂಜ್ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಘೋಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳ ಸಾಧನೆ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಆಡಳಿತದಲ್ಲಿ ಭಾರತೀಯ ಪ್ರದೇಶವನ್ನು ನೆರೆ ರಾಷ್ಟ್ರಗಳು ಆಕ್ರಮಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು ಮತ್ತು ಪ್ರಧಾನಿ ಮೋದಿ ಅಧಿಕಾರದಲ್ಲಿದ್ದರೆ ಅದನ್ನು ಮರಳಿ ಪಡೆಯಬಹುದಿತ್ತು ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬ್ರಿಜ್ ಭೂಷಣ್
"ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಭಾರತದ 78,000 ಚದರ ಕಿಲೋಮೀಟರ್ ಭೂಮಿಯನ್ನು ಪಾಕಿಸ್ತಾನ ವಶಪಡಿಸಿಕೊಂಡಿತು. 1962 ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿ 33,000 ಚದರ ಕಿಲೋಮೀಟರ್ ಭಾರತೀಯ ಭೂಮಿಯನ್ನು ವಶಪಡಿಸಿಕೊಂಡಿದೆ. 1972 ರಲ್ಲಿ, 92,000 ಪಾಕಿಸ್ತಾನಿ ಯುದ್ಧ ಕೈದಿಗಳನ್ನು (ಪಿಒಡಬ್ಲ್ಯೂ) ಭಾರತ ಇಟ್ಟುಕೊಂಡಿತ್ತು, ಪಾಕಿಸ್ತಾನ ವಶಪಡಿಸಿಕೊಂಡ ಭೂಮಿಯನ್ನು ಮರಳಿ ಪಡೆಯಲು ಇದು ಒಂದು ಅವಕಾಶವಾಗಿತ್ತು, ಕಾಂಗ್ರೆಸ್ ಬದಲಿಗೆ ಪ್ರಧಾನಿ ಮೋದಿ ಇದ್ದರೆ, ಅವರು ಖಂಡಿತವಾಗಿಯೂ ಭಾರತದ ಜಾಗವನ್ನು ಮರಳಿ ಪಡೆಯುತ್ತಿದ್ದರು," ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದರು.
ಪ್ರಧಾನಿ ಮೋದಿ ಆಡಳಿತವನ್ನು ಅವರು ಶ್ಲಾಘಿಸಿದರು, ಕಾಶ್ಮೀರದ ಬಗ್ಗೆ ಮೋದಿಯವರ ನಿರ್ಧಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ರಸ್ತೆಗಳು, ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಸ್ವದೇಶಿ ರಕ್ಷಣಾ ಉತ್ಪಾದನೆಯಲ್ಲಿ ಪ್ರಗತಿ ಹೊಂದುತ್ತಿರುವುದನ್ನು ಶ್ಲಾಘಿಸಿದರು. ಬ್ರಿಜ್ ಭೂಷಣ್ ಸಿಂಗ್ ಅವರ "ಜನ್ ಚೇತನ ಮಹಾರ್ಯಾಲಿ" ಜೂನ್ 5 ರಂದು ನಿಗದಿಯಾಗಿತ್ತು, ಆದರೆ ಭದ್ರತಾ ಕಾರಣಗಳಿಂದ ಮುಂದೂಡಲ್ಪಟ್ಟಿತು.
ಶನಿವಾರ, ಪ್ರತಿಭಟನಾ ನಿರತ ಕುಸ್ತಿಪಟುಗಳು ಬ್ರಿಜ್ ಭೂಷಣ್ ಸಿಂಗ್ ತಮ್ಮ ಪ್ರಭಾವವನ್ನು ಬಳಸಿಕೊಂಡು ಲೈಂಗಿಕ ಕಿರುಕುಳದ ಸಂತ್ರಸ್ತರನ್ನು ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ ಮತ್ತು ಅವರ ಹೇಳಿಕೆಗಳನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜೂನ್ 15 ರೊಳಗೆ ಅವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳದಿದ್ದರೆ ತಮ್ಮ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ ಬೆದರಿಕೆ ಹಾಕಿದರು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಜೂನ್ 15 ರೊಳಗೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ.












Click it and Unblock the Notifications