ಮೋದಿ ತವರಿನಲ್ಲೇ ಆಯ್ತು ಹೊಸ ನೋಟಿನ ಭ್ರಷ್ಟಾಚಾರ
ಅಹಮದಾಬಾದ್,ನವೆಂಬರ್ 17: ದೇಶದಲ್ಲಿ ಐನೂರು ಸಾವಿರ ರು ನೋಟು ಬದಲಾವಣೆಯಿಂದ ದೇಶದಲ್ಲಿರುವ ಭ್ರಷ್ಟಾಚಾರ ನಿವಾರಣೆಯಾಗುತ್ತದೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಆದರೆ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದೆ.
ಗುಜರಾತಿನಲ್ಲಿ ಕಾಂಡ್ಲಾ ಪೋರ್ಟ್ ಟ್ರಸ್ಟಿನ ಇಬ್ಬರು ಅಧಿಕಾರಿಗಳು ಒಟ್ಟು ರು.2.90 ಲಕ್ಷ ಲಂಚ ಸ್ವೀಕರಿಸುವಾಗ ಬಂಧಿತರಾಗಿದ್ದಾರೆ. ಇನ್ನು ಚಕಿತಗೊಳಿಸುವ ಸಂಗತಿಯೆಂದರೆ ಈ ಲಂಚ ಸ್ವೀಕೃತಗೊಂಡಿರುವುದು ನವೆಂಬರ್ 11ರಂದು ಬಿಡುಗಡೆಯಾಗಿರುವ ಹೊಚ್ಚ ಹೊಸ ಎರಡು ಸಾವಿರ ನೋಟುಗಳಲ್ಲಿ. ಇವರಲ್ಲಿ ಒಬ್ಬರ ಮನೆಯಲ್ಲಿ ಒಟ್ಟು ರು 40 ಸಾವಿರ ಗಳನ್ನು ವಶಪಡಿಸಿಕೊಂಡಿದ್ದಾರೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]

ಪ್ರಸ್ತುತ ಬ್ಯಾಂಕ್ ಒಂದರಿಂದ ಹಣ ಡ್ರಾ ಮಾಡಿಕೊಳ್ಳುವುದಕ್ಕೆ ಇರುವ ಮಿತಿ ಕೇವಲ ರು 24 ಸಾವಿರ ರೂಪಾಯಿ. ಇಷ್ಟಾಗಿಯೂ ಕಾಂಡ್ಲ ಬಂದರು ಮಂಡಳಿಯ ಅಧೀಕ್ಷಕ ಎಂಜಿನಿಯರ್ ಪಿ.ಶ್ರೀನಿವಾಸು ಹಾಗೂ ಉಪ ವಿಭಾಗೀಯ ಅಧಿಕಾರಿ ಕೆ.ಕೋಮ್ಟೆಕರ್ ಅವರು, ಖಾಸಗಿ ವಿದ್ಯುತ್ ಘಟಕದ ಬಾಕಿ ಬಿಲ್ ಪಾವತಿಗೆ ರು 4.4 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಗುಜರಾತ್ ನ ಭ್ರಷ್ಟಾಚಾರ ವಿರೋಧಿ ಬ್ಯೂರೊ ಅಧಿಕಾರಿಗಳು ಹೇಳಿದ್ದಾರೆ.
ಈ ಅಧಿಕಾರಿಗಳಿಗೆ ಮಧ್ಯಸ್ಥಿಕೆ ವಹಿಸಿದ್ದ ದಲ್ಲಾಳಿ ರುದ್ರೇಶ ರು 2.5 ಲಕ್ಷ ವನ್ನು ಈ ಘಟಕದಿಂದ ಪಡೆದಿದ್ದ ಎನ್ನಲಾಗಿದೆ. ಈ ವಿಷಯವಾಗಿ ದಲ್ಲಾಳಿಯನ್ನೂ ಬಂಧಿಸಲಾಗಿದೆ.
ಇನ್ನು ಈ ಬಗ್ಗೆ ಶ್ರೀನಿವಾಸು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಹಣ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ಅವರಿನ್ನು ಬಾಯಿಬಿಟ್ಟಿಲ್ಲ. ಇದರ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications