ಸಲ್ಮಾನ್ಗೆ ಜಾಮೀನು ಮಂಜೂರು: ನಿಟ್ಟುಸಿರು ಬಿಟ್ಟ ಬಾಲಿವುಡ್
ಬೆಂಗಳೂರು, ಏಪ್ರಿಲ್ 07: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನಟ ಸಲ್ಮಾನ್ ಖಾನ್ಗೆ ಜೋಧಪುರ ಸೆಷನ್ಸ್ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಸಲ್ಮಾನ್ಗೆ ಜಾಮೀನು ನೀಡಿ ತೀರ್ಪು ಪ್ರಕಟಿಸಿದರು. ಜೋಧಪುರ ಜೆಎಂಸಿ ನ್ಯಾಯಾಲಯ ಸಲ್ಮಾನ್ ಖಾನ್ಗೆ ಗುರುವಾರ ಶಿಕ್ಷೆ ಪ್ರಕಟಿಸಿತ್ತು.
ಅದರ ಬೆನ್ನಲ್ಲೇ ಸಲ್ಮಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಜೋಧಪುರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.
ಕಾರಾಗೃಹದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಂಜೆ 5 ರ ಸುಮಾರಿಗೆ ಸಲ್ಮಾನ್ ಖಾನ್ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಶನಿವಾರ ಬೆಳಿಗ್ಗೆ ಪುನಃ ವಿಚಾರಣೆ ಆರಂಭಿಸಿದ ನ್ಯಾಯಾಲಯ ಮಧ್ಯಾಹ್ನ ಜಾಮೀನು ಮಂಜೂರು ಮಾಡಿದೆ. 50,000 ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಸಲ್ಮಾನ್ಗೆ ಜಾಮೀನು ನೀಡಲಾಗಿದೆ.

ಬಾಲಿವುಡ್ ನಿರ್ಮಾಪಕರು ನಿರಾಳ:
ಸಲ್ಮಾನ್ ನಾಯಕರಾಗಿರುವ ಸಿನಿಮಾಗಳ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದ ಬಾಲಿವುಡ್ನ ನಿರ್ಮಾಪಕರು ನಿರಾಳರಾಗಿದ್ದಾರೆ.
ಸಲ್ಮಾನ್ ಜೈಲು ಸೇರಿದ್ದರಿಂದ ಸುಮಾರು 800 ಕೋಟಿ ಮೊತ್ತದ ಸಿನಿಮಾಗಳ ಭವಿಷ್ಯ ಅತಂತ್ರವಾಗಿತ್ತು. ಇದರಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಬಾಲಿವುಡ್ನ ನಿರ್ಮಾಪಕರು ಕಳವಳ ವ್ಯಕ್ತಪಡಿಸಿದ್ದರು.
ತೀರ್ಪು ಪ್ರಕಟಿಸಿದ ರವೀಂದ್ರ ಕುಮಾರ್ ಜೋಶಿ:
ಸಿರೊಹ್ನಲ್ಲಿರುವ ನ್ಯಾಯಾಲಯಕ್ಕೆ ವರ್ಗಾವಣೆಯಾಗುವ ವೇಳೆ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಸಲ್ಮಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ರಾಜಸ್ಥಾನದ ವಿವಿಧ ನ್ಯಾಯಾಲಯಗಳಿಂದ ನ್ಯಾಯಾಧೀಶರನ್ನು ಶುಕ್ರವಾರ ರಾತ್ರಿ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ರವೀಂದ್ರ ಕುಮಾರ್ ಜೋಶಿ ಮತ್ತು ಸಲ್ಮಾನ್ಗೆ ಐದು ವರ್ಷ ಶಿಕ್ಷೆ ವಿಧಿಸಿದ ದೇವ್ ಕುಮಾರ್ ಖತ್ರಿ ಅವರೂ ಸೇರಿದ್ದರು.
ತೀರ್ಪು ಪ್ರಕಟಿಸುವುದಕ್ಕೂ ಮುನ್ನ ನ್ಯಾಯಾಧೀಶರಾದ ಜೋಶಿ ಮತ್ತು ಖತ್ರಿ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಸಮಾಲೋಚನೆ ನಡೆಸಿದ್ದರು.
ರವೀಂದ್ರ ಕುಮಾರ್ ಜೋಶಿ ಅವರ ವರ್ಗಾವಣೆಯಿಂದ ಸಲ್ಮಾನ್ ಜಾಮೀನು ಅರ್ಜಿಯ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ, ಬಾಕಿ ಉಳಿದಿರುವ ಕೆಲವು ಪ್ರಕರಣಗಳ ವಿಚಾರಣೆಯನ್ನು ಆಯಾ ನ್ಯಾಯಾಧೀಶರೇ ಮುಂದುವರಿಸುವುದರಿಂದ ಆತಂಕ ದೂರವಾಗಿತ್ತು.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿದ್ದ ಜೋಧಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಸಹ ಆರೋಪಿಗಳಾಗಿದ್ದ ನಟರಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ಟಬು, ನೀಲಂ ಕೊಠಾರಿ ಮತ್ತು ಸ್ಥಳೀಯ ಪ್ರವಾಸಿ ಗೈಡ್ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅವರನ್ನು ಖುಲಾಸೆ ಮಾಡಲಾಗಿತ್ತು.
ಅಭಿಮಾನಿಗಳ ಸಂತಸ:
ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಗುತ್ತಿದ್ದಂತೆಯೇ ಸಲ್ಲು ಮಿಯಾ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದರು. ಜೋಧಪುರ ನ್ಯಾಯಾಲಯದ ಹೊರಭಾಗದಲ್ಲಿ ನೆರೆದಿದ್ದ ಜನರು ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗಿದರು.
ನ್ಯಾಯಾಲಯದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಗುಂಪುಗೂಡುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.












Click it and Unblock the Notifications