ಹಮೀದ್ ಅನ್ಸಾರಿ ವಿರುದ್ಧ ಬಿಜೆಪಿಯಿಂದ ವಾಗ್ದಾಳಿ
ನವದೆಹಲಿ, ಜುಲೈ15: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪಾಕಿಸ್ತಾನಿ ಪತ್ರಕರ್ತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಶುಕ್ರವಾರ ಇದನ್ನು ಮತ್ತಷ್ಟು ಹೆಚ್ಚಿಸಿದೆ.
ದೇಶದಲ್ಲಿ ನಡೆದ ಸಮಾವೇಶ ಒಂದರಲ್ಲಿ ಇಬ್ಬರೂ ವೇದಿಕೆಯನ್ನು ಹಂಚಿಕೊಂಡಿದ್ದಾರೆಂದು ಹೇಳಲಾದ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದರೆ, ಬಿಜೆಪಿಯ ಹೊಸ ಆರೋಪಗಳನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತಳ್ಳಿಹಾಕಿದ್ದಾರೆ.
ತಾವು ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಜಾರನ್ನು ಯಾವುದೇ ಸಮ್ಮೇಳನಕ್ಕೆ ಎಂದಿಗೂ ಆಹ್ವಾನಿಸಿರಲಿಲ್ಲ ಎಂಬ ಹಿಂದಿನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಶುಕ್ರವಾರ ಹೇಳಿದ್ದಾರೆ.
ಯುಪಿಎ ಆಡಳಿತಾವಧಿಯಲ್ಲಿ ತಾನು ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಆ ಭೇಟಿಯಲ್ಲಿ ಇಲ್ಲಿ ಸಂಗ್ರಹಿಸಿದ ಸೂಕ್ಷ್ಮ ಮಾಹಿತಿಯನ್ನು ತನ್ನ ದೇಶದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ರವಾನಿಸಿದ್ದೇನೆ ಎಂದು ನುಸ್ರತ್ ಮಿರ್ಜಾ ಹೇಳಿಕೊಂಡಿದ್ದಾರೆ.
ಅನ್ಸಾರಿಯವರ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಿದ್ದೇನೆ ಮತ್ತು ಅವರನ್ನು ಭೇಟಿ ಮಾಡಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೂ, ಅನ್ಸಾರಿ ಅವರು ಈ ಆರೋಪವನ್ನು "ಸುಳ್ಳು ಸುಳ್ಳು" ಎಂದು ತಳ್ಳಿಹಾಕಿದ್ದಾರೆ. ಪತ್ರಕರ್ತರನ್ನು ಭೇಟಿಯಾಗಲಿಲ್ಲ ಅವರನ್ನು ಆಹ್ವಾನಿಸಲಿಲ್ಲ ಎಂದಿದ್ದಾರೆ.
ಈ ವಿಷಯದ ಕುರಿತು ಬಿಜೆಪಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ತನ್ನ ದಾಳಿಯನ್ನು ಮುಂದುವರೆಸಿದೆ. 2009ರಲ್ಲಿ ಭಾರತದಲ್ಲಿ ನಡೆದ ಭಯೋತ್ಪಾದನೆಯ ಕುರಿತ ಸಮಾವೇಶದಲ್ಲಿ ಹಮೀದ್ ಅನ್ಸಾರಿ ಮತ್ತು ನುಸ್ರತ್ ಮಿರ್ಜಾ ಒಂದೇ ವೇದಿಕೆಯನ್ನು ಹಂಚಿಕೊಂಡಿರುವ ಫೋಟೋವನ್ನು ಉಲ್ಲೇಖಿಸಿದೆ.
ಶುಕ್ರವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, "2009ರಲ್ಲಿ ಭಯೋತ್ಪಾದನೆ ಕುರಿತು ನಡೆದ ಸಮಾವೇಶದಲ್ಲಿ ಅನ್ಸಾರಿ ಅವರು ಮಿರ್ಜಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಐಎಸ್ಐನೊಂದಿಗೆ ಸಂಪರ್ಕ ಇರುವವರೊಂದಿಗೆ ವೇದಿಕೆ ಹಂಚಿಕೊಳ್ಳಬಾರದು" ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನುಸ್ರತ್ ಮಿರ್ಜಾ ಅವರನ್ನು ಆಹ್ವಾನಿಸಿರುವ ಬಿಜೆಪಿಯ ಹೇಳಿಕೆಯನ್ನು ತಳ್ಳಿಹಾಕಿರುವ ಹಮೀದ್ ಅನ್ಸಾರಿ, "ಭಾರತದ ಉಪರಾಷ್ಟ್ರಪತಿಯಿಂದ ವಿದೇಶಿ ಗಣ್ಯರಿಗೆ ಆಹ್ವಾನಗಳು, ಸಾಮಾನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ಹೋಗುತ್ತವೆ ಎಂಬುದು ತಿಳಿದಿರುವ ಸಂಗತಿಯಾಗಿದೆ" ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಜಾ ಅವರು ಪಾಕಿಸ್ತಾನದಲ್ಲಿ ನಡೆಸಿದ ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋಗಳಲ್ಲಿ ಅವರು ಭಾರತಕ್ಕೆ ಭೇಟಿ ನೀಡಿರುವುದು, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಗೆ ರಹಸ್ಯ ಮಾಹಿತಿಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.