ಈಶಾನ್ಯದಲ್ಲಿ ಬಿಜೆಪಿ ಯಶಸ್ಸಿಗೆ ನಾಲ್ವರು ತಂತ್ರಗಾರರೇ ಕಾರಣ
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಿದವರ ಪೈಕಿ ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮ ಮಾತ್ರವಲ್ಲ. ಇನ್ನೂ ಮೂವರು ಬಿಜೆಪಿ ಮುಖಂಡ ಪರಿಶ್ರಮವಿದೆ.
ತ್ರಿಪುರಾದಲ್ಲಿ ಭರ್ಜರಿ ಜಯ ಸಾಧಿಸಿ, ನಾಗಾಲ್ಯಾಂಡಿನಲ್ಲಿ ಅಧಿಕಾರದತ್ತ ಮುಖ ಮಾಡಿರುವ ಬಿಜೆಪಿ, ಮೇಘಾಲಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಂಡರೂ ಅದು ಅಧಿಕಾರಕ್ಕೆ ಬಂದಷ್ಟೆ ಸಾಧನೆಯಾಗಲಿದೆ.
ಕೇಂದ್ರದಲ್ಲಿ ಬಿಜೆಪಿ ಜತೆ ಮೈತ್ರಿ ಹೊಂದಿರುವ ಪಿ.ಎ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಮೇಘಾಲಯದಲ್ಲಿ ಅಧಿಕಾರ ಸ್ಥಾಪನೆಯ ಎಲ್ಲಾ ಪ್ರಯತ್ನ ಮಾಡುತ್ತಿದೆ. 31 ಮ್ಯಾಜಿಕ್ ನಂಬರ್ ದಾಟಲು ಕಾಂಗ್ರೆಸ್ ಹಾಗೂ ಎನ್ ಪಿಪಿಗೆ ಪಕ್ಷೇತರರ ಬೆಂಬಲ ಅತ್ಯಗತ್ಯ
ಈಶಾನ್ಯ ರಾಜ್ಯಗಳಲ್ಲಿ ಕೇಸರಿ ರಂಗು ಚೆಲ್ಲಿದ 'ನಿಪುಣ' ಹಿಮಂತ
ಈ ನಡುವೆ ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ತಂತ್ರಗಾರಿಕೆ ರೂಪಿಸುವಲ್ಲಿ ಡಾ. ಸಂದೀಪ್ ಶಾಸ್ತ್ರಿ ಅವರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ ಸಾಧಿಸಲು ಹಿಮಂತ ಬಿಸ್ವಾ ಶರ್ಮ, ರಾಮ್ ಮಾಧವ್, ಸುನಿಲ್ ದೇವಧರ್ ಹಾಗೂ ಬಿಪ್ಲವ್ ಕುಮಾರ್ ದೇವ್ ಅವರನ್ನು ನಿಯುಕ್ತಿಗೊಳಿಸಲಾಯಿತು.
ಹಿಮಂತ ಬಿಸ್ವಾ ಶರ್ಮ
2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಹಿಮಂತ ಬಿಸ್ವಾ ಶರ್ಮ ಅವರಿಗೆ ಕಾಂಗ್ರೆಸ್ಸಿನ ಹಳೆ ತಂತ್ರಗಾರಿಕೆಯ ಸಂಪೂರ್ಣ ಪರಿಚಯವಿದ್ದು, ಇದರ ಲಾಭವನ್ನು ಅಮಿತ್ ಶಾ ಪಡೆದುಕೊಂಡಿದ್ದಾರೆ.
49ವರ್ಷ ವಯಸ್ಸಿನ ಹಿಮಂತ ಅವರು ಅಸ್ಸಾಂನಲ್ಲಿ ಆರೋಗ್ಯ, ಶಿಕ್ಷಣ ಹಾಗೂ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಈಶಾನ್ಯ ರಾಜ್ಯಗಳಲ್ಲಿ ಸಂಘಟನೆಯ ಉಸ್ತುವಾರಿಯನ್ನು ವಹಿಸಿಕೊಂಡು ಯಶ ಸಾಧಿಸಿದ್ದಾರೆ.
ಸುನೀಲ್ ದೇವಧರ್
ಮುಂಬೈ ಮೂಲಾದ ದೇವಧರ್ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲುವಿಗಾಗಿ ವಾರಾಣಸಿಯಲ್ಲಿ ಶ್ರಮಿಸಿದ್ದರು. ಅಮಿತ್ ಶಾ ಅವರ ಅಣತಿಯಂತೆ 2015ರಿಂದ ದೇವಧರ್ರನ್ನು ತ್ರಿಪುರಾಕ್ಕೆ ಕಳುಹಿಸಿದ್ದರು.
ತ್ರಿಪುರಾದ ಬುಡಕಟ್ಟು ಪಕ್ಷ 'ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಪಾರ್ಟಿ' ಜತೆಗೆ ಮೈತ್ರಿ ಮಾಡಿಕೊಳ್ಳುವಲ್ಲೂ ನಿರ್ಣಾಯಕ ಪಾತ್ರವಹಿಸಿದರು. ಐಬಿಎಫ್ಟಿ ಬಿಜೆಪಿ ಬೆಂಬಲಿಸಿದ್ದರಿಂದ ದೊಡ್ಡ ಸಂಖ್ಯೆಯಲ್ಲಿರುವ ಆದಿವಾಸಿ, ಬುಡಕಟ್ಟು ಮತಗಳು ಕೂಡ ಬಿಜೆಪಿಗೆ ಸಿಕ್ಕಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿಪ್ಲಬ್ ದೇವ್
ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ರೂವಾರಿ ಎನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಪ್ಲಬ್ ದೇವ್ ಅವರು ಮುಂದನ್ ಸಿಎಂ ಆಗುವ ಎಲ್ಲಾ ಲಕ್ಷಣಗಳಿವೆ. ಕೆ.ಎನ್. ಗೋವಿಂದಾಚಾರ್ಯ ಮಾರ್ಗದರ್ಶನಲ್ಲಿ ತ್ರಿಪುರಾದ ಬಿಜೆಪಿ ಪ್ರಭಾರಿಯಾದರು. ಮಧ್ಯಪ್ರದೇಶದ ಸಾತ್ನಾ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗಣೇಶ್ ಸಿಂಗ್ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. 2016ರಲ್ಲಿ ತ್ರಿಪುರಾ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.
ರಾಮ್ ಮಾಧವ್
ಈಶಾನ್ಯ ರಾಜ್ಯಗಳಲ್ಲಿ ಪಕ್ಷ ಸಂಘಟನೆ ಹಾಗೂ ಉಸ್ತುವಾರಿ ವಹಿಸಿಕೊಂಡ ರಾಮ್ ಮಾಧವ್ ಅವರು ಲಭ್ಯ ಬಲವನ್ನು ಸೇರಿಸಿಕೊಂಡು ಪ್ರಚಾರ ತಂಡವನ್ನು ಕಟ್ಟಿದರು. ಮೈತ್ರಿಗಳನ್ನು ಸಾಧಿಸುವ ಚತುರ ಎಂದೇ ಗುರುತಿಸಿಕೊಂಡಿರುವ ರಾಮ್ ಮಾಧವ್ ಅವರು ಎನ್ ಪಿಪಿ ಜತೆ ಮೈತ್ರಿಯಲ್ಲಿ ಮಹತ್ವದ ಪಾತ್ರವಹಿಸಿದರು.