ಹಿಮಾಚಲ ಪ್ರದೇಶ : ಬಿಜೆಪಿ ಗೆದ್ದರೂ ಸಿಎಂ ಅಭ್ಯರ್ಥಿಗೆ ಸೋಲು!
ನವದೆಹಲಿ, ಡಿಸೆಂಬರ್ 18 : ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿದೆ. ಆದರೆ, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋಲು ಕಂಡಿದ್ದಾರೆ.
ಪ್ರೇಮ್ ಕುಮಾರ್ ಧುಮಾಲ್ ಸುಜನ್ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜೇಂದ್ರ ಸಿಂಗ್ ರಾಣಾ ವಿರುದ್ಧ ಸೋಲು ಅನುಭವಿಸಿದ್ದಾರೆ. 'ರಾಜಕೀಯದಲ್ಲಿ ವೈಯಕ್ತಿಕ ಸೋಲು ಮುಖ್ಯವಾಗುವುದಿಲ್ಲ. ನಾನು ಸೋಲು ನಿರೀಕ್ಷೆ ಮಾಡಿರಲಿಲ್ಲ' ಎಂದು ಧುಮಾಲ್ ಹೇಳಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮತದಾನಕ್ಕೆ 2 ವಾರಗಳ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.

ಬ್ರಾಹ್ಮಣ ಮತ್ತು ರಜಪೂತ ಮತಗಳನ್ನು ಸೆಳೆಯಲು ಧುಮಾಲ್ ಆಯ್ಕೆ ಸಹಾಯಕವಾಗಲಿದೆ ಎಂಬುದು ಪಕ್ಷದ ಲೆಕ್ಕಾಚಾರವಾಗಿತ್ತು. ಧುಮಾಲ್ಗೂ ಮೊದಲು ಜೆಪಿ ನಡ್ಡಾ ಹೆಸರು ಸಿಎಂ ರೇಸ್ನಲ್ಲಿ ಕೇಳಿಬಂದಿತ್ತು.
ಸುಜನ್ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜೇಂದ್ರ ಸಿಂಗ್ ರಾಣಾ ಗೆಲುವು ಸಾಧಿಸಿದ್ದಾರೆ. 2012ರಲ್ಲಿ ರಾಣಾ ಅವರು ಕಾಂಗ್ರೆಸ್ ಸೇರಿದ್ದರು. ಗುಜರಾತ್ ರಾಜ್ಯಕ್ಕೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಡಿಮೆ ನಡೆದಿತ್ತು. ಪ್ರಧಾನಿ ಮೋದಿ 7 ಬಾರಿ ಮಾತ್ರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.
ಕಾಂಗ್ರೆಸ್ನ ಐದು ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದು ರಾಜ್ಯದಲ್ಲಿ ವಾಡಿಕೆಯಾಗಿದ್ದು, ಈಗ ಕಾಂಗ್ರೆಸ್ ಸೋತು, ಬಿಜೆಪಿ 44 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ 21. ಇತರ ಪಕ್ಷದ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.












Click it and Unblock the Notifications