ಮಗಳ ವಯಸ್ಸಿನವಳನ್ನೇ ಮದುವೆಯಾಗಲಿ, ಬಿಜೆಪಿಗೆ ಯಾಕೀ ಚಿಂತೆ?
ಗೋರಖ್ ಪುರ (ಉ.ಪ್ರ), ಅ 1: ರಾಜಕಾರಣಿಗಳು ಮಾತಿನ ಭರದಲ್ಲಿ, ನೆರೆದ ಸಭಿಕರ ಚಪ್ಪಾಳೆ ಗಿಟ್ಟಿಸಲು ಅದ್ಯಾಕೆ ಇನ್ನೊಬ್ಬರ ವೈಯಕ್ತಿಕ ವಿಚಾರದ ಬಗ್ಗೆ ತಲೆಹರಟೆ ಮಾತಾಡುತ್ತಾರೋ?
ಸದಾ ವಿವಾದವನ್ನೇ ತನ್ನ ಶಕ್ತಿಯೆಂದು ಕೊಂಡಿರುವ ಬಿಜೆಪಿಯ ನಾಯಕಿಯೊಬ್ಬರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಮ್ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬಗ್ಗೆ ಕೇವಲವಾಗಿ ಮಾತನ್ನಾಡಿದ್ದಾರೆ.
ಹಿಂದೂ ವಿರೋಧಿಗಳ ವಿರುದ್ದ ಕೆಂಡಕಾರುವ ಹೇಳಿಕೆಯಿಂದ ಬಿಜೆಪಿ ನಾಯಕಿ ಜೊತೆಗೆ ವಿಎಚ್ಪಿ ಸದಸ್ಯೆಯೂ ಆಗಿರುವ ಸಾಧ್ವಿ ಪ್ರಾಚಿ, ಅದೆಷ್ಟೋ ಬಾರಿ ಬಿಜೆಪಿ ಹಿರಿಯ ತಲೆಗಳ, ಮೋದಿ, ಶಾ ಅವರ ವಾರ್ನಿಂಗ್ ಪಡೆದದ್ದೂ ಆಗಿದೆ. ಆದರೂ ಸುಧಾರಣೆ ಕಂಡಿಲ್ಲ. (ಮೋದಿಗೆ ಶಿವಸೇನೆ ಟಾಂಗ್)
ತಮ್ಮ ಈ ವಯಸ್ಸಿನಲ್ಲಿ ದಿಗ್ವಿಜಯ್ ಸಿಂಗ್ ಮಗಳ ವಯಸ್ಸಿನವರನ್ನು ಮದುವೆಯಾಗುತ್ತಾರೆ. ಅವರು ಇನ್ನು ಮುಂದೆ ಯಾರ ಜೊತೆ ಆಟವಾಡುತ್ತಾರೆ, ತನ್ನ ಮಕ್ಕಳ ಜೊತೆಗೋ ಅಥವಾ ಮೊಮ್ಮಕ್ಕಳ ಜೊತೆಗೋ ಎಂದು ಸಾಧ್ವಿ ಪ್ರಾಚಿ ಲೇವಡಿ ಮಾಡಿದ್ದಾರೆ.
ಜೊತೆಗೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ವಿರುದ್ದ ವ್ಯಂಗ್ಯವಾಡಿರುವ ಸಾಧ್ವಿ ಪ್ರಾಚಿ, ಅವರೊಬ್ಬ ರಾಜಕೀಯಕ್ಕೆ ಯೋಗ್ಯವಾದ ವ್ಯಕ್ತಿಯಲ್ಲ ಎಂದಿದ್ದಾರೆ.
ಚುನಾವಣೆಯ ಸಮಯದಲ್ಲಿ ರಾಹುಲ್ ವಿದೇಶಕ್ಕೆ, ಮುಂದೆ ಓದಿ..
ಎಐಸಿಸಿ ಪ್ರಧಾನ ಕಾರ್ಯದರ್ಶಿ
ದಿಗ್ವಿಜಯ್ ಸಿಂಗ್ ಇತ್ತೀಚೆಗೆ ಪತ್ರಕರ್ತೆ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದ ಪ್ರಾಚಿ, ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ದಿಗ್ವಿಜಯ್ ಮದುವೆಯಾಗಿದ್ದಾರೆ. ಇನ್ಮುಂದೆ ಇವರು ಯಾರ ಜೊತೆ ಆಟವಾಡುತ್ತಾರೆ ಎನ್ನುವುದೇ ಕುತೂಹಲ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಜಕೀಯಕ್ಕೆ ರಾಹುಲ್ ಗಾಂಧಿ ಯೋಗ್ಯವಾದ ವ್ಯಕ್ತಿಯಲ್ಲ. ರಾಹುಲ್ ಶಕ್ತಿ ಏನು ಎನ್ನುವುದು ಅವರ ತಾಯಿ ಸೋನಿಯಾಗೆ ಅರಿತಿದೆ. ಅದಕ್ಕೇ ಚುನಾವಣೆಯ ಸಮಯದಲ್ಲಿ ರಾಹುಲ್ ನನ್ನು ವಿದೇಶಕ್ಕೆ ಕಳುಹಿಸುತ್ತಾರೆ - ಸಾಧ್ವಿ ಪ್ರಾಚಿ.
ಸಾಧ್ವಿ ವಿವಾದಕಾರಿ ಹೇಳಿಕೆ
ಲೋಕಸಭೆಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಉಗ್ರರು ಸಂಸದರಾಗಿದ್ದಾರೆ. ಉಧಂಪುರ ದಾಳಿಯ ಸಂಬಂಧ ಬಂಧಿಸಲಾಗಿರುವ ಉಗ್ರನನ್ನು ಸರಕಾರ ಹಿಂದೂ ಸಂಘಟನೆಗಳ ವಶಕ್ಕೆ ಒಪ್ಪಿಸಲಿ. ನಮ್ಮ ಲೋಕಸಭೆಯೂ ಕೆಲವೊಂದು ಉಗ್ರರಿಗೆ ಆಶ್ರಯತಾಣದಂತಾಗಿದೆ ಎಂದು ಸಾಧ್ವಿ ಪ್ರಾಚಿ ವಿವಾದಕಾರಿ ಹೇಳಿಕೆ ನೀಡಿದ್ದರು.
ಮಹಾತ್ಮ ಗಾಂಧಿ
ಸಾಧ್ವಿ ಪ್ರಾಚಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೂ ಬಿಟ್ಟಿಲ್ಲ. ಗಾಂಧಿ ಒಬ್ಬ ಬ್ರಿಟಿಷ್ ಏಜೆಂಟ್. ನೂಲು ತೆಗೆಯುವ ಚಕ್ರದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲ. ದೇಶದ ಹೆಮ್ಮಯ ಮಕ್ಕಳಾದ ವೀರ್ ಸಾವರ್ಕರ್, ಭಗತ್ ಸಿಂಗ್ ಮುಂತಾದವರಿಂದ ಬಂದಿದೆ.
ಭಾರತ ಬಿಟ್ಟು ತೊಲಗಿ
ಯಾರು ಗೋಹತ್ಯೆ ಮಾಡುತ್ತಾರೋ, ಅದನ್ನು ಬೆಂಬಲಿಸುತ್ತಾರೋ, ವಂದೇ ಮಾತರಂ, ಭೋಲೋ ಭಾರತ್ ಮಾತಾ ಕೀ ಜೈ ಎಂದು ಹೇಳುವುದಿಲ್ಲವೋ, ಅವರು ಈ ದೇಶದಲ್ಲಿ ಇರಲು ಲಾಯಕಿಲ್ಲ ಎಂದು ಸಾಧ್ವಿ ಪ್ರಾಚಿ ಹಿಂದೊಮ್ಮೆ ಅಬ್ಬರಿಸಿದ್ದರು.
ಖಾನ್ ಗಳ ಚಿತ್ರ ಬಹಿಷ್ಕರಿಸಿ
ವಿವಾದಕಾರಿ ಹೇಳಿಕೆ ನೀಡಿ, ಪಕ್ಷಕ್ಕೆ ಮುಜುಗರ ತರದಂತೆ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಹಲವಾರು ಬಾರಿ ಸಾಧ್ವಿ ಪ್ರಾಚಿಗೆ ಎಚ್ಚರಿಕೆ ನೀಡಿದ್ದರು. ಆದರೂ ಮಾತಿನ ಚಾಳಿಯನ್ನು ಮುಂದುವರಿಸಿರುವ ಪ್ರಾಚಿ, ಶಾರೂಖ್, ಸಲ್ಮಾನ್ ಮತ್ತು ಅಮೀರ್ ಖಾನ್ ಅವರ ಚಿತ್ರವನ್ನು ಯಾವ ಹಿಂದೂಗಳು ನೋಡಬಾರದೆಂದು ಹೇಳಿ ಮತ್ತೆ ಪಕ್ಷಕ್ಕೆ ಮುಜುಗರ ತಂದಿದ್ದರು.