ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ತಲಾಖ್
ಕಾಶ್ಮೀರ, ಜೂನ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಮೈತ್ರಿ ಕಡಿದುಕೊಂಡು ಸರಕಾರದಿಂದ ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಸರಕಾರ ಅಲ್ಪಮತಕ್ಕೆ ಜಾರಿದೆ.
2014ರಲ್ಲಿ 87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಾಗ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತರರು 7 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ.
ಬಿಜೆಪಿ-ಪಿಡಿಪಿಯದು ಅಸಮಂಜಸ ಮದುವೆ, ವಿಚ್ಛೇದನಕ್ಕಿದು ಸಕಾಲ!
ಈ ಹಿನ್ನೆಲೆಯಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರ ರಚನೆಯಾಗಿ ಪಿಡಿಪಿಯ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಚುನಾವಣೆಗೆ ಒಂದೂವರೆ ವರ್ಷ ಇದೇ ಎಂದಾಗ ಬಿಜೆಪಿ ಮೈತ್ರಿ ಕಡಿದುಕೊಂಡು ಸರಕಾರದಿಂದ ಹೊರ ಬಂದಿದೆ.
"ನಾವು ನಿರ್ಧಾರವೊಂದನ್ನು ತೆಗೆದುಕೊಂಡಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿ ಪಾಲಿಗೆ ಸಮರ್ಥನೀಯವಲ್ಲ. ಆದ್ದರಿಂದ ನಾವು ಬೆಂಬಲ ಹಿಂತೆಗೆದುಕೊಳ್ಳುತ್ತಿದ್ದೇವೆ," ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ದೆಹಲಿಯಲ್ಲಿ ಹೇಳಿದರು.
"ಕಣಿವೆಯಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ತೀವ್ರಗಾಮಿತ್ವ ಹೆಚ್ಚಾಗಿದೆ. ನಾಗರಿಕರ ಮೂಲಭೂತ ಹಕ್ಕುಗಳು ಇಲ್ಲಿ ಅಪಾಯದಲ್ಲಿದೆ. ಶೂಜತ್ ಬುಖಾರಿಯ ಹತ್ಯೆ ಇದಕ್ಕೆ ಒಂದು ಉದಾಹರಣೆ," ಎಂದವರು ಹೇಳಿದ್ದಾರೆ.
"ವಾಸ್ತವವಾಗಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿದ್ದು, ಭಾರತದ ಭದ್ರತೆ ಮತ್ತು ಸಮಗ್ರತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ರಾಜ್ಯದಲ್ಲಿ ಅಧಿಕಾರವನ್ನು ನಿಯಂತ್ರಿಸುವ ಸಲುವಾಗಿ ನಾವು ರಾಜ್ಯದ ಅಧಿಕಾರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಬೇಕೆಂದು ನಿರ್ಧರಿಸಿದ್ದೇವೆ," ಎಂಬುದಾಗಿ ರಾಮ್ ಮಾಧವ್ ಮಾಹಿತಿ ನೀಡಿದ್ದಾರೆ.
"ಕೇಂದ್ರವು ಕಣಿವೆ ರಾಜ್ಯಕ್ಕೆ ಎಲ್ಲವನ್ನೂ ಮಾಡಿದೆ. ನಾವು ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸಿದ್ದೇವೆ. ಪಿಡಿಪಿ ತನ್ನ ಭರವಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿಲ್ಲ. ಜಮ್ಮು ಮತ್ತು ಲಡಾಖ್ ನಲ್ಲಿ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಮ್ಮ ನಾಯಕರು ಪಿಡಿಪಿಯಿಂದ ತೊಂದರೆಗಳನ್ನು ಎದುರಿಸುತ್ತಿದ್ದಾರೆ," ಎಂದು ಮಾಧವ್ ದೂರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಿದರೂ, ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂಬುದಾಗಿ ರಾಮ್ ಮಾಧವ್ ಹೇಳಿದ್ದಾರೆ.