Madhya Pradesh Election: ಬಿಜೆಪಿ ಮಾಸ್ಟರ್ ಪ್ಲ್ಯಾನ್ ಹೇಗಿದೆ ಗೊತ್ತಾ?
ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ದೇಶಾದ್ಯಂತ ಕುತೂಹಲ ಕೆರಳಿಸಿರುವ ಮತ್ತೊಂದು ಚುನಾವಣೆ ಅಂದ್ರೆ, 2023ರ ಅಂತ್ಯಕ್ಕೆ ನಡೆಯಲಿರುವ ಬಹುನಿರೀಕ್ಷಿತ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್. ಹೀಗೆ ಜಿದ್ದಾಜಿದ್ದಿನ ಅಖಾಡವಾಗಿ ಬದಲಾಗಿರುವ ಇಲ್ಲಿನ ಚುನಾವಣಾ ಅಖಾಡಕ್ಕೆ ಬಿಜೆಪಿ ಮತ್ತಷ್ಟು ರಂಗು ತುಂಬಲು ಮುಂದಾಗಿದೆ. ಅದರಲ್ಲೂ ಸಾಲು ಸಾಲು ಸೋಲುಗಳಿಂದ ಕೇಸರಿ ಪಾಳಯ ಹೊಸ ತಂತ್ರದ ಮೊರೆ ಹೋಗಿದೆ.
ಹೌದು, ಮಧ್ಯಪ್ರದೇಶ ಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಬಿಜೆಪಿಯು 'ವಿಜಯ ಸಂಕಲ್ಪ ಯಾತ್ರೆ' ಕೈಗೊಳ್ಳಲು ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಬಿಜೆಪಿ ಪಕ್ಷದ ಪದಾಧಿಕಾರಿ ಈ ಮಾಹಿತಿ ತಿಳಿಸಿರುವುದಾಗಿ ವರದಿಯಾಗಿದ್ದು, ಮಹತ್ವದ ಯಾತ್ರೆ ಇನ್ನೂ ಕೆಲವೇ ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಈ ಮೂಲಕ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಉತ್ತರಿಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ನಾಲ್ಕು ಗಂಟೆಗಳ ಸುದೀರ್ಘ ಸಭೆ ನಡೆಸಿ ಹಲವು ಪ್ರಮುಖ ನಿರ್ಧಾರ ಕೈಗೊಂಡಿದೆ.

ಎಲ್ಲಿ ಸಾಗಲಿದೆ ಬಿಜೆಪಿ ಯಾತ್ರೆ?
ಅಷ್ಟಕ್ಕೂ ಮಧ್ಯಪ್ರದೇಶ ಬಿಜೆಪಿ ಕೈಗೊಳ್ಳಲು ಚಿಂತಿಸಿದೆ ಎನ್ನಲಾಗುತ್ತಿರುವ 'ವಿಜಯ ಸಂಕಲ್ಪ ಯಾತ್ರೆ' ಈ ರಾಜ್ಯದಲ್ಲಿನ ಪ್ರಮುಖ ಪ್ರದೇಶಗಳಿಗೆ ಲಗ್ಗೆ ಇಡಲಿದೆ. ಉಜ್ಜಯಿನಿ, ಜಬಲ್ಪುರ, ಸಾಗರ, ಗ್ವಾಲಿಯರ್ ಮತ್ತು ಚಿತ್ರಕೂಟ ನಗರಗಳಲ್ಲಿ ಯಾತ್ರೆ ರಾರಾಜಿಸಲಿದೆ. ಉಜ್ಜಯಿನಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳುವ ಮೂಲಕ ಮಾಲ್ವಾ ಪ್ರದೇಶ ತಲುಪುವ ಗುರಿಯನ್ನು ಬಿಜೆಪಿ ಹೊಂದಿದೆ ಎನ್ನಲಾಗ್ತಿದೆ. ಜಬಲ್ಪುರದಲ್ಲಿ ಯಾತ್ರೆ ಕೈಗೊಳ್ಳುವ ಮೂಲಕ ಮಹಾಕೋಶಲ ಸೇರಿ ಬುಂದೇಲ್ಖಾನ್ ಪ್ರದೇಶದ ಮತದಾರರನ್ನ ತಲುಪುವ ಉದ್ದೇಶವಿದೆ. ಗ್ವಾಲಿಯರ್ & ಚಿತ್ರಕೂಟದ ಯಾತ್ರೆ ಚಂಬಲ್ ಪ್ರದೇಶ ಒಳಗೊಂಡಿರುವ ಬಗ್ಗೆ ಮಾಹಿತಿ ಹರಿದಾಡ್ತಿದೆ.
ಯಾತ್ರೆ ಉದ್ಘಾಟನೆಗೆ ಬರ್ತಾರಾ ಪ್ರಧಾನಿ?
ಮಧ್ಯಪ್ರದೇಶ ಬಹುದೊಡ್ಡ ರಾಜ್ಯ, ಇಲ್ಲಿ ಗೆಲ್ಲುವವರಿಗೆ 2 ರೀತಿ ಲಾಭವಿದೆ. ಅದರಲ್ಲಿ ಒಂದು ವಿಧಾನಸಭೆ ಚುನಾವಣೆ, ಮತ್ತೊಂದು ಲಾಭ ಲೋಕಸಭೆ ಚುನಾವಣೆಯಲ್ಲಿ ಸಿಗಲಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ 'ವಿಜಯ ಸಂಕಲ್ಪ ಯಾತ್ರೆ' ಉದ್ಘಾಟನೆಗೆ ಬಿಜೆಪಿ ಕಡೆಯಿಂದ ಘಟಾನುಘಟಿ ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಯಾತ್ರೆ ಉದ್ಘಾಟಿಸೋದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ & ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖ ನಾಯಕರನ್ನೇ ಆಹ್ವಾನಿಸಲು ಸ್ಥಳೀಯ ನಾಯಕರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

'ಲೋಕ್ ಪೋಲ್' ಸಮೀಕ್ಷೆ ಭವಿಷ್ಯ ಏನು?
ಅಂದಹಾಗೆ ಕರ್ನಾಟಕದಲ್ಲಿ ಬರೋಬ್ಬರಿ 130+ ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ಗೆ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ ಗೆಲುವಿನ ನಿರೀಕ್ಷೆ ಮೂಡಿದೆ. ಕೆಲ ದಿನದ ಹಿಂದಷ್ಟೇ ಲೋಕ್ ಪೋಲ್ ಸಮೀಕ್ಷೆ ಹೊರಬಿದ್ದಿದ್ದು ಆ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ 130ರಿಂದ 135 ಸ್ಥಾನ ಪಡೆಯಲಿದೆಯಂತೆ. ಆದರೆ ಆಡಳಿತರೂಢ ಬಿಜೆಪಿ ಮಾತ್ರ 2ನೇ ಸ್ಥಾನಕ್ಕೆ ಕುಸಿದು, 90ರಿಂದ 95 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿತ್ತು. ಬಿಎಸ್ಪಿ ಕೇವಲ ಒಂದು ಅಥವಾ ಎರಡು ಸ್ಥಾನ ಪಡೆದರೆ ಇತರರು ಐದು ಸ್ಥಾನದಲ್ಲಿ ಗೆಲ್ಲಬಹುದು ಎಂದು 'ಲೋಕ್ ಪೋಲ್' ಸಮೀಕ್ಷೆ ಭವಿಷ್ಯ ನುಡಿದಿತ್ತು. ಹೀಗಾಗಿ ಎರಡೂ ಕಡೆ ಅಬ್ಬರದ ಪ್ರಚಾರ ನಡೆದಿದೆ.
ಈ ಎಲ್ಲಾ ತಯಾರಿಗಳನ್ನು ನೋಡುತ್ತಿದ್ದರೆ ಕರ್ನಾಟಕದ ಚುನಾವಣೆ ರೀತಿಯೇ ಮಧ್ಯಪ್ರದೇಶ ಚುನಾವಣೆ ಕೂಡ ಇಡೀ ದೇಶದ ಗಮನ ಸೆಳೆಯುವುದು ಗ್ಯಾರಂಟಿ. ಅತ್ತ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿ ಮುನ್ನುಗ್ಗುತ್ತಿದ್ದರೆ, ಇತ್ತ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ಹೆಣೆದಿದೆ. ಹೀಗಾಗಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತೊಂದು ಇತಿಹಾಸ ಬರೆಯುವ ನಿರೀಕ್ಷೆ ಇದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ರಿಸಲ್ಟ್ ತನಕ ತಾಳ್ಮೆಯಿಂದ ಕಾಯಬೇಕಿದೆ ಅಷ್ಟೇ.












Click it and Unblock the Notifications