ಚುನಾವಣಾ ಹೊಸ್ತಿಲಲ್ಲಿ ಅಮಿತ್ ಶಾ- ವಸುಂಧರಾ ರಾಜೆ ಭೀಕರ ಮನಸ್ತಾಪ
ಈವರೆಗೆ ಹೊರಬಿದ್ದಿರುವ ಚುನಾವಣಾಪೂರ್ವ ಸಮೀಕ್ಷೆಗಳೆಲ್ಲಾ ರಾಜಸ್ಥಾನದಲ್ಲಿ ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟಕಷ್ಟ ಎಂದು ಹೇಳಿರುವ ಬೆನ್ನಲ್ಲೇ, ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡುವಿನ ಮನಸ್ತಾಪ ಗಂಭೀರ ಸ್ವರೂಪ ಪಡೆಯುತ್ತಲೇ ಇದೆ.
ವಸುಂಧರಾ ರಾಜೆಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಖುದ್ದು ಬಿಜೆಪಿ ರಾಷ್ಟ್ರಾಧ್ಯಕ್ಷರೇ ತಕರಾರು ತೆಗೆದಿದ್ದ ನಂತರ, ವಸುಂಧರಾ ಅನುಮೋದಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಅಮಿತ್ ಶಾ ನೇರಾನೇರ ತಿರಸ್ಕರಿಸಿದ್ದಾರೆ. ಇದರಿಂದ, ಇಬ್ಬರ ನಡುವಿನ ಬಿಕ್ಕಟ್ಟು ಹೊಸಹೊಸ ರೂಪ ಪಡೆಯುತ್ತಿದೆ.
ಚುನಾವಣಾ ಹೊಸ್ತಿಲಲ್ಲಿ ಒಂದು ಕಡೆ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಆಡಳಿತ ವಿರೋಧಿ ಅಲೆ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಕಬಳಿಸುವ ಸಾಧ್ಯತೆಯಿದೆ. ಇದರ ನಡುವೆ, ರಾಷ್ಟ್ರಾಧ್ಯಕ್ಷರ ಜೊತೆಗೆಯೇ, ವಸುಂಧರಾ ತಕರಾರು ಮಾಡುತ್ತಿರುವುದು, ಪ್ರಧಾನಿ ಮೋದಿಗೆ ನುಂಗಲಾರದ ತುತ್ತಾಗುತ್ತಿದೆ.
ಡಿಸೆಂಬರ್ ಏಳರಂದು ರಾಜಸ್ಥಾನದ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ತಿಂಗಳು ಬಾಕಿ ಇರುವ ಈ ಹೊತ್ತಿನಲ್ಲಿ, ಅಮಿತ್ ಶಾ ಎರಡೆರಡು ಬಾರಿ ವಸುಂಧರಾ ರಾಜೆ ಅನುಮೋದಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ತಿರಸ್ಕರಿಸಿರುವುದು ಇಬ್ಬರ ನಡುವಿನ ಮನಸ್ತಾಪ ಈ ಮಟ್ಟಿಗೆ ಬರಲು ಕಾರಣವಾಗಿದೆ.
ಮೂಲಗಳ ಪ್ರಕಾರ ಪ್ರಧಾನಿ ಮೋದಿ ಇಬ್ಬರ ನಡುವಿನ ಮನಸ್ತಾಪವನ್ನು ಸರಿದಾರಿಗೆ ತರಲು ಮಧ್ಯಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ, ಟಿಕೆಟ್ ಹಂಚಿಕೆ ಗೊಂದಲಕ್ಕೆ ಸಂಬಂಧ ಪಟ್ಟಂತೆ, ಯಾರೂ ಮಾಧ್ಯಮದ ಮುಂದೆ ಹೇಳಿಕೆ ನೀಡಬಾರದೆಂದು ಬಿಜೆಪಿ ಪ್ರಧಾನ ಕಚೇರಿಯಿಂದ ಕಟ್ಟಪ್ಪಣೆ ಹೊರಡಿಸಲಾಗಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 19.11.2018
ಬರೋಬ್ಬರಿ ಇನ್ನೂರು ಶಾಸಕರ ಬಲವಿರುವ ರಾಜಸ್ಥಾನದ ಅಸೆಂಬ್ಲಿ ಚುನಾವಣೆಯ ವೇಳಾಪಟ್ಟಿ ಈ ರೀತಿಯಿದೆ:
ನಾಮಪತ್ರ ಸಲ್ಲಿಸಲು ಆರಂಭವಾಗುವ ದಿನಾಂಕ: 12.11.2018
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 19.11.2018
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 22.11.2018
ಚುನಾವಣೆ ನಡೆಯುವ ದಿನಾಂಕ: 07.12.2018
ಮತ ಎಣಿಕೆಯ ದಿನಾಂಕ: 11.12.2018 (ಮಂಗಳವಾರ)

ಆಯ್ಕೆ ಸಮಿತಿಯ ಫೈನಲ್ ಮೀಟಿಂಗ್
ನವೆಂಬರ್ 9 ಮತ್ತು 10ರಂದು ಅಭ್ಯರ್ಥಿ ಆಯ್ಕೆ ಸಮಿತಿಯ ಫೈನಲ್ ಮೀಟಿಂಗ್ ನಡೆಯುತ್ತಿರುವುದರಿಂದ, ಇದಕ್ಕೆ ಮೊದಲು ಪ್ರಧಾನಿ ಮೋದಿ ಸಮ್ಮುಖದಲ್ಲಿ, ಅಮಿತ್ ಶಾ ಮತ್ತು ವಸುಂಧರಾ ರಾಜೆ ನಡುವೆ ಸಂಧಾನ ನಡೆಯುವ ಸಾಧ್ಯತೆಯಿದೆ. ಮೀಟಿಂಗ್ ಗೆ ಆಗಮಿಸುವ ಮುನ್ನ, ನಿಮ್ಮದೇ ಆದ ಹಠವನ್ನು ಬಿಟ್ಟುಬರಬೇಕು ಎನ್ನುವ ಸಂದೇಶವನ್ನು ಪ್ರಧಾನಮಂತ್ರಿ ಕಾರ್ಯಾಲಯ, ಸಿಎಂ ವಸುಂಧರಾಗೆ ಕಳುಹಿಸಿದೆ ಎನ್ನುವ ಮಾಹಿತಿಯಿದೆ.

ಅಮಿತ್ ಶಾ ಅವರ ಪಟ್ಟಿ ಬೇರೆಯೇ ಇರುವುದು ಗೊಂದಲಕ್ಕೆ ಕಾರಣ
ಹಾಲೀ ಶಾಸಕರಿಗೆ ಟಿಕೆಟ್ ನೀಡಬೇಕು ಎನ್ನುವುದು ವಸುಂಧರಾ ರಾಜೆ ಹಠವಾದರೆ, ಕಾರ್ಯಕರ್ತರಿಂದ ಮತ್ತು ಬೂತ್ ಮಟ್ಟದಲ್ಲಿ ಮಾಹಿತಿ ಪಡೆದುಕೊಂಡು ಅಮಿತ್ ಶಾ ಅವರ ಪಟ್ಟಿ ಬೇರೆಯೇ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ಚುನಾವಣಾ ವೇಳೆ ಕೆಲವು ಮನಸ್ತಾಪಗಳು ಬರುವುದು ಸಹಜ. ಇದಕ್ಕೆಲ್ಲಾ ಶೀಘ್ರವೇ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಒಟ್ಟು 200 ಸದಸ್ಯರ ರಾಜಸ್ಥಾನ ಅಸೆಂಬ್ಲಿಯ 150 ಕ್ಷೇತ್ರಗಳಲ್ಲಿ ಒಂದೊಂದು ಸೀಟಿಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ಮೂರು ಆಯ್ಕೆಯನ್ನು ಹೊಂದಿದ್ದಾರೆ. ಅದರಲ್ಲಿ ಬಹುತೇಕ ಹಾಲೀ ಶಾಸಕರುಗಳು ಹೆಸರು ಇರದೇ ಇರುವುದು ವಸುಂಧರಾ ಕೋಪಕ್ಕೆ ಕಾರಣ. ಹಾಲೀ ಶಾಸಕರಿಗೆ ಟಿಕೆಟ್ ನೀಡಲು ತೀರಾ ಪಕ್ಷದ ಮೆರಿಟ್ ನೋಡುವುದು ತಪ್ಪು ಎನ್ನುವ ವಾದ ವಸುಂಧರಾ ಅವರದ್ದು ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲೂ ಶಾ, ವಸುಂಧರಾ ಮನಸ್ತಾಪ
ರಾಜಸ್ಥಾನ ಘಟಕದ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲೂ ಅಮಿತ್ ಶಾ ಮತ್ತು ವಸುಂಧರಾ ನಡುವೆ ಮನಸ್ತಾಪ ಉಂಟಾಗಿತ್ತು. ಮೋದಿಯವರ ಮಧ್ಯಸ್ಥಿಕೆಯಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಬಹುದು ಎನ್ನುವ ವಿಶ್ವಾಸವನ್ನು ಸಿಎಂ ವಸುಂಧರಾ ರಾಜೆ ಹೊಂದಿದ್ದಾರೆ. ಚುನಾವಣೆಯ ವೇಳೆ, ನಾವು ಒಂದಾಗಿ ಜನರ ಬಳಿ ಹೋಗಬೇಕಿದೆ, ಇದಕ್ಕೆಲ್ಲಾ ಮೋದಿಯೇ ಈಗಿರುವ ಬಿಕ್ಕಟ್ಟಿಗೆ ಮದ್ದನ್ನು ಕಂಡುಹಿಡಿಯಬೇಕು ಎನ್ನುವುದು ವಸುಂಧರಾ ರಾಜೆ ವಾದ.












Click it and Unblock the Notifications