ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿ ಪಾಲಿಗೆ ಅದೃಷ್ಟ: ಅಮಿತ್ ಶಾ
ನವದೆಹಲಿ, ಜೂ 9: ಹೋದಬಂದಲ್ಲೆಲ್ಲಾ ಬಿಜೆಪಿಯನ್ನು ದೂರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಮೂರು ತಲೆಮಾರಿನವರು ದೇಶಕ್ಕಾಗಿ ಮಾಡಿದ್ದೇನು ಎನ್ನುವುದನ್ನು ಮೊದಲು ವಿವರಿಸಲಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಶನಿವಾರ (ಜೂ 9) ಜೈಪುರ ಗ್ರಾಮೀಣ ಲೋಕಸಭಾ ವ್ಯಾಪ್ತಿಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬೀಗುತ್ತಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯಂತ ವಿರೋಧ ಪಕ್ಷದವರು ನಮಗೆ ಸಿಕ್ಕಿದ್ದು ನಮ್ಮ ಪಾಲಿನ ನಿಜವಾದ ಅದೃಷ್ಟ ಎಂದು ಶಾ ಅಣಕವಾಡಿದ್ದಾರೆ.
ನಾವು ಎಂಟು ಉಪಚುನಾವಣೆಯಲ್ಲಿ ಸೋತಿರಬಹುದು, ಆದರೆ ಹದಿನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವುದನ್ನು ರಾಹುಲ್ ಗಾಂಧಿ ಮರೆತಿದ್ದಾರೆ. ಬಬುವಾ (ಮಗು ಎಂದು ರಾಹುಲ್ ಗಾಂಧಿಯನ್ನು ಉಲ್ಲೇಖಿಸಿದ್ದು) ನಮ್ಮ ಸರಕಾರದ ಲೆಕ್ಕ ಕೇಳುವ ಮೊದಲು, ನಿಮ್ಮ ಎಪ್ಪತ್ತು ವರ್ಷದ ಅಧಿಕಾರದಲ್ಲಾದ ಲೆಕ್ಕವನ್ನು ಕೊಡಿ ಎಂದು ಅಮಿತ್ ಶಾ, ರಾಹುಲ್ ಗಾಂಧಿಯನ್ನು ಛೇಡಿಸಿದ್ದಾರೆ.

ಮೋದಿಯವರ ಸರಕಾರದಲ್ಲಿ ಎಲ್ಪಿಜಿ ವಿತರಣೆ, ಟಾಯ್ಲೆಟ್ ನಿರ್ಮಾಣ ಸೇರಿದಂತೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ, ಇದ್ಯಾವುದೂ ಆಗಲೇ ಇಲ್ಲ ಎಂದು ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ.
ಸದಾ ಬಿಜೆಪಿಯನ್ನು ದೂಷಿಸುವುದರಲ್ಲೇ ಕಾಲ ಕಳೆಯುವ ರಾಹುಲ್ ಗಾಂಧಿ, ಅದ್ಯಾವಾಗ ದೇಶದಲ್ಲಿ ಇರುತ್ತಾರೋ ಅದ್ಯಾವಾಗ ವಿದೇಶಕ್ಕೆ ರಜೆಯ ಮಜಾ ಅನುಭವಿಸಲು ಹೋಗುತ್ತಾರೋ ಎನ್ನುವುದು ಖುದ್ದು ಕಾಂಗ್ರೆಸ್ಸಿಗರಿಗೇ ತಿಳಿಯುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕದಲ್ಲಿ ನಾವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆವು. ಇನ್ನು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢದ ಚುನಾವಣೆಯೂ ಈ ವರ್ಷದಲ್ಲಿ ನಡೆಯಲಿದೆ. ನಮ್ಮ ಪಕ್ಷದ ಕಾರ್ಯಕರ್ತರು ಓವರ್ ಟೈಂ ಕೆಲಸ ಮಾಡಿ, ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಅಮಿತ್ ಶಾ, ಕಾರ್ಯಕರ್ತರಿಗೆ ಕರೆನೀಡಿದ್ದಾರೆ.












Click it and Unblock the Notifications