ಇನ್ಮುಂದೆ ಹೊಸ ರಾಜಕೀಯ ಹಾದಿ ಎಂದ ಕೆ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿ, ಇನ್ನೇನು ಫಲ ಸಿಗಲಿದೆ ಎನ್ನುವಾಗಲೇ ಭಾರೀ ನಿರಾಸೆಯನ್ನು ಅನುಭವಿಸಿದ್ದ ಕೆ. ಅಣ್ಣಾಮಲೈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರವನ್ನು ಜೂನ್ 5ರ ಶುಕ್ರವಾರ ಪ್ರಕಟಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರವು ಕನಸು ಕಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಈಗ ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಅಣ್ಣಾಮಲೈ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ನಾನು ತಮಿಳುನಾಡಿನಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದೇನೆ ಎಂದು ಕೆ ಅಣ್ಣಾಮಲೈ ಅವರು ಘೋಷಿಸಿದ್ದಾರೆ. ಯುವಕರು ಹಾಗೂ ಎಲ್ಲರನ್ನೂ ಒಳಗೊಂಡ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದೇನೆ. ಕಳೆದ 18 ತಿಂಗಳಿನಿಂದಲೂ ನಾನು ತಾಳ್ಮೆಯಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಮುಕ್ತಾಯವಾದ ಮೇಲೆ ಬಿಜೆಪಿಗೆ ರಾಜೀನಾಮೆ ಕೊಡಬಹುದು ಎಂದು ಬಿಜೆಪಿ ಹೈಕಮಾಂಡ್ ನಾಯಕರು ಹೇಳಿದ್ದರು. ಅದರಂತೆ ನಾನು ಗೌರವದಿಂದ ನಡೆದುಕೊಂಡಿದ್ದೇನೆ. ತಮಿಳುನಾಡಿಗೆ ಹೊಸದೊಂದು ರಾಜಕೀಯ ಪಕ್ಷ ಅನಿವಾರ್ಯವಾಗಿದೆ ಎಂದು ಕೆ ಅಣ್ಣಾಮಲೈ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.

'ಕಾಮನ್‌ಮನ್' ಪಾಲಿಟಿಕ್ಸ್‌

ಜನ ಸಾಮಾನ್ಯರಿಗಾಗಿಯೇ ಬೇಕಾಗಿರುವ 'ಕಾಮನ್‌ಮನ್' ಪಾಲಿಟಿಕ್ಸ್‌ ಅನ್ನು ಪ್ರಾರಂಭಿಸಲಿದ್ದೇನೆ. ಶುದ್ಧ ಹಾಗೂ ದಕ್ಷ ನಾಯಕರು ಬೇಕಾಗಿದ್ದಾರೆ. ಒಬ್ಬರು ಮುಖ್ಯಮಂತ್ರಿಯಿಂದ ತಮಿಳುನಾಡು ಬದಲಾವಣೆ ಸಾಧ್ಯವಿಲ್ಲ. ಒಂದು ಕುಟುಂಬದಿಂದಲೂ ತಮಿಳುನಾಡು ಬದಲಾವಣೆ ಸಾಧ್ಯವಿಲ್ಲ ಎಂದೂ ಕೆ ಅಣ್ಣಾಮಲೈ ಅವರು ಹೇಳಿದ್ದಾರೆ. ನಿರಂತರ ನಾಯಕರು ಎನ್ನುವ ಸಂಪ್ರದಾಯಕ್ಕೆ ತಿಲಾಂಜಲಿ ಆಡಬೇಕಾಗಿದೆ ಎಂದಿದ್ದಾರೆ.

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆಯುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಘೋಷಿಸಿದ್ದರು. ಈ ಘೋಷಣೆಯಿಂದಾಗಿ ಇದುವರಿಗಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತೆ ಆಗಿದೆ. ಆ ಮೂಲಕ ತಮಿಳುನಾಡಿನಲ್ಲಿ ಕೇಸರಿ ಪಕ್ಷ ಚಿಗುರಿಸುವ ಕನಸು ಹೊತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಹೊಸ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಲು ಮುಂದಾಗಿದ್ದು, ತಮಿಳು ತತ್ವಶಾಸ್ತ್ರ ಸಿದ್ಧಾತಂ ಮೇಲೆ ಪಕ್ಷ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ. ಬಿಜೆಪಿ ಹೈ ಕಮಾಂಡ್ ಅನ್ನು ದೆಹಲಿಯಲ್ಲಿ ಭೇಟಿಯಾದ ಅಣ್ಣಾಮಲೈ ತಮ್ಮ ಬೇಡಿಕೆಯನ್ನು ಪಕ್ಷದ ಮುಂದಿಟ್ಟು, ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ್ದರು. ಆದರೆ, ಯಾವುದಕ್ಕೂ ಸೊಪ್ಪು ಹಾಕದ ಹೈ ಕಮಾಂಡ್, ಅಣ್ಣಾಮಲೈ ಅವರಿಗೆ ತಮ್ಮಿಷ್ಟದಂತೆ ಮಾಡಲು ಸೂಚಿಸಿದ್ದಾರೆಂದು ಹೇಳಲಾಗಿತ್ತು. ಬಿಜೆಪಿಯಿಂದ ಮಾಜಿ ಐಪಿಎಸ್ ಅಧಿಕಾರಿ, ಯುವ ನಾಯಕ ಅಣ್ಣಾಮಲೈ ಅವರನ್ನು ದೂರು ಮಾಡಿದ್ದಾರೆಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ತಮ್ಮ ನಡೆ ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

K Annamalai

ಜೂ.2ರಂದು ದೆಹಲಿಗೆ ತೆರಳಿದ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ ತಮ್ಮ ರಾಜೀನಾಮೆ ಇಂಗಿತವನ್ನು ಹೇಳಿ ಕೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸುದೀರ್ಘ 5 ಪುಟಗಳ ಪತ್ರ ನೀಡಿ, ಪಕ್ಷ ತೊರೆಯುವ ನಿರ್ಧಾರವನ್ನು ತಿಳಿಸಿದ್ದರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ ಮಧ್ಯಸ್ಥಿಯೂ ಕೈ ಕೊಡಲಿಲ್ಲ. ಯಾವುದೇ ಪ್ರಯತ್ನ ಫಲಕೊಡದೆ, ಕರ್ನಾಟಕದ ಸಿಂಗಂ ಪಕ್ಷದಿಂದ ನಿರ್ಗಮಿಸಿದ್ದಾರೆ.

ವಿಜಯ್ ಗೆಲುವಿನ ನಂತರ ಲೆಕ್ಕಾಚಾರ ಬದಲು

ತಮಿಳುನಾಡಿನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪನೆ ಮಾಡಿದ ಮೇಲೆ ತಮಿಳುನಾಡಿನಲ್ಲಿ ರಾಜಕೀಯ ಲೆಕ್ಕಾಚಾರವೇ ಬದಲಾಗಿದೆ. ತಮಿಳುನಾಡಿನ ಜನ ಹೊಸ ಪಕ್ಷಕ್ಕೆ ಬೇಕಾದರೂ ಮತ ಹಾಕುತ್ತಾರೆ. ಆದರೆ ಬಿಜೆಪಿ ಇಲ್ಲಿ ಗೆಲುವು ಸಾಧಿಸುವುದು ಕಷ್ಟ. ಬಿಜೆಪಿ ಮಾತ್ರವಲ್ಲ ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನಲ್ಲಿ ಬಲವಿಲ್ಲ. ಪ್ರಾದೇಶಿಕ ಪಕ್ಷಗಳ ನೆರಳಿನಲ್ಲೇ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಟವಾಡುವುದು ಇದೆ. ವಿಜಯ ಕೇವಲ ಎರಡು ವರ್ಷದ ಅವಧಿಯಲ್ಲಿ ಅಪಾರ ಜನ ಮನ್ನಣೆ ಹಾಗೂ ಗೆಲುವು ಸಹ ದಾಖಲಿಸಿದರು. ಕೆ ಅಣ್ಣಾಮಲೈ ಅವರಿಗೆ ಜನ ಮನ್ನಣೆ ಸಿಕ್ಕರೂ ರಾಜಕೀಯವಾಗಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ತಪ್ಪಿದ ರಾಜ್ಯಸಭಾ ಸ್ಥಾನ

ಬಿಜೆಪಿ ಅಣ್ಣಾಮಲೈ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಚಿಂತಿಸಿತ್ತು. ಅಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಟಿಡಿಪಿ-ಬಿಜೆಪಿಯಿಂದ ಮೂರು ಹಾಗೂ ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿಯಿಂದ ಒಂದು ಸ್ಥಾನಕ್ಕೆ ಸದಸ್ಯರನ್ನು ಚುನಾಯಿಸಲು ನಿರ್ಧರಿಸಲಾಗಿತ್ತು. ಆದರೆ, ಅಣ್ಣಾಮಲೈ ಪಕ್ಷ ತೊರೆಯುವ ಸುಳಿವು ಸಿಕ್ಕಿದ್ದರಿಂದ ಟಿಡಿಪಿಯಿಂದಲೇ ಮೂವರು ಸದಸ್ಯರನ್ನು ಕಳುಹಿಸಲಾಗುತ್ತದೆ ಎನ್ನಲಾಗಿದೆ.

ರಾಜೀನಾಮೆ ಅಂಗೀಕರಿಸಿದ ಬಿಜೆಪಿ

ಇನ್ನು ಬಿಜೆಪಿ ಪಕ್ಷಕ್ಕೆ ಕೆ ಅಣ್ಣಾಮಲೈ ಅವರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಸುದೀರ್ಘ 5 ಪತ್ರಗಳ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ನಾಯಕ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೆ ಅಣ್ಣಾಮಲೈ ಅವರು ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+