ಆಧಾರ್ ಕಾರ್ಡ್ ಯೋಜನೆ ರದ್ದಾಗಲ್ಲ: ಬಿಜೆಪಿ
ನವದೆಹಲಿ, ಜು.12: ಯುಪಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಪತ್ರ ಯೋಜನೆ(UIDAI)ಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಲೋಕಸಭೆಯಲ್ಲಿ ಈ ವಿಷಯದ ಕುರಿತು ಲಿಖಿತ ಉತ್ತರ ನೀಡಿರುವ ಯೋಜನಾ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು, 'ಯೋಜನೆಯನ್ನು ರದ್ದುಗೊಳಿಸಬೇಕೆಂಬ ಯಾವುದೇ ಪ್ರಸ್ತಾವನೆ ಸರಕಾರ ಪರಿಶೀಲನೆಯಲ್ಲಿ ಇಲ್ಲ,' ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರೂ. 2,039 ಕೋಟಿ ರೂ.ಗಳನ್ನು ಆಧಾರ್ ಯೋಜನೆಗೆಂದು ಮೀಸಲಿರಿಸಿದೆ. ಕಳೆದ ಬಜೆಟ್ನಲ್ಲಿ ನೀಡಿದ್ದಕ್ಕಿಂತ ಇದು 1550 ಕೋಟಿ ಹೆಚ್ಚು. ಯುಪಿಎಗಿಂತ ಹೆಚ್ಚಿನ ಅನುದಾನ ಎನ್ಡಿಎ ನೀಡುತ್ತಿದೆ ಎಂದರು.

ಈ ಮಧ್ಯೆ ಲೋಕಸಭೆಗೆ ನೀಡಿರುವ ಇನ್ನೊಂದು ಉತ್ತರದಲ್ಲಿ, "2014ರ ಮಾರ್ಚ್ 9ರ ವೇಳೆಗೆ 60 ಕೋಟಿ ಜನರಿಗೆ ಗುರುತಿನ ಪತ್ರ ವಿತರಿಸುವ ತನ್ನ ಗುರಿಯನ್ನು ಪ್ರಾಧಿಕಾರ ಈಗಾಗಲೇ ತಲುಪಿದೆ" ಎಂದಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಛತ್ತೀಸ್ಗಢ ಮತ್ತು ಉತ್ತರಾಖಂಡ್ ರಾಜ್ಯಗಳಿಗೂ ಆಧಾರ್ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಈ ರಾಜ್ಯಗಳ ಒಟ್ಟು ಜನಸಂಖ್ಯೆ 33.9 ಕೋಟಿ ಇದೆ. ಈ ನಾಲ್ಕೂ ರಾಜ್ಯಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಟ್ಟು 64.23 ಕೋಟಿ ನಾಗರಿಕರು ಆಧಾರ್ ಗುರುತಿನ ಪತ್ರವನ್ನು ಹೊಂದಿದ್ದಾರೆ ಎಂದು ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.(ಪಿಟಿಐ)












Click it and Unblock the Notifications