ದೆಹಲಿಯಲ್ಲಿ ಇಷ್ಟು ವರ್ಷದ ವನವಾಸದ ನಂತರ ಬಿಜೆಪಿ ಅಧಿಕಾರಕ್ಕೆ!
ದೆಹಲಿಯಲ್ಲಿ ಸುದೀರ್ಘ ವನವಾಸದ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ. ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಪಟಾಕಿ ಸಿದ್ಧ ಮಾಡಿಕೊಂಡು ಇರಿ ಎಂದು ದೆಹಲಿ ಜನತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ತಿಂಗಳು ಮುಂಚೆಯೇ ಹೇಳಿದ್ದರು. ಅದರಂತೆ ದೆಹಲಿಯಲ್ಲಿ ಈ ಬಾರಿ ಬಿಜೆಪಿಗೆ ಅಧಿಕಾರ ಎಂದು ಬಹುತೇಕ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ.
ದೇಶದಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ದೆಹಲಿಯ ಚುನಾವಣೋತ್ತರ ಸಮೀಕ್ಷೆ ಬಂದಿದ್ದು. ದೆಹಲಿಯಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ದೆಹಲಿಯಲ್ಲಿ 25 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ.

ಕೇಂದ್ರಾಡಳಿತ ಪ್ರದೇಶ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. 70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ದೆಹಲಿ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 36 ಆಗಿದೆ. ಈ ಬಾರಿ ಕನಿಷ್ಠ 55 ಸೀಟುಗಳಲ್ಲಿ ಗೆಲ್ಲುವುದಾಗಿ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದರು. ದೆಹಲಿಯಲ್ಲಿ ಎರಡು ಅವಧಿಯಿಂದ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿ ಇದೆ.
ಈ ಬಾರಿ ದೆಹಲಿ ಚುನಾವಣೆಯು ಹಲವು ಕಾರಣಕ್ಕೆ ಕುತೂಹಲ ಮೂಡಿಸಿತ್ತು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯೂ ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿ ಇದೆ. ದೆಹಲಿಯಲ್ಲಿ ಎಎಪಿ ಭ್ರಷ್ಟಾಚಾರ ವಿರೋಧ ಆಂದೋಲನದಿಂದಲೇ ಅಧಿಕಾರಕ್ಕೆ ಬಂದಿತ್ತು. ಇದಾದ ಮೇಲೆ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮಾಡಿದ್ದ ಜನಪರ ಹಾಗೂ ಕಲ್ಯಾಣ ಯೋಜನೆಗಳಿಗೆ ಜನ ಮೆಚ್ಚುಗೆ ಸೂಚಿಸಿದ್ದರು. ಇದರಿಂದ ದೆಹಲಿಯಲ್ಲಿ ಎರಡನೇ ಬಾರಿಗೂ ಎಎಪಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಾಯಿತು. ಆದರೆ, ಈ ಬಾರಿ ಎಎಪಿಗೆ ತನ್ನ ಭದ್ರಕೋಟೆಯಲ್ಲೇ ಮುಖಭಂಗ ಆಗಿದೆ.
ಮದ್ಯ ನೀತಿ ಹಗರಣ ಪೆಟ್ಟು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಮದ್ಯ ನೀತಿ ಹಗರಣ ಪೆಟ್ಟು ಕೊಡಲಿದೆ ಎಂದೇ ಹೇಳಲಾಗಿತ್ತು. ಯಾಕೆಂದರೆ ಮದ್ಯ ನೀತಿಯಲ್ಲಿ ಎಎಪಿ ಭಾರೀ ಹಗರಣ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲು ಸೇರಿದ್ದರು. ಒಟ್ಟು 156 ದಿನಗಳು ಅವರು ಜೈಲಿನಲ್ಲಿ ಇದ್ದರು. ಅಬಕಾರಿ ನೀತಿಯನ್ನು ಜಾರಿ ಮಾಡುವುದು ಅಥವಾ / ಅಂತಿಮಗೊಳಿಸಲು ಕೇಜ್ರಿವಾಲ್ ನೇತೃತ್ವದ ಸರ್ಕಾರವು ಬರೋಬ್ಬರಿ 100 ಕೋಟಿ ಕಿಕ್ಬ್ಯಾಕ್ ಪಡೆದಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ರೀತಿ ಆರೋಪವನ್ನು ಇಡಿ ಮಾಡಿತ್ತು.
ಶೀಶ್ ಮಹಲ್ ಚರ್ಚೆ: ಇನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಮತ್ತೊಂದು ವಿಷಯವೆಂದರೆ ಅದು ದೆಹಲಿ ಸರ್ಕಾರದ ಶೀಶ್ ಮಹಲ್. ಶೀಶ್ ಮಹಲ್ ದೆಹಲಿಯ ಸರ್ಕಾರಿ ಕಚೇರಿಯಾಗಿದ್ದು. ಈ ಕಚೇರಿಯನ್ನು ಅರವಿಂದ್ ಕೇಜ್ರಿವಾಲ್ ಅವರ ಆಡಳಿತದ ಅವಧಿಯಲ್ಲಿ ಅದರಲ್ಲೂ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಆರೋಪವನ್ನು ಬಿಜೆಪಿ ಮಾಡಿತ್ತು.
ಈ ಎರಡು ವಿಷಯಗಳು ಚುನಾವಣೆಯಲ್ಲಿ ಎಎಪಿಯ ಮೇಲೆ ಪ್ರಭಾವ ಬೀರಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications