ಲೋಕಸಭೆ ಚುನಾವಣೆಗೆ ಮುನ್ನ 4 ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದ ಬಿಜೆಪಿ: ಲೆಕ್ಕಾಚಾರವೇನು? ಇನ್ಸೈಡ್ ಸ್ಟೋರಿ
ನವದೆಹಲಿ, ಜುಲೈ 04: 2024ರ ಲೋಕಸಭೆ ಚುನಾವಣೆಗೆ ಮುನ್ನ ನಾಲ್ಕು ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ಬಿಜೆಪಿಯು ನೇಮಿಸಿದೆ. ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ಜಿ ಕಿಶನ್ ರೆಡ್ಡಿ, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರಾಗಿ ದಗ್ಗುಬಾಟಿ ಪುರಂದೇಶ್ವರಿ, ಜಾರ್ಖಂಡ್ನ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಮತ್ತು ಪಂಜಾಬ್ ಘಟಕದ ರಾಜ್ಯಾಧ್ಯಕ್ಷರಾಗಿ ಸುನೀಲ್ ಜಾಖರ್ ಅವರನ್ನು ನೇಮಕ ಮಾಡಲಾಗಿದೆ.
ತೆಲಂಗಾಣ ಬಿಜೆಪಿಯಲ್ಲಿ ಅಸಮಾಧಾನ ಶಮನ
ತೆಲಂಗಾಣದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಈಟಾಲ ರಾಜೇಂದರ್ ಅವರನ್ನು ನೇಮಿಸಿರುವುದಾಗಿ ಬಿಜೆಪಿ ಘೋಷಿಸಿದೆ. ಈಟಾಲ ರಾಜೇಂದರ್ ಹಾಗೂ ಅಧ್ಯಕ್ಷರಾಗಿದ್ದ ಬಂಡಿ ಸಂಜಯ್ ಕುಮಾರ್ ನಡುವೆ ಅಸಮಾಧಾನವಿತ್ತು. ಈಟಾಲ ರಾಜೇಂದರ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇಬ್ಬರೂ ನಾಯಕರ ಅಸಮಾಧಾನವನ್ನು ಶಮನ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿ ಘೋಷಿಸಿದೆ.

ಬಂಡಿ ಸಂಜಯ್ ಕುಮಾರ್ ಅವರಿಗೆ ಕೇಂದ್ರದಲ್ಲಿ ಸ್ಥಾನ ನೀಡುವ ಮೂಲಕ ತೆಲಂಗಾಣ ಬಿಜೆಪಿಯಲ್ಲಿನ ಸಂಘರ್ಷವನ್ನು ತನ್ನಗಾಗಿಸಲು ಹೈಕಮಾಂಡ್ ತಂತ್ರ ರೂಪಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಸಚಿವರಾಗಿ ಬಂಡಿ ಸಂಜೀವ್ ಸೇರ್ಪಡೆಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ನಾಯಕರಲ್ಲಿನ ಅಸಮಾಧಾನವನ್ನು ಶಮನ ಮಾಡುವ ಮೂಲಕ ತೆಲಂಗಾಣದಲ್ಲಿ ಬಿಜೆಪಿಗೆ ಬಲ ತಂದುಕೊಡುವ ಪ್ರಯತ್ನ ಇದಾಗಿದೆ ಎನ್ನಲಾಗುತ್ತಿದೆ. ಇದು ಲೋಕಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಆಂಧ್ರಪ್ರದೇಶದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿಗೆ ಸುಲಭ ಹಾದಿ
ಇನ್ನು ಆಂಧ್ರಪ್ರದೇಶದಲ್ಲಿ ದಗ್ಗುಬಾಟಿ ಪುರಂದರೇಶ್ವರಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷೆಯನ್ನಾಗಿ ಮಾಡಲಾಗಿದೆ. ಪುರಂದರೇಶ್ವರಿ ಅವರು ಮಾಜಿ ಸಿಎಂ, ಖ್ಯಾತ ನಟ ಎನ್ ಟಿ ರಾಮರಾವ್ ಅವರ ಪುತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಸೊಸೆಯಾಗಿದ್ದಾರೆ.

ಈಗಾಗಲೇ ಬಿಜೆಪಿ ಹಾಗೂ ಟಿಡಿಪಿ ಪಕ್ಷಗಳು ಮೈತ್ರಿಯ ಬಗ್ಗೆ ಮಾತನಾಡುತ್ತಿವೆ. ಒಂದು ವೇಳೆ, ಈ ಮೈತ್ರಿ ಏರ್ಪಟ್ಟಲ್ಲಿ ಆಂಧ್ರ ಪ್ರದೇಶದಲ್ಲಿ ಎನ್ಡಿಎ ಗೆಲುವಿಗೆ ಇಬ್ಬರು ನಾಯಕರು ಒಟ್ಟಾಗಿ ಶ್ರಮಿಸಬಹುದು ಎಂಬ ಆಶಯವನ್ನು ಬಿಜೆಪಿ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದು ಲೋಕಸಭಾ ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.
ಪಂಜಾಬ್ನಲ್ಲಿ ಅನುಭವ ಬಳಸಿಕೊಳ್ಳಲು ಮುಂದಾದ ಕೇಸರಿ ಪಡೆ
68 ವರ್ಷದ ಸುನೀಲ್ ಜಾಖರ್ ಅವರು ಈ ಹಿಂದೆ ಪಂಜಾಬ್ನಲ್ಲಿ ಕಾಂಗ್ರೆಸ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಬಿಜೆಪಿ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದೆ.
ಪಂಜಾಬ್ನ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಸುನಿಲ್ ಜಾಖರ್ ಅವರು ಮೇ 2022 ರಲ್ಲಿ ಕೇಸರಿ ಬಿಜೆಪಿಯನ್ನು ಸೇರಿದರು. ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ಮೂರು ತಿಂಗಳ ನಂತರ ಅವರು ಕೇಸರಿ ಪಕ್ಷದ ಕೈ ಹಿಡಿದರು.

2021 ರಲ್ಲಿ ನವಜೋತ್ ಸಿಂಗ್ ಸಿಧು ಅವರು ಅಧ್ಯಕ್ಷರಾಗುವ ಮುನ್ನ ಜಾಖರ್ ಅವರು ನಾಲ್ಕು ವರ್ಷಗಳ ಕಾಲ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರ ಅನುಭವ ಹಾಗೂ ತಂತ್ರಗಾರಿಕೆಯನ್ನು ಬಿಜೆಪಿ ಬಳಸಿಕೊಳ್ಳುವ ಉತ್ಸಾಹವನ್ನು ತೋರಿದೆ.
ಜಾರ್ಖಂಡ್ನಲ್ಲಿ ಬುಡಕಟ್ಟು ಮತ ಸೆಳೆಯಲು ತಂತ್ರ
ಜಾರ್ಖಂಡ್ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಬಾಬುಲಾಲ್ ಮರಾಂಡಿ ಅವರು, ಜಾರ್ಖಂಡ್ನ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಜಾರ್ಖಂಡ್ ವಿಕಾಸ್ ಮೋರ್ಚಾದ (ಪ್ರಜಾತಾಂತ್ರಿಕ) ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಮತ್ತು ಅದರ ಸ್ಥಾಪಕರಾಗಿದ್ದರು. ಅವರು 1990 ರಲ್ಲಿ ಬಿಜೆಪಿ ಸೇರಿದ ನಂತರ ನಾಲ್ಕು ಬಾರಿ ಲೋಕಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಸೇರಿದ ಜನಪ್ರಿಯ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡುವುದರಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.












Click it and Unblock the Notifications