ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ದಾಳಿ
ತಿರುವನಂತಪುರ, ಜುಲೈ 16: ಹಿಂದೂ ಪಾಕಿಸ್ತಾನ ಹೇಳಿಕೆಯಿಂದ ವಿವಾದದ ಕೇಂದ್ರದಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಾಳಿ ಮಾಡಿದ್ದು ದಾಂಧಲೆ ನಡೆಸಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಇರುವ ಅವರ ಕಚೇರಿ ಮೇಲೆ ಇಂದು ಬೆಳಿಗ್ಗೆ ಯುವ ಮೋರ್ಚಾ ಕಾರ್ಯಕರ್ತರು ದಾಳಿ ನಡೆಸಿ ಕಪ್ಪು ಮಸಿ (ಕಪ್ಪು ಎಂಜಿನ್ ಆಯಿಲ್) ಸುರಿದಿದ್ದಾರೆ. ಅಲ್ಲದೆ 'ಹಿಂದೂ ಪಾಕಿಸ್ತಾನ' ಕಚೇರಿ' ಎಂಬ ಬರಹವುಳ್ಳ ಬೋರ್ಡ್ಗಳನ್ನು ಕಚೇರಿ ಒಳಕ್ಕೆ ಎಸೆದಿದ್ದಾರೆ.
ಒಳಗೆ ಕೂತಿದ್ದ ಜನರನ್ನು ಎಳೆದಾಡಿದ್ದಾರೆ, ಶಶಿ ತರೂರ್ ಅವರನ್ನು ಪಾಕಿಸ್ತಾನಕ್ಕೆ ಹೋಗುವಂತೆ ಘೋಷಣೆಗಳನ್ನು ಕೂಗಿದ್ದಾರೆ, ಹಾಗೂ ಕಚೇರಿಯನ್ನು ಬಂದ್ ಮಾಡುವುದಾಗಿಯೂ ಹೇಳಿದ್ದಾರೆ.

ಯುವ ಮೋರ್ಚಾ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿದಾಗ ಶಶಿ ತರೂರ್ ಅವರು ತಿರುವನಂತಪುರದಲ್ಲೇ ಇದ್ದರು ಆದರೆ ಕಚೇರಿಯಲ್ಲಿ ಇರಲಿಲ್ಲ.
ಸಂಸದ ಶಶಿ ತರೂರ್ ಅವರ 'ಹಿಂದೂ ಪಾಕಿಸ್ತಾನ' ಹೇಳಿಕೆಗೆ ಪ್ರತಿಕಾರವಾಗಿ ಈ ಕೃತ್ಯ ಎಸಗಿದ್ದಾಗಿ ತಿರುವನಂತಪುರ ಬಿಜೆಪಿ ಅಧ್ಯಕ್ಷ ಎಸ್.ಸುರೇಶ್ ಹೇಳಿದ್ದಾರೆ. ಈ ಘಟನೆಯನ್ನು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಾಸನ್ ಖಂಡಿಸಿದ್ದಾರೆ.
ಶಶಿ ತರೂರ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ 'ಬಿಜೆಪಿಯ ಹಿಂದೂ ರಾಷ್ಟ್ರ ಅಜೆಂಡಾವು ಸಮಾನತೆಯನ್ನು ತೊಡೆದುಹಾಕುತ್ತದೆ. ಅದು ಮುಂದೆ 'ಹಿಂದೂ ಪಾಕಿಸ್ತಾನ'ವನ್ನು ಸೃಷ್ಠಿಸುತ್ತದೆ' ಎಂದಿದ್ದರು.
ಶಶಿ ತರೂರ್ ಅವರ ಈ ಹೇಳಿಕೆ ಭಾರಿ ವಿವಾದ ಸೃಷ್ಠಿಸಿತ್ತು. ಬಿಜೆಪಿಯ ಮುಖಂಡರುಗಳು ಶಶಿ ತರೂರ್ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕ್ಷಮೆಗೆ ಒತ್ತಾಯಿಸಿದ್ದಾರೆ.












Click it and Unblock the Notifications