ಮೇವು ಹಗರಣದ ಕೈದಿ ನಂ. 3312 ಲಾಲುಗೆ ಶಿಕ್ಷೆ ಪ್ರಕಟ
ರಾಂಚಿ (ಬಿಹಾರ), ಅ. 3: ಬಹುಕೋಟಿ ಮೇವು ಹಗರಣದಲ್ಲಿ ಘೋಷಿತ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲಾಲು ಇನ್ನು 5 ವರ್ಷ ಕಾಲ ಜೈಲಿನಿಂದ ಹೊರಬರುವಂತಿಲ್ಲ. ಆಷ್ಟೇ ಅಲ್ಲ. ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲು ಇನ್ನು 11 ವರ್ಷ ಸಂಸತ್ತಿನತ್ತ ಸುಳಿದಾಡುವಂತೆಯೂ ಇಲ್ಲ.
ಪ್ರಕರಣದಲ್ಲಿ ಲಾಲೂ ತಪ್ಪಿತಸ್ಥ ಎಂದು ಸೋಮವಾರ ಘೋಷಿಸಿದ್ದ ಲಾಲೂ ಸಹಪಾಠಿ, ಸಿಬಿಐ ನ್ಯಾಯಾಧೀಶರಾದ ಪ್ರವಾಸ್ ಕುಮಾರ್ ಸಿಂಗ್ ಅವರು ಲಾಲುರನ್ನು 5 ವರ್ಷದ ಶಿಕ್ಷೆಗೆ ಗುರಿಪಡಿಸಿದ್ದಾರೆ. ಜತೆಗೆ, 25 ಲಕ್ಷ ರೂ ದಂಡವನ್ನೂ ವಿಧಿಸಿದ್ದಾರೆ. ಇದರಿಂದ ವೈಯಕ್ತಿಕ ನೆಲೆಯಲ್ಲಿ ಲಾಲು ರಾಜಕೀಯ ಅವಸಾನ ಆರಂಭವಾದಂತಾಗಿದೆ. 65 ವರ್ಷದ ಲಾಲು ಮೂರು ದಿನಗಳಿಂದ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.

3ನೇ ಸಂಸದ ಡಿಬಾರ್: ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಪಾಕಿಸ್ತಾನದ ವಿಶ್ವವಿದ್ಯಾಲಯಗಳಿಗೆ ತೆರಳಿ ವಿಶೇಷ ಉಪನ್ಯಾಸ ನೀಡಿದ್ದ ಲಾಲುಗೆ ಇನ್ನು ಅಂತಹ ಅವಕಾಶಗಳು ಜೀವಮಾನದಲ್ಲಿ ಲಭ್ಯವಾಗುವುದಿಲ್ಲ. ಜಹಾನಾಬಾದ್ ಸಂಸದ ಜೆಡಿಯು ಪಕ್ಷದ ಜಗದೀಶ್ ಶರ್ಮಾ ಸಹ 4 ವರ್ಷ ಶಿಕ್ಷೆಗೆ ಗುರಿಯಾಗಿದ್ದು, ಇದೀಗ ಅವರೂ ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಲಾಲು ಹಾಗೂ ಶರ್ಮಾ ಅವರು ಜೈಲಿನಿಂದ ಬಿಡುಗಡೆಯಾದ ದಿನದಿಂದ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗಾಗಿ ಲಾಲು ಇನ್ನು 11 ವರ್ಷ ಕಾಲ ಮತ್ತು ಶರ್ಮಾ 10 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಕೈದಿ ನಂಬರ್ 3312 ಲಾಲು ಇನ್ನು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆವರೆಗೂ ಸ್ಪರ್ಧಿಸುವಂತಿಲ್ಲ.
ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ (4 ವರ್ಷ ಜೈಲು), ಪಶು ಸಂಗೋಪನಾ ಇಲಾಖೆಯ ಅಂದಿನ ಕಾರ್ಯದರ್ಶಿ (ಇವರಿಗೆ 5 ವರ್ಷ ಜೈಲು ಮತ್ತು 1.5 ಕೋಟಿ ರೂಪಾಯಿ ದಂಡ) ಸೇರಿದಂತೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದ ಒಟ್ಟು 36 ಮಂದಿಗೆ ಸಹ ಶಿಕ್ಷೆ ಪ್ರಕಟಿಸಲಾಗಿದೆ.
ಪ್ರಕರಣವೇನು? ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮೊದಲ ತೀರ್ಪು ಇಂದು ಸೋಮವಾರ ಪ್ರಕಟವಾಗಿದೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ.
ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದಿತ್ತು. ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಲಾಲು ಪ್ರಸಾದ್ ಯಾದವ್ ಜೈಲಿಗೂ ಹೋಗಿಬಂದಿದ್ದರು.
ಲಾಲು ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳ ಪೈಕಿ ಐದರ ವಿಚಾರಣೆ ಜಾರ್ಖಂಡ್ನಲ್ಲಿ, ಒಂದು ಪ್ರಕರಣದ ವಿಚಾರಣೆ ಬಿಹಾರದಲ್ಲೂ ನಡೆಯುತ್ತಿದೆ. ಜಾರ್ಖಂಡ್ ರಚನೆಯಾದ ಬಳಿಕ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು.












Click it and Unblock the Notifications