ಬಿಹಾರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು: ಕಾರಣಗಳು 6
ಪಾಟ್ನಾ, ನವದೆಹಲಿ ಅ 21: ದೇಶಾದ್ಯಂತ ಭಾರೀ ಕುತೂಹಲಗಿಟ್ಟಿಸಿರುವ ಬಿಹಾರ ಅಸೆಂಬ್ಲಿಗೆ ಮೊದಲೆರಡು ಹಂತದ ಚುನಾವಣೆ ಈಗಾಗಲೇ ಮುಕ್ತಾಯಗೊಂಡಿದೆ.
ಪಾಟ್ನಾದಲ್ಲಿ ಸೋಮವಾರ (ಅ 19) ನಡೆದ ಚುನಾವಣಾ ರ್ಯಾಲಿಯಲ್ಲಿ ಮೊದಲ ಎರಡು ಹಂತದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಹೆಚ್ಚಿನ ಸ್ಥಾನಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸದ ಮಾತನ್ನಾಡಿದ್ದಾರೆ.
ಇತ್ತ, ಈಗಾಗಲೇ ಬಿಜೆಪಿಗೆ ಸೋಲಿನ ಬಿಸಿಮುಟ್ಟಿದೆ, ಅದಕ್ಕಾಗಿಯೇ ಚುನಾವಣಾ ಪೋಸ್ಟರ್ ನಿಂದ ಮೋದಿ ಮತ್ತು ಶಾ ಅವರ ಚಿತ್ರವನ್ನು ತೆಗೆದು ಹಾಕಲಾಗಿದೆ ಎಂದು ಮಹಾಮೈತ್ರಿಕೂಟ ಹೇಳಿಕೆ ನೀಡಿದೆ. (ಭಾರೀ ಕುತೂಹಲ ಹುಟ್ಟುಹಾಕಿದ 3 ಸಮೀಕ್ಷೆ)
ಮೊದಲ ಹಂತದ ಚುನಾವಣೆಯ ಒಟ್ಟು 49 ಸ್ಥಾನಗಳ ಪೈಕಿ ಎನ್ಡಿಎ 28 ರಿಂದ 32 ಸ್ಥಾನ ಮತ್ತು ಎರಡನೇ ಹಂತದ ಚುನಾವಣೆಯ 32 ಸ್ಥಾನಗಳಲ್ಲಿ ನಾವು 20 ರಿಂದ 24 ಸ್ಥಾನ ಗೆಲ್ಲಲ್ಲಿದ್ದೇವೆಂದು ಅಮಿತ್ ಶಾ ಭರವಸೆಯ ಹೇಳಿಕೆಯನ್ನು ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಂದಂತ ಅಚ್ಚರಿಯ ಫಲಿತಾಂಶವನ್ನು ನಾವು ಬಿಹಾರದಲ್ಲೂ ಮುಂದುವರಿಸಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಆರು ಕಾರಣಗಳು ಬಿಹಾರದಲ್ಲಿ ಬಿಜೆಪಿಗೆ ಅನುಕೂಲವಾಗಬಹುದು,ಮುಂದೆ ಓದಿ..

ಭಾರೀ ಸಂಖ್ಯೆಯ ಕಾರ್ಯಕರ್ತರು
ಬಿಹಾರ ಚುನಾವಣೆಯನ್ನು ಶತಾಯುಗತಾಯು ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟ, ಚುನಾವಣೆಗಾಗಿ ಆರು ಲಕ್ಷ ಕಾರ್ಯಕರ್ತರನ್ನು ನಿಯೋಜಿಸಿದೆ. ಅರವತ್ತು ಸಾವಿರ ಪೋಲಿಂಗ್ ಬೂತಿಗೆ ತಲಾ ಹತ್ತು ಕಾರ್ಯಕರ್ತರಂತೆ ಪಕ್ಷದ ಪರವಾಗಿ ಕೆಲಸ ಮಾಡುವುದು ಬಿಜಿಪಿಗಿರುವ ದೊಡ್ಡ ಪ್ಲಸ್. ಇದಲ್ಲದೇ ಸುಮಾರು 9.6 ಮಿಲಿಯನ್ ಬಿಹಾರಿಗಳು ಬಿಜೆಪಿ ಸದಸ್ಯತ್ವ ನೊಂದಣಿ ಮಾಡಿಸಿಕೊಂಡಿದ್ದಾರೆ. ಇದಲ್ಲದೇ ಸುಮಾರು ಎಪ್ಪತ್ತು ಸಾವಿರ ಆರ್ ಎಸ್ ಎಸ್ ಕಾರ್ಯಕರ್ತರ ಬೆಂಬಲ ಬಿಜೆಪಿಗೆ ಇದ್ದೇ ಇದೆ.

ಲಾಲೂ ವಿರೋಧಿ ವೋಟು
ಹರ್ಯಾಣ ಮಾದರಿಯಲ್ಲೇ ಬಿಜೆಪಿ ಬಿಹಾರದಲ್ಲೂ ರಣತಂತ್ರ ರೂಪಿಸುತ್ತಿದೆ. ಜಂಗಲ್ ರಾಜ್ ಘೋಷಣೆಯ ಮೂಲಕ ಲಾಲೂ ಪ್ರಸಾದ್ ಯಾದವ್ ವಿರುದ್ದ ಬಿಜೆಪಿ ಪ್ರಚಾರ ನಡೆಸುತ್ತಿದೆ. ಬಿಹಾರದಲ್ಲಿ ಮುಸ್ಲಿಂ, ಯಾದವ ಮತ್ತು ಕುರ್ಮಿ ಜನಾಂಗದ ಒಟ್ಟು ಸಂಖ್ಯೆ ಸುಮಾರು ಶೇ. 35. ಈ ಮೂರು ಸಮುದಾಯವನ್ನು ಹೊರತು ಪಡಿಸಿ ಶೇ. 65 ಇತರ ಸಮುದಾಯದ ಮೇಲೆ ಬಿಜೆಪಿ ಹೆಚ್ಚಿನ ಗಮನ ಹರಿಸುತ್ತಿದೆ. ಹರ್ಯಾಣದಲ್ಲೂ ಜ್ಯಾಟ್ ಸಮುದಾಯ ಹೊರತು ಪಡಿಸಿ ಇತರ ಸಮುದಾಯದವರನ್ನು ಚುನಾವಣೆಯ ವೇಳೆ ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಸಫಲವಾಗಿತ್ತು.

ಉತ್ತಮ ಮೈತ್ರಿಕೂಟ
ರಾಮ್ ವಿಲಾಸ್ ಪಾಸ್ವಾನ್, ಮಾಂಝಿ ಸೇರಿದಂತೆ ಬಿಜೆಪಿ ಮಾಡಿಕೊಂಡಿರುವ ಮೈತ್ರಿ ಫಲಕೊಡುವ ಸಾಧ್ಯತೆಯಿದೆ. ಆಯಾಯ ನಾಯಕರ ಸಮುದಾಯದ ಬೆಂಬಲ ಎನ್ಡಿಎ ಮೈತ್ರಿಕೂಟಕ್ಕೆ ಸಿಗಲಿದೆ ಎನ್ನುವ ಬಲವಾದ ನಂಬಿಕೆಯಲ್ಲಿ ಬಿಜೆಪಿಯಿದೆ. ಶೇ. 15 ಮೇಲ್ವರ್ಗದ ಮತದಾರ, ಶೇ. 8 ಕುಷ್ವಾ ಸಮುದಾಯ (ಉಪೇಂದ್ರ ಕುಷ್ವಾ ಅವರ ರಾಷ್ಟ್ರೀಯ ಲೋಕತಾಂತ್ರಿಕ್ ಸಮತಾ ಪಾರ್ಟಿ, ಎನ್ಡಿಎ ಮೈತ್ರಿಕೂಟದಲ್ಲಿದೆ), ರಾಮ್ ವಿಲಾಸ್ ಪಾಸ್ವಾನ್ ಮತ್ತು ಬಲಿಷ್ಠ ಮಹಾದಲಿತ (ಮಾಂಝಿ) ಸಮುದಾಯದ ಬೆಂಬಲ ಸಿಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಮೋದಿ ಜನಪ್ರಿಯತೆ
ಪ್ರಧಾನಿ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ ಎನ್ನುವ ಸಮೀಕ್ಷೆಯ ನಡುವೆಯೂ, ಮೋದಿ ಬಿಹಾರದಲ್ಲಿನ ಚುನಾವಣಾ ಸಭೆಗೆ ಜನರು ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ. ಇದು ವೋಟಾಗಿ ಪರಿವರ್ತನೆಯಾಗುವ ಸಾಧ್ಯತೆಯಿಲ್ಲದಿಲ್ಲ. ಮೋದಿ ಪ್ರಭಾವದಿಂದ ಶೇಕಡ ಐದರಷ್ಟು ಹೆಚ್ಚಿನ ಮತ ಸಿಗುವ ಸಾಧ್ಯತೆಯಿದೆ.

ಮಹಿಳಾ ಮತದಾರರು
ಮುಕ್ತಾಯಗೊಂಡ ಎರಡು ಹಂತದ ಚುನಾವಣೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೋದಿಯವರ ದೂರದೃಷ್ಠಿ, ಮಹಿಳಾ ಭದ್ರತೆ, ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗುವಲ್ಲಿ ಕೇಂದ್ರ ಸರಕಾರದ ಯೋಜನೆಗಳು ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಜೊತೆಗೆ ಉಳಿದ ಮೂರು ಹಂತದ ಚುನಾವಣೆಯಲ್ಲಿ ಮತ್ತಷ್ಟು ಮಹಿಳಾ ಮತದಾರರನ್ನು ಸೆಳೆಯಲು ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಮತ್ತು ವಸುಂಧರಾ ರಾಜೇ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ದನದ ಮಾಂಸ
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜಾತಿ ಮೀಸಲಾತಿ ವಿಚಾರದಲ್ಲಿ ನೀಡಿರುವ ಹೇಳಿಕೆಯಿಂದಾಗಿರುವ ನಷ್ಟವನ್ನು ಬಿಜೆಪಿ ಬೀಫ್ ವಿಚಾರದ ಮೂಲಕ ತಿರುಗೇಟು ನೀಡುತ್ತಿದೆ. ಲಾಲೂ ಪ್ರಸಾದ್ ಯಾದವ್ ಬೀಫ್ ವಿಚಾರದಲ್ಲಿ ನೀಡಿರುವ ಹೇಳಿಕೆಯ ಲಾಭವನ್ನು ಎಲ್ಲಾ ಚುನಾವಣಾ ಸಭೆಯಲ್ಲಿ ಬಳಸಿಕೊಳ್ಳುತ್ತಿದೆ. (ಮಾಹಿತಿ: ಬ್ಯೂಸಿನೆಸ್ ಸ್ಟಾಂಡರ್ಡ್)











Click it and Unblock the Notifications