8 Biggest Train Accidents In India: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳು
ಭವನೇಶ್ವರ, ಜೂನ್ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 50 ಮಂದಿ ಶುಕ್ರವಾರ ಸಂಜೆ ಸಾವನ್ನಪ್ಪಿದ್ದು, 300 ಮಂದಿ ಗಾಯಗೊಂಡಿದ್ದಾರೆ.
ಯಶವಂತಪುರ-ಹೌರಾ ಸೂಪರ್ಫಾಸ್ಟ್ ಹಳಿತಪ್ಪಿದ ಕೋರಮಂಡಲ್ ಎಕ್ಸ್ಪ್ರೆಸ್ನ ಕೆಲವು ಬೋಗಿಗಳಿಗೆ ಡಿಕ್ಕಿ ಹೊಡೆದು ಎದುರಿನ ಹಳಿಯಲ್ಲಿ ಬಿದ್ದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ಮಾಹಿತಿ ತಿಳಿಸಿದ್ದಾರೆ.

ಈ ರೈಲು ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದು, ಅಶ್ವಿನಿ ವೈಷ್ಣವ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಭಾರತದಲ್ಲಿನ ಅತಿದೊಡ್ಡ ರೈಲು ಅಪಘಾತಗಳು ಇಲ್ಲಿವೆ:
1. ಜುಲೈ 7, 2011 ರಂದು, ಛಪ್ರಾ-ಮಥುರಾ ಎಕ್ಸ್ಪ್ರೆಸ್ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಬಳಿ ಬಸ್ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ 69 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
2. 2012 ರಲ್ಲಿ ಭಾರತೀಯ ರೈಲ್ವೇ ಇತಿಹಾಸದಲ್ಲಿ ರೈಲು ಅಪಘಾತಗಳ ವಿಷಯದಲ್ಲಿ ಅತ್ಯಂತ ಕೆಟ್ಟದಾಗಿ ಎಂದು ಪರಿಗಣಿಸಲಾಗಿದ್ದು, ಈ ವರ್ಷ ಸುಮಾರು 14 ಅಪಘಾತಗಳು ವರದಿಯಾಗಿವೆ, ಇದರಲ್ಲಿ ಹಳಿತಪ್ಪುವಿಕೆ ಮತ್ತು ಮುಖಾಮುಖಿ ಡಿಕ್ಕಿಗಳು ಸೇರಿವೆ. ಜುಲೈ 30, 2012 ರಂದು, ನೆಲ್ಲೂರು ಬಳಿ ದೆಹಲಿ-ಚೆನ್ನೈ ತಮಿಳುನಾಡು ಎಕ್ಸ್ಪ್ರೆಸ್ನ ಕೋಚ್ಗೆ ಬೆಂಕಿ ಕಾಣಿಸಿಕೊಂಡು 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

3. ಮೇ 26, 2014 ರಂದು, ಉತ್ತರ ಪ್ರದೇಶದ ಸಂತ ಕಬೀರ್ ನಗರ ಪ್ರದೇಶದಲ್ಲಿ, ಗೋರಖ್ಪುರ ಕಡೆಗೆ ಹೋಗುತ್ತಿದ್ದ ಗೋರಖ್ಧಾಮ್ ಎಕ್ಸ್ಪ್ರೆಸ್ ಖಲೀಲಾಬಾದ್ ನಿಲ್ದಾಣದ ಸಮೀಪದಲ್ಲಿ ಸ್ಥಗಿತಗೊಂಡಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 25 ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡರು.
4. ಮಾರ್ಚ್ 20, 2015 ರಂದು ಡೆಹ್ರಾಡೂನ್ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಜನತಾ ಎಕ್ಸ್ಪ್ರೆಸ್ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದ್ದು, ಉತ್ತರದ ರಾಯ್ ಬರೇಲಿಯ ಬಚ್ರವಾನ್ ರೈಲು ನಿಲ್ದಾಣದ ಬಳಿ ರೈಲಿನ ಇಂಜಿನ್ ಮತ್ತು ಎರಡು ಪಕ್ಕದ ಕೋಚ್ಗಳು ಹಳಿತಪ್ಪಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸುಮಾರು 150 ಜನರು ಗಾಯಗೊಂಡಿದ್ದರು.
5. ನವೆಂಬರ್ 20, 2016 ರಂದು ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ 19321 ಕಾನ್ಪುರದ ಪುಖ್ರಾಯನ್ ಬಳಿ ಹಳಿತಪ್ಪಿ ಕನಿಷ್ಠ 150 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
6. ಆಗಸ್ಟ್ 19, 2017 ರಂದು, ಹರಿದ್ವಾರ ಮತ್ತು ಪುರಿ ನಡುವೆ ಉತ್ಕಲ್ ಎಕ್ಸ್ಪ್ರೆಸ್ ಉತ್ತರ ಪ್ರದೇಶದ ಮುಜಾಫರ್ನಗರದ ಖತೌಲಿ ಬಳಿ ಅಪಘಾತಕ್ಕೀಡಾಯಿತು. ರೈಲಿನ 14 ಬೋಗಿಗಳು ಹಳಿತಪ್ಪಿ 21 ಪ್ರಯಾಣಿಕರು ಮೃತಪಟ್ಟರೆ, 97 ಮಂದಿ ಗಾಯಗೊಂಡಿದ್ದರು.
7. ಆಗಸ್ಟ್ 23, 2017 ರಂದು ದೆಹಲಿಗೆ ಹೋಗುವ ಕೈಫಿಯತ್ ಎಕ್ಸ್ಪ್ರೆಸ್ನ ಒಂಬತ್ತು ರೈಲು ಬೋಗಿಗಳು ಉತ್ತರ ಪ್ರದೇಶದ ಔರೈಯಾ ಬಳಿ ಹಳಿತಪ್ಪಿ ಕನಿಷ್ಠ 70 ಮಂದಿ ಗಾಯಗೊಂಡರು.
8.ಜನವರಿ 13, 2022 ರಂದು, ಪಶ್ಚಿಮ ಬಂಗಾಳದ ಅಲಿಪುರ್ದೂರ್ನಲ್ಲಿ ಬಿಕಾನೇರ್-ಗುವಾಹಟಿ ಎಕ್ಸ್ಪ್ರೆಸ್ನ ಕನಿಷ್ಠ 12 ಬೋಗಿಗಳು ಹಳಿತಪ್ಪಿ 9 ಮಂದಿ ಸಾವನ್ನಪ್ಪಿದರು ಮತ್ತು 36 ಮಂದಿ ಗಾಯಗೊಂಡಿದ್ದರು.












Click it and Unblock the Notifications