ಭೀಮಾ ಕೋರೆಗಾಂವ್ ಯುದ್ಧದ 205 ನೇ ವಾರ್ಷಿಕೋತ್ಸವ: ವಿಜಯಸ್ತಂಭದ ಬಳಿ ಭಾರೀ ಜನಸ್ತೋಮ
ಮುಂಬೈ, ಜ. 01: ಭೀಮಾ ಕೋರೆಗಾಂವ್ ಕದನದ 205 ನೇ ವಾರ್ಷಿಕೋತ್ಸವವನ್ನು ಆಚರಿಸಲು ಮಹಾರಾಷ್ಟ್ರದ ಪುಣೆಯಲ್ಲಿ ಬೃಹತ್ ಜನಸ್ತೋಮ ನೆರೆದಿತ್ತು. ಯುದ್ಧದ ನೆನಪಿಗಾಗಿ ಪ್ರತಿವರ್ಷ ಜನವರಿ ಒಂದರಂದು ಶೌರ್ಯದಿನ ಆಚರಿಸಲಾಗುತ್ತಿದೆ.
ಜನವರಿ 1, 1818 ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಒಕ್ಕೂಟದ ಪೇಶ್ವಾ ಬಣಗಳ ನಡುವೆ ನಡೆದ ಯುದ್ಧದಲ್ಲಿ ಬ್ರಿಟಿಷರ ಮಹಾರ್ ರೆಜಿಮೆಂಟ್ ಪೇಶ್ವೆಗಳ ಸೇನೆಯನ್ನು ಸೋಲಿಸಿ ಗೆಲುವು ದಾಖಲಿಸಿತ್ತು. ಈ ಯುದ್ಧವನ್ನು ಪೇಶ್ವೆಗಳ ದೌರ್ಜನ್ಯದ ವಿರುದ್ಧ ಮಹಾರ್ ಸಮುದಾಯದವರ ಗೆಲುವು ಎಂದೇ ಹೇಳಲಾಗುತ್ತದೆ. ನಂತರದ ದಿನಗಳಲ್ಲಿ ಈ ಯುದ್ಧವನ್ನು ಭೀಮಾ ಕೋರೆಗಾಂವ್ ಯುದ್ಧ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ.
ಕೋರೆಗಾಂವ್ ಭೀಮಾ ಆಚರಣೆ: ಕರ್ಣಿ ಸೇನೆ ಆಕ್ಷೇಪಕ್ಕೆ ದಲಿತ ಸಮುದಾಯ, ಕಾಂಗ್ರೆಸ್ನಿಂದ ತರಾಟೆ
ಪ್ರತಿವರ್ಷ ಯುದ್ಧದ ಗೆಲುವನ್ನು ಸಂಭಮಿಸಲು ದೇಶದ ಮೂಲೆ ಮೂಲೆಗಳಿಮದ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಕೋರೆಗಾಂವ್ ಭೀಮಾ ಗ್ರಾಮಕ್ಕೆ ಭೇಟಿ ನೀಡಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಾರೆ.
ಈ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾಡಳಿತ ಈ ಹಿಂದೆಯೇ ತಿಳಿಸಿತ್ತು. ಹೀಗಾಗಿ ಪುಣೆ-ಅಹಮದ್ನಗರ ಹೆದ್ದಾರಿಯಲ್ಲಿರುವ ಜಯಸ್ತಂಭ ಮತ್ತು ಸಮೀಪದ ಗ್ರಾಮಗಳಾದ ಕೋರೆಗಾಂವ್ ಭೀಮಾ ಮತ್ತು ವಧು ಬುದ್ರುಕ್ನಲ್ಲಿ ಸುಮಾರು 5,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಜಯಸ್ತಂಭಕ್ಕೆ ಜನರನ್ನು ಕರೆದೊಯ್ಯುವ ವಾಹನಗಳನ್ನು ಹೊರತುಪಡಿಸಿ ಪುಣೆ-ಅಹಮದ್ನಗರ ಹೆದ್ದಾರಿಯಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ಸಂಚಾರ ವ್ಯತ್ಯಯ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಡಿಸೆಂಬರ್ 30, 2020 ರಿಂದ ಜನವರಿ 2, 2021 ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144ರ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.
ಕಾರ್ಯಕ್ರಮದ ಸ್ಥಳದಲ್ಲಿ 1,500 ಸಂಚಾರಿ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಯಸ್ತಂಭದ ಸುತ್ತಲೂ ಸುಮಾರು 20 ವೈದ್ಯಕೀಯ ತಂಡಗಳು, 41 ಆಂಬ್ಯುಲೆನ್ಸ್ಗಳು, ಹೆಚ್ಚುವರಿ ಬೈಕ್ ಆಂಬ್ಯುಲೆನ್ಸ್ಗಳು ಮತ್ತು ಹಲವಾರು ಕಸ ಸಂಗ್ರಹಿಸುವ ವಾಹನಗಳನ್ನು ನಿಯೋಜಿಸಲಾಗಿದೆ. ಅನುಯಾಯಿಗಳಿಗಾಗಿ 300 ಕ್ಕೂ ಹೆಚ್ಚು ಪುಣೆ ಮಹಾನಗರ ಪರಿವಾಹನ್ ಮಹಾಮಂಡಲದ ಬಸ್ಗಳನ್ನು ನಿಯೋಜಿಸಲಾಗಿದೆ.
ಜನವರಿ 1, 2018 ರಂದು ಭೀಮಾ ಕೋರೆಗಾಂವ್ ಯುದ್ಧದ ದ್ವಿಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ ಒಬ್ಬರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು. ಪೊಲೀಸರು 162 ಜನರ ವಿರುದ್ಧ 58 ಪ್ರಕರಣಗಳನ್ನು ದಾಖಲಿಸಿದ್ದರು.
ಹೊಸ ವರ್ಷದ ದಿನದಂದು ಭೀಮಾ ಕೋರೆಗಾಂವ್ ಯುದ್ಧದ 200 ವರ್ಷಗಳ ಸ್ಮರಣಾರ್ಥ ಸಂಭ್ರಮಾಚರಣೆಗೆ ಗ್ರಾಮದ ಕಡೆಗೆ ಹೋಗುತ್ತಿದ್ದ ಕಾರುಗಳ ಮೇಲೆ ಕೆಲವರು ಕೇಸರಿ ಧ್ವಜಗಳೊಂದಿಗೆ ಕಲ್ಲು ತೂರಾಟ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಹಿಂದುತ್ವವಾದಿಗಳಾದ ಮಿಲಿಂದ್ ಎಕ್ಬೋಟೆ ಮತ್ತು ಸಂಭಾಜಿ ಭಿಡೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಗ್ರಾಮದ ದಲಿತ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿಸಿದ್ದರು.
2018 ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ, ವೈದ್ಯಕೀಯ ಕಾರಣಗಳಿಗಾಗಿ ಹೋರಾಟಗಾರ ಮತ್ತು ಕವಿ ಪಿ. ವರವರ ರಾವ್ ಅವರಿಗೆ ಆಗಸ್ಟ್ 10, 2022 ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ವರವರ ರಾವ್ ಅವರನ್ನು ಆಗಸ್ಟ್ 28, 2018 ರಂದು ಹೈದರಾಬಾದ್ನಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಗಿತ್ತು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪುಣೆ ಪೊಲೀಸರು ಜನವರಿ 8, 2018 ರಂದು ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಸೇರಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು, ಐತಿಹಾಸಿಕ ದಾಖಲೆಗಳ ಪ್ರಕಾರ, ಜನವರಿ 1, 1818 ರಂದು ಕೋರೆಗಾಂವ್ ಭೀಮಾದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡಿದ ಮಹಾರ್ ರೆಜಿಮೆಂಟ್ ಸೈನಿಕರ ನೆನಪಿಗಾಗಿ 1821 ರಲ್ಲಿ ಬ್ರಿಟಿಷ್ ಸರ್ಕಾರವು 'ವಿಜಯಸ್ತಂಭ'ವನ್ನು ನಿರ್ಮಿಸಿದೆ.