ಉಸ್ತಾದ್ ಬಿಸ್ಮಿಲ್ಲಾ ಶಹನಾಯಿ ಕದ್ದಿದ್ದು ಅವರ ಮೊಮ್ಮಗ !?
ವಾರಣಾಸಿ, ಜ. 11: 'ಭಾರತ ರತ್ನ' ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮನೆಯಿಂದ ಅವರು ನುಡಿಸುತ್ತಿದ್ದ ಶಹನಾಯಿಯನ್ನು ಅವರ ಮೊಮ್ಮಗನೇ ಕದ್ದಿದ್ದ ಎಂಬ ಅಚ್ಚರಿಯ ವಿಚಾರವೊಂದು ಹೊರಬಿದ್ದಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪ್ರಕರಣವನ್ನು ಬೇಧಿಸಲು ರಚಿಸಲಾಗಿದ್ದ ವಿಶೇಷ ತನಿಖಾ ದಳದ (ಎಸ್ ಟಿಎಫ್) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಲ್ಲೊಬ್ಬ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಜ್ರೇ ಹಸನ್ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಈತ ಬಿಸ್ಮಿಲ್ಲಾ ಖಾನ್ ಅವರ ನಾಲ್ಕು ಬೆಳ್ಳಿಯ ಶಹನಾಯಿಗಳನ್ನು ಕದ್ದಿದ್ದ. ಆನಂತರ, ಆತನ ಸಹಚರನೊಬ್ಬನ ಜತೆ ಸೇರಿ ಇವುಗಳಲ್ಲೊಂದನ್ನು ಬೆಳ್ಳಿ ವ್ಯಾಪಾರಿಗಳಿಗೆ ಮಾರಿದ್ದ. ಆ ಬೆಳ್ಳಿ ವ್ಯಾಪಾರಿಗಳು ಈ ಶಹನಾಯಿಯಲ್ಲಿನ ಬೆಳ್ಳಿಯನ್ನು ಕರಗಿಸಿ ಒಡವೆ ಮತ್ತಿತರ ವಸ್ತುಗಳನ್ನು ಮಾಡಲು ಈತನಲ್ಲಿ ಶಹನಾಯಿ ಕೊಂಡಿದ್ದರು. ಹಾಗಾಗಿ, ಅವರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಅಲ್ಲದೆ, ಇವರ ಕುಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಇಬ್ಬರು ಬೆಳ್ಳಿ ಅಂಗಡಿ ಮಾಲೀಕರನ್ನೂ ಬಂಧಿಸಲಾಗಿದೆ. ಇದೀಗ, ಪೊಲೀಸರ ಅತಿಥಿಯಾಗಿರುವ ಹಸನ್ ನ ಬಳಿಯಿದ್ದ ಮೂರು ಶಹನಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.