ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ?
ನವದೆಹಲಿ, ಸಪ್ಟೆಂಬರ್.25: ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಎರಡು ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಶುಕ್ರವಾರ ಭಾರತ್ ಬಂದ್ ನಡೆಸುವುದಕ್ಕೆ ಕರೆ ನೀಡಿವೆ.
ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ತಡೆ ನಡೆಸಲು ರೈತ ಪರ ಹೋರಾಟಗಾರರು ಮತ್ತು ರೈತ ಸಂಘಟನೆಗಳು ಮುಂದಾಗಿವೆ. ನವದೆಹಲಿಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಯುವ ಹಿನ್ನೆಲೆ ನೆರೆಯ ಹರಿಯಾಣ ಮತ್ತು ಉತ್ತರ ಪ್ರದೇಶದ ಗಡಿಪ್ರದೇಶ ಬಂದ್ ಮಾಡುವ ಸಾಧ್ಯತೆಯಿದೆ.
ಸೆಪ್ಟೆಂಬರ್ 25ರಂದು ಭಾರತ್ ಬಂದ್ ಆಚರಣೆಗೆ ರೈತ ಸಂಘ ಕರೆ
ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರಿ ಸಮಿತಿ, ಅಖಿಲ ಭಾರತ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಒಕ್ಕೂಟ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಅಖಿಲ ಭಾರತ ಕಾಂಗ್ರೆಸ್ ಕಮಿಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಟಿಆರ್ಎಸ್ ಸೇರಿದಂತೆ 18 ವಿರೋಧ ಪಕ್ಷಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ.
ರಾಷ್ಟ್ರೀಯ ಹೆದ್ದಾರಿ ತಡೆ, ರೈಲ್ವೆ ತಡೆ ಪ್ರತಿಭಟನೆಗಳು ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆಯನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಮಸೂದೆಗಳಿಂದ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೆ ಅಪಾಯ ಎದುರಾಗುವ ಆತಂಕ ರೈತರನ್ನು ಕಾಡುತ್ತಿದೆ. ಈ ಹಿನ್ನೆಲೆ ರೈತಾಪಿ ವರ್ಗ ಹೆಚ್ಚಾಗಿರುವ ರಾಜ್ಯಗಳಲ್ಲಿ ಭಾರತ್ ಬಂದ್ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಭಾರತ್ ಬಂದ್ ಹೋರಾಟವು ಯಾವ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ನಡೆಯಬಹುದು ಎನ್ನುವುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ನೋಡಿ.
ಹರಿಯಾಣ ಮತ್ತು ಪಂಜಾಬ್
ಕೃಷಿ ಸಂಬಂಧಿತ ಮಸೂದೆ ಜಾರಿ ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದಲ್ಲಿ ಕಿಸಾನ್ ಮಜದೂರ್ ಸಂಘರ್ಷ ಸಮಿತಿಯು ರೈಲ್ವೆ ತಡೆಗೆ ಕರೆ ನೀಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕೊವಿಡ್-19 ಶಿಷ್ಟಾಚಾರ ಉಲ್ಲಂಘನೆ ಮಾಡದಂತೆ ಪ್ರತಿಭಟನೆ ನಡೆಸುವುದಕ್ಕೆ ರೈತರಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. 144ರ ನಿಷೇಧಾಜ್ಞೆ ಉಲ್ಲಂಘಿಸಿದ್ದಲ್ಲಿ ಯಾವುದೇ ರೀತಿ ಎಫ್ಐಆರ್ ದಾಖಲಿಸಿಕೊಳ್ಳದಂತೆ ಸೂಚಿಸಿದ್ದಾರೆ.
ಎನ್ಡಿಎ ಮಿತ್ರಪಕ್ಷವಾಗಿರುವ ಶಿರೋಮಣಿ ಅಕಾಲಿ ದಳವು ಪಂಜಾಬ್ನಾದ್ಯಂತ ಮೂರು ಗಂಟೆಗಳ ಕಾಲ 'ಚಕ್ಕಾ ಜಾಮ್' ಘೋಷಿಸಿದೆ. ನೆರೆಯ ಹರಿಯಾಣದಲ್ಲಿ ಹೆದ್ದಾರಿ ತಡೆ ನಡೆಸಲು ಬಿಕೆಯು ಕರೆ ನೀಡಿದೆ.
ನವದೆಹಲಿ ಮತ್ತು ಉತ್ತರ ಪ್ರದೇಶ
ರೈತರ ಹೋರಾಟಕ್ಕೆ ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಬೆಂಬಲ ಸೂಚಿಸಿವೆ. ನವದೆಹಲಿ ಮತ್ತು ಎನ್ ಸಿಆರ್ ಗಡಿಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ರೈತ ಸಂಘಟನೆಗಳು ಮುಂದಾಗಿವೆ. ಉತ್ತರ ಪ್ರದೇಶದಲ್ಲಿ ಬಿಕೆಯು ಸಂಘಟನೆಯು ತನ್ನ ಗ್ರಾಮ, ತಾಲೂಕು ಮತ್ತು ಊರಿನ ಗಡಿಗಳನ್ನು ಬಂದ್ ಮಾಡುವುದಕ್ಕೆ ತೀರ್ಮಾನಿಸಿವೆ. ರೈತರ ಹೋರಾಟಕ್ಕೆ ಸ್ಥಳೀಯ ವ್ಯಾಪಾರಿಗಳು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಹಲವು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದೆ. ರೈತಾಪಿ ವರ್ಗದ ಸ್ವತಂತ್ರ್ಯ ಸಮಿತಿಯಾಗಿರುವ ಪಶ್ಚಿಮ ಬಂಗಾ ಖೇತ್ ಮಜದೂರ್ ಸಮಿತಿಯಲ್ಲಿರುವ ಶೇರು ಬೆಳೆಗಾರರು, ರೈತರು ಮತ್ತು ತೋಟದ ಕಾರ್ಮಿಕರು ಸಹ ಬಂದ್ಗೆ ಬೆಂಬಲ ನೀಡುತ್ತಿದ್ದಾರೆ. ಇತ್ತ ಮಹಾರಾಷ್ಟ್ರದಲ್ಲಿ 3 ಲಕ್ಷ ಸದಸ್ಯರನ್ನು ಒಳಗೊಂಡ ಅಖಿಲ ಭಾರತ ಕಿಸಾನ್ ಸಭಾ ಸಂಘಟನೆಯು ರಾಜ್ಯದ 21 ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸುವುದಕ್ಕೆ ತೀರ್ಮಾನಿಸಿದೆ.
ಕೇರಳ ಮತ್ತು ತಮಿಳುನಾಡು
ಕೃಷಿ ಸಂಬಂಧಿತ ಮಸೂದೆ ಜಾರಿ ವಿರೋಧಿಸಿ ಕೇರಳದಲ್ಲಿ ಸಂಯುಕ್ತ ಕರ್ಶಾಕ ಸಮಿತಿಯು ಕೇಂದ್ರ ಸರ್ಕಾರದ ಕಚೇರಿಗಳ ಎದುರು ಪ್ರತಿಭಟನೆ ನಡೆಸುವುದಕ್ಕೆ ತೀರ್ಮಾನಿಸಿದೆ. ರಾಜ್ಯದಲ್ಲಿರುವ 250 ಕೇಂದ್ರ ಸರ್ಕಾರದ ಕಚೇರಿಗಳ ಎದುರು ಹೋರಾಟ ನಡೆಸುವುದಕ್ಕೆ ಸಂಘಟನೆ ನಿರ್ಧರಿಸಿದೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಬಂದ್ ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಭಾರತ್ ಬಂದ್ ಇಲ್ಲ
ರಾಜ್ಯದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ಚಳುವಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕದ ಕರೆ ನೀಡಿದೆ. ಸೆಪ್ಟೆಂಬರ್ 25ರಂದು ಉದ್ದೇಶಿತ ಬಂದ್ ಹಿಂಪಡೆಯಲಾಗಿದೆ. ಸೆಪ್ಟೆಂಬರ್ 24ರಂದು ಕರ್ನಾಟಕದಲ್ಲಿ ಮಸೂದೆ ಮಂಡನೆಯಾದರೆ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಆಚರಿಸಲಾಗುವುದು, ಇಲ್ಲದಿದ್ದರೆ ರಸ್ತೆ ತಡೆ ಹಾಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.