ರಾಮಜನ್ಮಭೂಮಿ ನಕ್ಷೆ ಹರಿದು ಗೊಗೊಯ್ ಕೆಂಗಣ್ಣಿಗೆ ಗುರಿಯಾದ ಮುಸ್ಲಿಂ ಪರ ವಕೀಲ
ನವದೆಹಲಿ, ಅಕ್ಟೋಬರ್ 16: ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಅಂತಿಮ ವಿಚಾರಣೆ ನಡೆಯುತ್ತಿದ್ದು, ಮುಸ್ಲಿಂ ಪರ ವಕೀಲರೊಬ್ಬರ ವರ್ತನೆ ಮುಖ್ಯ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದ ವಕೀಲ ರಾಜೀವ್ ಧವನ್, ರಾಮಜನ್ಮಸ್ಥಾನದ ನಕ್ಷೆಯನ್ನು ಕೋರ್ಟಿನಲ್ಲೇ ಹರಿದುಹಾಕುವ ಮೂಲಕ ಸಿಜೆಐ ರಂಜನ್ ಗೊಗೊಯ್ ಅವರ ಕೆಂಗಣ್ಣಿಗೆ ಗುರಿಯಾದರು.
Ayodhya Case Final Hearing Live Updates: ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣ ಸುಪ್ರೀಂನಲ್ಲಿ ಅಂತಿಮ ವಿಚಾರಣೆ
ಈ ರೀತಿ ವರ್ತನೆ ಕೋರ್ಟಿನಲ್ಲಿ ತಕ್ಕುದಲ್ಲ. ಇದು ಮುಂದುವರಿದರೆ ನಾನೇ ಕೋರ್ಟಿನಿಂದ ಆಚೆ ಹೋಗುತ್ತೇನೆ ಎಂದು ರಂಜನ್ ಗೊಗೊಯ್ ಈ ಸಂದರ್ಭದಲ್ಲಿ ರಾಜೀವ್ ಧವನ್ ಅವರಿಗೆ ಎಚ್ಚರಿಕೆ ನೀಡಿದರು.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ಅಖಿಲ ಭಾರತ ಹಿಂದು ಮಹಾಸಭಾವು ವಿಚಾರಣೆಯ ಸಂದರ್ಭದಲ್ಲಿ ರಾಮಜನ್ಮಭೂಮಿಗೆ ಸಂಬಂಧಿಸಿದ ನಕ್ಷೆ ಮತ್ತಿತರ ಕಡಿತಗಳನ್ನು ನೀಡಿತ್ತು. ಅದನ್ನು ರಾಜೀವ್ ಧವನ್ ಹರಿದುಹಾಕಿದ್ದರು.
ವಿಕಾಸ್ ಸಿಂಗ್ ನೀಡಿದ ದಾಖಲೆ
ಕುನಾಲ್ ಕಿಶೋರ್ ಎಂಬುವವರು ಬರೆದ 'ಅಯೋಧ್ಯೆ ರಿವಿಸಿಟೆಡ್' ಎಂಬ ಪುಸ್ತವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟಿಗೆ ನೀಡಿದರು. ಈ ದಾಖಲೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧನವ್ ಅವರು ಬಲವಾಗಿ ಖಂದಿಸಿದರು. ಅವರಿಗೆ ನೀಡಲಾಗಿದ್ದ ಈ ಪುಸ್ತಕದ ಹಾಳೆಗಳನ್ನು ಹರಿಯುವ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ರಂಜನ್ ಗೊಗೊಯ್ ಕೆಂಗಣ್ಣು
ಈ ವರ್ತನೆಯಿಂದ ತೀವ್ರವಾಗಿ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ಆ ಹಾಳೆಗಳನ್ನು ಇನ್ನೂ ಹರಿದು, ಚೂರು ಚೂರು ಮಾಡಿಬಿಡಿ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು. ಜೊತೆಗೆ ಕೋರ್ಟಿನಲ್ಲಿ ಇಂಥ ವರ್ತನೆ ಸಹ್ಯವಲ್ಲ, ಇದು ಮುಂದುವರಿದರೆ ನಾನೇ ಇಲ್ಲಿಂದ ಹೊರಹೋಗುತ್ತೇನೆ ಎಂದರು.
ಕೋರ್ಟಿನ ಘನತೆಗೆ ಧಕ್ಕೆ ತರೊಲ್ಲ
"ನಾವು ನ್ಯಾಯಾಲಯದ ಘನತೆಗೆ ಧಕ್ಕೆ ತರುವಂಥ ವರ್ತನೆಯನ್ನು ಎಂದಿಗೂ ಮಾಡುವುದಿಲ್ಲ. ನಾವು ಕೋರ್ಟಿನ ಘನತೆಯನ್ನು ಕಾಪಾಡುತ್ತೇನೆ. ನಮಗೆ ನ್ಯಾಯಾಲಯದ ಬಗ್ಗೆ ಸಾಕಷ್ಟು ಗೌರವವಿದೆ" ಎಂದು ಈ ಘಟನೆಗೆ ಹಿಂದು ಮಹಾಸಭಾ ಪ್ರತಿಕ್ರಿಯೆ ನೀಡಿತು.
ಇಂದು ವಿಚಾರಣೆ ಅಂತ್ಯ
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 6 ರಿಂದ ಪ್ರತಿದಿನದ ವಿಚಾರಣೆ ಆರಂಭವಾಗಿದ್ದು ಇಂದು ವಿಚಾರಣೆ ಅಂತ್ಯಗೊಳ್ಳಲಿದೆ.