ಉತ್ತರ ಪ್ರದೇಶದ ಆಮ್ ಆದ್ಮಿ ಕಚೇರಿ ಮೇಲೆ ದಾಳಿ
ಲಕ್ನೋ, ಜ.8 : ಕಾಶ್ಮೀರದಲ್ಲಿ ಸೇನೆ ನಿಯೋಜನೆ ಕುರಿತು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷಣ್ ನೀಡಿರುವ ಹೇಳಿಕೆ ಖಂಡಿಸಿ ಪಕ್ಷದ ಉತ್ತರ ಪ್ರದೇಶದ ಕಚೇರಿ ಮೇಲೆ ಸುಮಾರು 40 ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಪ್ರಶಾಂತ್ ಭೂಷಣ್ ಕ್ಷಮೆ ಯಾಚಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಕೌಶಂಬಿಯಲ್ಲಿರುವ ನಲ್ಲಿರುವ ಆಮ್ ಆದ್ಮಿ ಪಕ್ಷದ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಕಾರ್ಯಕರ್ತರು ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ವಕೀಲ ಪ್ರಶಾಂತ್ ಭೂಷನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಮತ್ತು ವಕೀಲ ಪ್ರಶಾಂತ್ ಭೂಷಣ್ ಕಾಶ್ಮೀರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಾಶ್ಮೀರದಲ್ಲಿ ಸೇನಾ ನಿಯೋಜನೆ ಬಗ್ಗೆ ಪ್ರಜಾಭಿಮತದ ಮೂಲಕ ತೀರ್ಮಾನ ತೆಗೆದುಕೊಳ್ಳಬೇಕೆಂದು ಅವರು ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ವತಃ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇನೆ ನಿಯೋಜನೆ ಮಾಡಲು ಪ್ರಜಾಭಿಮತ ಕೇಳಬೇಕಾಗಿಲ್ಲ. ಭದ್ರತೆ ಒದಗಿಸುವುದು ಕಾನೂನು ನಿಯಮದ ಪ್ರಕಾರ ಎಂದು ಹೇಳಿದ್ದರು.
ಆಂತರಿಕ ಭದ್ರತೆಗೆ ಬೆದರಿಕೆ ಇದ್ದರೆ ಮಾತ್ರ ದೇಶದಲ್ಲಿ ಸೇನೆ ನಿಯೋಜನೆ ಮಾಡಬೇಕಾಗುತ್ತದೆ. ಈ ಬಗ್ಗೆ ಪ್ರಜಾಭಿಮತ ಸಂಗ್ರಹಿಸಬೇಕಾದ ಅಗತ್ಯವಿಲ್ಲ. ಅಲ್ಲಿನ ಜನರ ಭಾವನೆಗಳಿಗೂ ನಾವು ಮನ್ನಣೆ ನೀಡಬೇಕಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದರು. ಬಿಜೆಪಿ ಮುಖಂಡರು ಸಹ ಪ್ರಶಾಂತ್ ಭೂಷಣ್ ಹೇಳಿಕೆ ಖಂಡಿಸಿದ್ದರು.
ಬುಧವಾರ ಪ್ರಶಾಂತ್ ಭೂಷಣ್ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಮ್ ಆದ್ಮಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಪಿಠೋಪಕರಣಗಳನ್ನು ಮುರಿದು ಹಾಕಿರುವ ಕಾರ್ಯಕರ್ತರು, ಪಕ್ಷದ ದಾಖಲೆಗಳನ್ನು ನಾಶ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications