2020ರ ಹೊತ್ತಿಗೆ ಎಂಟಿಎಂ, ಕಾರ್ಡುಗಳು ನಿರುಪಯುಕ್ತ !
ಬೆಂಗಳೂರು, ಜ. 8: ಕೇಂದ್ರ ಸರ್ಕಾರದ ಅಪನಗದೀಕರಣ ನಿರ್ಧಾರದ ಹಿನ್ನೆಲೆಯಲ್ಲಿ ಹಠಾತ್ ಏರಿಕೆ ಕಂಡಿರುವ ನಗದು ರಹಿತ ಪಾವತಿ ಪದ್ಧತಿಯಿಂದಾಗಿ 2020ರ ಹೊತ್ತಿಗೆ ಎಂಟಿಎಂಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳು ನಿರುಪಯುಕ್ತ ಎನಿಸಲಿವೆ ಎಂದು ರಾಷ್ಟ್ರೀಯ ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್ ನ ಅಂಗವಾಗಿ ಆಯೋಜಿಸಲಾಗಿರುವ ಯುವ ಪ್ರವಾಸಿ ಭಾರತೀಯ ದಿವಸ್ ವಿಭಾಗದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ ಈ ವಿಷಯ ತಿಳಿಸಿದರು.
ಅಪನಗದೀಕರಣ ನಂತರದ ಕಾಲಘಟ್ಟದಲ್ಲಿ ಭಾರತವು ಹೊಸ ಹೊಸ ಆರ್ಥಿಕ ತಂತ್ರಜ್ಞಾನಗಳನ್ನು ಹಾಗೂ ಸಾಮಾಜಿಕ ಸ್ತರಗಳಲ್ಲಿ ಡಿಜೆಟಲ್ ಪೇಮೆಂಟ್ ಕುರಿತಂತೆ ಹೆಚ್ಚೆಚ್ಚು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. ಇದು ನಗದು ಮುಕ್ತ ಸಮಾಜದತ್ತ ದೈತ್ಯ ಹೆಜ್ಜೆ ಇಡಲು ಸಹಕಾರಿಯಾಗಲಿದೆ ಎಂದರು.
ನಗದು ರಹಿತ ಪಾವತಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳಲಿರುವ ಹಲವಾರು ಯೋಜನೆಗಳು 2020ರ ಹೊತ್ತಿಗೆ ಸರ್ವಪ್ಯಾಪಿಯಾಗಲಿವೆ. ಇದರ ಫಲವಾಗಿ ಆಧಾರ್ ಕಾರ್ಡುಗಳ ಮೂಲಕ, ಬೆರಳ ಗುರುತಿನ ಮೂಲಕ ಕೇವಲ 30 ಸೆಕೆಂಡ್ ಗಳೊಳಗೆ ಪಾವತಿಸುವ ಸೌಲಭ್ಯ ದೊರೆಯಲಿದೆ. ಆಗ, ಎಟಿಎಂ ಹಾಗೂ ನಮ್ಮ ಬಳಿಯಿರುವ ಕ್ರೆಡಿಟ್, ಡೆಬಿಟ್ ಕಾರ್ಡುಗಳು ನಿರುಪಯುಕ್ತ ಎನಿಸಲಿವೆ ಎಂದು ಅವರು ವಿವರಿಸಿದರು.
ಇದೇ ವೇಳೆ, ಗ್ರಾಮೀಣ ಭಾಗದ ಜನರಿಗೆ ನಗದು ರಹಿತ ಪಾವತಿಗಳ ತಂತ್ರಜ್ಞಾನ ಹಾಗೂ ವಿಧಾನಗಳು ಕ್ಲಿಷ್ಟಕರವಾಗಿರುವುದನ್ನು ಕೇಂದ್ರ ಸರ್ಕಾರ ಗಮನಿಸಿದೆ. ಈ ತೊಡಕನ್ನು ನಿವಾರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ, ಗ್ರಾಮೀಣ ಪ್ರದೇಶದ ಜನರಿಗೆ ನಗದು ರಹಿತ ಪಾವತಿಯ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.