ವಾಜಪೇಯಿ ಸ್ಥಿತಿ ಇನ್ನೂ ಗಂಭೀರ : ವೈದ್ಯರ ಹೇಳಿಕೆಗೆ ಎಲ್ಲರ ಕಾತರ
ನವದೆಹಲಿ, ಆಗಸ್ಟ್ 16 : ಭಾರತ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ತೀರ ವಿಷಮಿಸಿದ್ದು, ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯರು ಹೆಲ್ತ್ ಬುಲೆಟಿನ್ ನೀಡಲಿದ್ದಾರೆ.
ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ 'ಅಜಾತಶತ್ರು' ವಾಜಪೇಯಿ
ಇದೀಗ ಬಂದ ಸುದ್ದಿ : 36 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಜೆ 5.05 ಗಂಟೆಗೆ ಕೊನೆಯುಸಿರೆಳೆದರು.
ಹಿಂದಿನ ಸುದ್ದಿ : ಕೃತಕ ಉಸಿರಾಟದ ಸಾಧನವನ್ನು ಅಳವಡಿಸಿರುವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ಆಸ್ಪತ್ರೆಯ ವೈದ್ಯರು ತಮ್ಮ ಸಾಮರ್ಥ್ಯವನ್ನು ಮೀರಿ ವಾಜಪೇಯಿ ಅವರ ಆರೋಗ್ಯ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, 93 ವರ್ಷದ ಹಿರಿಯ ನಾಯಕರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.
Live Updates: ವಿಷಮಿಸಿದ ಅಟಲ್ ಆರೋಗ್ಯ, ಯಾವುದೇ ಕ್ಷಣದಲ್ಲಿ ಹೆಲ್ತ್ ಬುಲೆಟಿನ್
ಸಹಸ್ರಾರು ಅಭಿಮಾನಿಗಳು ಏಮ್ಸ್ ಆಸ್ಪತ್ರೆಯ ಮುಂದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸದ ಮುಂದೆ ಬೆಳಗಿಂದಲೂ ನೆರೆದಿದ್ದು, ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ದೇಶದಾದ್ಯಂತ ದೇಗುಲಗಳಲ್ಲಿ, ಮನೆಮನೆಗಳಲ್ಲಿ ಅಭಿಮಾನಿಗಳು ವಾಜಪೇಯಿ ಅವರು ಶೀಘ್ರ ಗುಣಮುಖರಾಗಲೆಂದು ಹೋಮಹವನ, ಪೂಜೆ ಸಲ್ಲಿಸುತ್ತಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು ಹಿಂದಿರುಗಿದ್ದಾರೆ.
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ
ಮುಂಜಾಗ್ರತಾ ಕ್ರಮವಾಗಿ ಏಮ್ಸ್ ಆಸ್ಪತ್ರೆಯ ಎದುರಿಗೆ ಭಾರೀ ಬಂದೋಬಸ್ತ್ ಆಯೋಜಿಸಲಾಗಿದೆ. ಅಭಿಮಾನಿಗಳು ಕಂಬನಿ ಮಿಡಿಯುತ್ತ ಆಸ್ಪತ್ರೆಯೆದಿರು ನೆರೆದಿದ್ದಾರೆ. ವಾಜಪೇಯಿ ಅವರ ಕುಟುಂಬಸ್ಥರನ್ನು ಕೂಡ ಆಸ್ಪತ್ರೆಗೆ ಕರೆಯಿಸಿಕೊಳ್ಳಲಾಗಿದೆ. ಆದರೆ, ಯಾರಿಗೂ ವಾಜಪೇಯಿ ಆರೋಗ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.
ಕೆಲವು ನಾಯಕರು ಅಟಲ್ ಅವರು ತೀರಿಕೊಂಡಿದ್ದಾರೆಂದು ಟ್ವೀಟಿಸಿ, ಹೇಳಿಕೆ ನೀಡಿ ಪಕ್ಷಕ್ಕೆ ಭಾರೀ ಮುಜುಗರವನ್ನೂ ತಂದಿದ್ದಾರೆ. ಕೆಲ ಮಾಧ್ಯಮಗಳು ಕೂಡ ಇದಕ್ಕೆ ಹೊರತಾಗಿಲ್ಲ. ವಸ್ತುಸ್ಥಿತಿ ಏನೆಂದರೆ, ಅಟಲ್ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ.