ವಾಜಪೇಯಿ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ: ಏಮ್ಸ್
ನವ ದೆಹಲಿ, ಜೂನ್ 13: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಕಳೆದ 48 ಗಂಟೆಗಳಲ್ಲಿ ಗಮನಾರ್ಹ ರೀತಿಯಲ್ಲಿ ಚೇತರಿಕೆ ಕಂಡಿದೆ ಎಂದು ನವ ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಣದೀಪ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಏಮ್ಸ್ ನಿರ್ದೇಶಕ ಡಾ.ರಣದೀಪ್ ಮಾಹಿತಿ ನೀಡಿದ್ದು, ಅವರು ಇನ್ನೂ ಕೆಲವು ದಿನ ಆಸ್ಪತ್ರೆಲ್ಲಿ ಇರಬೇಕಾಗುತ್ತದೆ, ಆದರೆ ಅವರ ಆರೋಗ್ಯ ಸ್ಥಿತಿ ಉತ್ತಮಗೊಂಡಿದೆ. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಾಜಪೇಯಿ ಕುಶಲ ವಿಚಾರಿಸಿದ ಮೋದಿ ಮತ್ತು ರಾಹುಲ್ ಗಾಂಧಿ
ಜೂನ್ 11ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾದ ಕಾರಣ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂತ್ರನಾಳ ಸಮಸ್ಯೆ ಇದೆ ಎಂದು ವೈದ್ಯರು ಗುರುತಿಸಿದ್ದರು.
ಚಿಕಿತ್ಸೆ ನಂತರ ಅಟಲ್ಜೀ ಅವರ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿರುವ ವೈದ್ಯ ರಣದೀಪ್, ಅವರ ಹೃದಯ ಬಡಿತ, ಉಸಿರಾಟ, ರಕ್ತದೊತ್ತಡ ಎಲ್ಲವೂ ಮಾಮೂಲಿನಂತಿದ್ದು ಇನ್ನು ಕೆಲವೇ ದಿನಗಳಲ್ಲಿ ಅವರು ಸಂಪೂರ್ಣ ಗುಣಮುಖಲಾಗಲಿದ್ದಾರೆ ಎಂದು ವೈದ್ಯರು ಹೇಳಿದರು.
ವಾಜಪೇಯಿಗೆ ಮೂತ್ರನಾಳ ಸೋಂಕು, ಆರೋಗ್ಯ ಸ್ಥಿರ: ಏಮ್ಸ್ ಆಸ್ಪತ್ರೆ
ಅಟಲ್ಜೀ ಅವರು ಆಂಟಿಬಯೋಟಿಕ್ಸ್ ಮತ್ತು ಕೃತಕ ಉಸಿರಾಟ ನೀಡಲಾಗಿದೆ ಎಂಬುದನ್ನು ಅಲ್ಲಗಳೆದ ವೈದ್ಯ ರಣದೀಪ್ ಅವರು, ಅಟಲ್ಜೀ ಅವರು ಯಾವುದೇ ಬಾಹ್ಯ ವೈದ್ಯೋಪಕರಣಗಳು ಅಥವಾ ಆಂಟಿಬಯೋಟಿಕ್ಸ್ ಸಹಾಯವಿಲ್ಲದೆ ಉಸಿರಾಟ ನಡೆಸುತ್ತದ್ದಾರೆ ಎಂದು ಸ್ಪಷ್ಟಪಡಿಸಿದರು.
93 ವರ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2009ರಿಂದಲೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.