ಸೋನಿಯಾ ಗಾಂಧಿ ಭೋಜನ ಕೂಟದಲ್ಲಿ 20 ಪಕ್ಷದ ನಾಯಕರು!
ನವದೆಹಲಿ, ಮಾರ್ಚ್ 14: ಯುಪಿಎ(ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಿಯನ್ಸ್) ಚೇರ್ ಪರ್ಸನ್ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಸುಮಾರು 20 ಪಕ್ಷದ ನಾಯಕರು ಭಾಗವಹಿಸಿದ್ದರು.
ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಎರಡನೇ ಬಾರಿ ನಡೆದ ಭೋಜನ ಕೂಟ ಇದಾಗಿದ್ದು, 2019 ರ ಲೋಕಸಭಾ ಚುನಾವಣೆಗಾಗಿ ಯುಪಿಎ ಮೈತ್ರಿಕೂಟ ನಡೆಸುತ್ತಿರುವ ಹರಸಾಹಸ ಈ ಮೂಲಕ ವ್ಯಕ್ತವಾಗುತ್ತಿದೆ.
"ನಮ್ಮೆಲ್ಲರ ಗುರಿ ಬಿಜೆಪಿಯನ್ನು ಕಿತ್ತೊಗೆಯುವುದು. ಅದಕ್ಕಾಗಿ ನಮ್ಮ ನಡುವಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನೆಲ್ಲ ಬಿಟ್ಟು ಒಂದಾಗೋಣ" ಎಂದು ಸೋನಿಯಾ ಗಾಂಧಿ ಕರೆನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶರದ್ ಪವಾರ್ (ಎನ್ ಸಿಪಿ), ರಾಮ್ ಗೋಪಾಲ್ ಯಾದವ್(ಎಸ್ಪಿ), ಶರದ್ ಯಾದವ್(ಎಚ್ ಟಿಪಿ), ಸುದೀಪ್ ಬಂಡೋಪಾಧ್ಯಾಯ(ಟಿಎಂಸಿ), ಬದ್ರುದ್ದಿನ್ ಅಜ್ಮಲ್(ಎಐಯುಡಿಎಫ್), ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ(ಆಅರ್ ಜೆಡಿ), ಕನ್ನಿಮೋಳಿ(ಡಿಎಂಕೆ), ಜಿತನ್ ರಾಮ್ ಮಂಜ್ಹಿ(ಎಚ್ ಎಎಂ) ಮುಂತಾದ ಗಣ್ಯರು ಭೋಜನ ಕೂಟದಲ್ಲಿ ಭಾಗವಹಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಚೇರ್ ಪರ್ಸನ್ ಸೋನಿಯಾ ಗಾಮಧಿ ಅವರು ಆಯೋಜಿಸಿದ್ದ ಭೋಜನ ಕೂಟ ಭಳ ಚೆನ್ನಾಗಿತ್ತು. ವಿವಿಧ ರಾಜಕೀಯ ಪಕ್ಷದ ಸದಸ್ಯರನ್ನು ಅನೌಪಚಾರಿಕವಾಗಿ ಭೇಟಿಯಾಗಿ ಅವರೊಂದಿಗೆ ಬಂಧ ಬೆಸೆಯುವಲ್ಲಿ ಇದು ಸಹಕಾರಿಯಾಯಿತು. ಹಲವು ರಾಜಕೀಯ ವಿಷಯಗಳ ಕುರಿತು ಚರ್ಚೆಯಾಯಿತು. ಆದರೆ ಅದಕ್ಕಿಂತ ಹೆಚ್ಚಾಗಿ ಈ ಭೇಟಿಯಿಂದ ಸಾಕಷ್ಟು ಧನಾತ್ಮಕ ಶಕ್ತಿ ಮೂಡಿತು" ಎಂದಿದ್ದರು.
ಒಟ್ಟಿನಲ್ಲಿ ಸುಮಾರು 20 ಕ್ಕೂ ಹೆಚ್ಚು ಪಕ್ಷಗಳು ಒಂದಾಗಿ ಎನ್ ಡಿಎ ಸರ್ಕಾರದ ವಿರುದ್ಧ ಸಮರ ಸಾರಿರುವುದನ್ನು ಬಿಜೆಪಿ ನಿರ್ಲಕ್ಷ್ಯಿಸುವಂತಿಲ್ಲ!












Click it and Unblock the Notifications